ಸೋನಿಯಾ ಅಳಿಯ ವಾದ್ರಾಗೆ ಅನಾರೋಗ್ಯ; ಆರು ವಾರಗಳ ಕಾಲ ವಿದೇಶದಲ್ಲಿ ಚಿಕಿತ್ಸೆಗೆ ದೆಹಲಿ ಕೋರ್ಟ್ ಅನುಮತಿ
ನವದೆಹಲಿ, ಜೂನ್ 3: ಅನಾರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಆರು ವಾರಗಳ ಕಾಲ ವಿದೇಶಕ್ಕೆ ತೆರಳುವುದಕ್ಕೆ ಅನುಮತಿ ಕೇಳಿದ್ದ ಅಕ್ರಮ ಹಣ ವರ್ಗಾವಣೆ ಆರೋಪಿ- ಉದ್ಯಮಿ ರಾಬರ್ಟ್ ವಾದ್ರಾಗೆ ದೆಹಲಿ ಕೋರ್ಟ್ ಅನುಮತಿ ನೀಡಿದೆ. ಪ್ರಯಾಣದ ವೇಳಾಪಟ್ಟಿ ನೀಡುವಂತೆ ಕೇಳಿರುವ ಕೋರ್ಟ್, ಗಡುವು ಮುಗಿಯುವ ಮುನ್ನ ಭಾರತಕ್ಕೆ ಹಿಂತಿರುಗುವಂತೆ ಹೇಳಿದೆ.
ಯುಎಸ್ ಹಾಗೂ ನೆದರ್ ಲ್ಯಾಂಡ್ಸ್ ಗೆ ತೆರಳಲು ಅನುಮತಿ ನೀಡಲಾಗಿದೆ. ರಾಬರ್ಟ್ ವಾದ್ರಾರ ವಕೀಲರಾದ ಕೆ.ಟಿ.ಎಸ್.ತುಳಸಿ ಮಾತನಾಡಿ, ಲಂಡನ್ ನಲ್ಲಿ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆಯ ತನಿಖೆ ನಡೆಸುತ್ತಿರುವುದರಿಂದ ರಾಬರ್ಟ್ ವಾದ್ರಾ ಅಲ್ಲಿಗೆ ಹೋಗುವುದಿಲ್ಲ. ಆದ್ದರಿಂದ ಅಲ್ಲಿಗೆ ತೆರಳಲು ಆಕ್ಷೇಪಿಸಲಾಗಿದೆ ಎಂದಿದ್ದಾರೆ .
ನಿರೀಕ್ಷಣಾ ಜಾಮೀನು ರದ್ದು : ರಾಬರ್ಟ್ ವಾದ್ರಾಗೆ ಹೈಕೋರ್ಟ್ ನೋಟೀಸ್
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ವಕೀಲರಾದ ನಿತೇಶ್ ರಾಣಾ ಅವರು ತನಿಖಾ ಸಂಸ್ಥೆ ಪರವಾಗಿ ವಾದ ಮಂಡಿಸುತ್ತಿದ್ದಾರೆ. ಆರೋಗ್ಯ ಸಮಸ್ಯೆ ಇದ್ದು, ಚಿಕಿತ್ಸೆ ಪಡೆಯುವುದಕ್ಕೆ ಯುಕೆ ಮತ್ತು ಇತರ ದೇಶಗಳಿಗೆ ತೆರಳಲು ಅನುಮತಿ ನೀಡಬೇಕು ಎಂದು ರಾಬರ್ಟ್ ವಾದ್ರಾ ಮನವಿ ಸಲ್ಲಿಸಿದ್ದರು.
ರಾಬರ್ಟ್ ವಾದ್ರಾ ಮಂಗಳವಾರದಂದು ಮತ್ತೆ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲಿದ್ದಾರೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ವಿರುದ್ಧ ಲಂಡನ್ ನಲ್ಲಿ 1.9 ಮಿಲಿಯನ್ ಪೌಂಡ್ ನ ಆಸ್ತಿ ಖರೀದಿಗೆ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪ ಇದೆ.
ಮೋದಿ ಭರ್ಜರಿ ಗೆಲುವು ಕಾಣುತ್ತಿದ್ದಂತೆ 'ಶೆಹೆನ್ ಶಾ' ವಾದ್ರಾಗೆ ಸಂಕಷ್ಟ
ಆದರೆ, ಅಕ್ರಮವಾಗಿ ವಿದೇಶಿ ಆಸ್ತಿ ಹೊಂದಿದ ಆರೋಪವನ್ನು ವಾದ್ರಾ ನಿರಾಕರಿಸಿದ್ದಾರೆ. ಇದು ತಮ್ಮ ವಿರುದ್ಧದ ರಾಜಕೀಯ ಪಿತೂರಿ ಎಂದಿದ್ದು, ಅದಕ್ಕಾಗಿ ತನ್ನ ವಿರುದ್ಧ ಸಲ್ಲದ ಆರೋಪ ಮಾಡಲಾಗುತ್ತಿದೆ ಎಂಬ ಸಮರ್ಥನೆ ನೀಡಿದ್ದಾರೆ. ಕಳೆದ ಬಾರಿ ಅನಾರೋಗ್ಯದ ಕಾರಣ ನೀಡಿ, ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿರಲಿಲ್ಲ. ಕಳೆದ ಗುರುವಾರದಂದು ಐದು ತಾಸುಗಳ ಕಾಲ ರಾಬರ್ಟ್ ವಾದ್ರಾರನ್ನು ವಿಚಾರಣೆ ಮಾಡಿದ ಜಾರಿ ನಿರ್ದೇಶನಾಲಯ, ಹೇಳಿಕೆಗಳನ್ನು ದಾಖಲಿಸಿತ್ತು.
ಇನ್ನು ವಾದ್ರಾ ಟ್ವೀಟ್ ಮಾಡಿ, ಈ ತನಕ ಹನ್ನೊಂದು ಬಾರಿ ತನಿಖಾ ಸಂಸ್ಥೆ ಎದುರು ಹಾಜರಾಗಿದ್ದೇನೆ. ಎಪ್ಪತ್ತು ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾಗಿ ತಿಳಿಸಿದ್ದರು.