ಕಳೆದ ವರ್ಷ ಕೊರೊನಾಗಿಂತ ರಸ್ತೆ ಅಪಘಾತದಲ್ಲಿ ಮೃತಪಟ್ಟವರೇ ಹೆಚ್ಚು: ಗಡ್ಕರಿ
ನವದೆಹಲಿ, ಮಾರ್ಚ್ 18: ಕಳೆದ ವರ್ಷ ಕೊರೊನಾಸೋಂಕಿನಿಂದ ಮೃತಪಟ್ಟವರಿಗಿಂತ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರೇ ಹೆಚ್ಚು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಲೋಕಸಭೆಯಲ್ಲಿ ಇಂದು ಮಾತನಾಡಿದ ಅವರು, ಸರ್ಕಾರವು ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ಕುರಿತು ಕೂಡ ಗಮನಹರಿಸುತ್ತಿದೆ, ಏಕೆಂದರೆ ಕಳೆದ ವರ್ಷ ಕೊರೊನಾವೈರಸ್ನಿಂದ ಮೃತಪಟ್ಟಿರುವುದಕ್ಕಿಂತ ರಸ್ತೆ ಅಪಘಾತಕ್ಕೆ ಹೆಚ್ಚು ಮಂದಿ ಬಲಿಯಾಗಿದ್ದಾರೆ.
ವಾಹನ ಗುಜರಿ ನೀತಿ: ಯಾವ ವಾಹನದ ನವೀಕರಣಕ್ಕೆ ಎಷ್ಟು ಶುಲ್ಕ?
ಕಳೆದ ಒಂದು ವರ್ಷದಲ್ಲಿ 1.5 ಲಕ್ಷ ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಹಾಗೆಯೇ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 1.46 ಲಕ್ಷದಷ್ಟಿದೆ. ರಸ್ತೆ ಅಪಘಾತದಲ್ಲಿ ಮೃತಪಟ್ಟವರಲ್ಲಿ 18-35 ವರ್ಷದವರೇ ಹೆಚ್ಚಿದ್ದಾರೆ ಎಂದು ಹೇಳಿದ್ದಾರೆ.
ಫಿಟ್ನೆಸ್ ಪ್ರಮಾಣ ಪತ್ರ ಪಡೆಯುವುದಕ್ಕೆ ಅನರ್ಹವಾಗುವ ಹಳೆ ವಾಹನಗಳ ವಿಲೇವಾರಿಗಾಗಿ ಹೊಸ ನೀತಿಯನ್ನು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ.
"15 ವರ್ಷಗಳ ನಂತರ ವಾಣಿಜ್ಯ ವಾಹನಗಳು ಹೊಸ ನೋಂದಣಿ ಪ್ರಮಾಣಪತ್ರ ಪಡೆಯುವುದಕ್ಕೆ ವಿಫಲವಾದಲ್ಲಿ ಅವುಗಳ ನೋಂದಣಿಯನ್ನು ರದ್ದುಗೊಳಿಸಲಾಗುತ್ತದೆ. 20 ವರ್ಷಗಳ ಬಳಿಕ ವಾಹನಗಳಿಗೆ ಪ್ರಮಾಣಪತ್ರ ಲಭ್ಯವಾಗದೇ ಇದ್ದಲ್ಲಿ ಅವುಗಳ ನೋಂದಣಿಯನ್ನು ರದ್ದುಗೊಳಿಸಲಾಗುತ್ತದೆ" ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಹಳೆಯ ವಾಹನಗಳನ್ನು ವಿಲೇವಾರಿ ಮಾಡುವ ಮಾಲಿಕರಿಗೆ ಬಲವಾದ ಪ್ರೋತ್ಸಾಹ ಯೋಜನೆಗಳು ಲಭ್ಯವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ವಿಲೇವಾರಿ ಪ್ರಮಾಣಪತ್ರದೊಂದಿಗೆ ಹೊಸ ವಾಹನಗಳನ್ನು ಖರೀದಿಸುವವರಿಗೆ ಶೇ.5 ರಷ್ಟು ರಿಯಾಯಿತಿ ನೀಡುವುದಕ್ಕೆ ಎಲ್ಲಾ ವಾಹನ ತಯಾರಕರಿಗೆ ಶಿಫಾರಸ್ಸನ್ನು ಕಳಿಸಲಾಗಿದೆ ಎಂದೂ ಸಚಿವರು ಸದನಕ್ಕೆ ಮಾಹಿತಿ ನೀಡಿದ್ದಾರೆ.
ಹಳೆಯ, ದೋಷಯುಕ್ತ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಿ, ವಾಹನಮಾಲಿನ್ಯವನ್ನು ಕಡಿಮೆ ಮಾಡುವುದು, ಇಂಧನ ಕ್ಷಮತೆಯನ್ನು ಹೆಚ್ಚಿಸುವುದು ಈ ನೀತಿಯ ಉದ್ದೇಶವಾಗಿದೆ ಎಂದು ಗಡ್ಕರಿ ಹೇಳಿದ್ದಾರೆ.