NDA ಗೆ ಆಘಾತ: ಕೇಂದ್ರ ಸಚಿವ ಸ್ಥಾನಕ್ಕೆ ಉಪೇಂದ್ರ ಕುಶ್ವಾಹ ರಾಜೀನಾಮೆ
ಪಾಟ್ನಾ, ಡಿಸೆಂಬರ್ 10: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ರಾಜ್ಯ ಸಚಿವ ಉಪೇಂದ್ರ ಕುಶ್ವಾಹ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಎನ್ ಡಿಎ ಮೈತ್ರಿಕೂಟಕ್ಕೆ ಆಘಾತ ನೀಡಿದ್ದಾರೆ.
ರಾಷ್ಟ್ರೀಯ ಲೋಕ ಸಮತಾ ಪಕ್ಷ(ಆರ್ ಎಲ್ ಎಸ್ ಪಿ)ದ ನಾಯಕರಾಗಿರುವ ಕುಶ್ವಾಹ, 2014 ರ ಲೋಕಸಭಾ ಚುನಾವಣೆಯ ನಂತರ ಎನ್ ಡಿಎ ಜೊತೆ ಕೈಜೋಡಿಸಿದ್ದರು.
ಬಿಹಾರದಲ್ಲಿ ಆರ್ ಎಲ್ ಸಿಪಿ ಯ ಮೂರು ಅಭ್ಯರ್ಥಿಗಳು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ, ಮೂವರೂ ಗೆಲುವು ಸಾಧಿಸಿದ್ದರು.
"ಎನ್ ಡಿಎ ಮೈತ್ರಿಕೂಟದಲ್ಲಿ ಬಿಜೆಪಿ ಉಳಿದೆಲ್ಲ ಮೈತ್ರಿ ಪಕ್ಷಗಳನ್ನೂ ಕಡೆಗಣಿಸುತ್ತಿದೆ. ತಮ್ಮನ್ನು ಮೂಲೆಗುಂಪು ಮಾಡಲಾಗಿದೆ. ನಾವು ಎನ್ ಡಿಎ ಜೊತೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸೋದು ಅನುಮಾನ" ಎಂದು ಕುಶ್ವಾಹ ಈ ಮೊದಲೇ ಸ್ಪಷ್ಟಪಡಿಸಿದ್ದರು.
ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಬಹ್ರೈಚ್ ಸಂಸದೆಯಾಗಿದ್ದ ಸಾವಿತ್ರಿಬಾಯಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. 'ಬಿಜೆಪಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ, ದಲಿತರನ್ನು ಕಡೆಗಣಿಸುತ್ತಿದೆ. ಆ ಕಾರಣಕ್ಕೆ ನಾನು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ' ಎಂದಿದ್ದರು.
ಬಿಹಾರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಆರ್ ಎಲ್ ಎಸ್ ಪಿಗೆ ತಾವು ಕೇಳಿದಷ್ಟು ಸೀಟು ನೀಡಬೇಕೆಂಬ ಬೇಡಿಕೆಯನ್ನು ಉಪೇಂದ್ರ ಕುಶ್ವಾಹ ಇಟ್ಟಿದ್ದರು. ಆದರೆ ಇದಕ್ಕೆ ಬಿಜೆಪಿ ಸೊಪ್ಪು ಹಾಕಿಲ್ಲ. ಅದು ಅಲ್ಲದೆ, ಬಿಹಾರದಲ್ಲಿ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಸಿಗದೆ ಇರುವ ಕಾರಣಕ್ಕೆ ಕುಶ್ವಾಹ ಮತ್ತಷ್ಟು ಕೋಪಗೊಂಡಿದ್ದರು.
ಎನ್ ಡಿಎ ಯಿಂದ ಆಚೆ ಹೋಗುವ ಸೂಚನೆ ನೀಡಿದ್ದ ಕುಶ್ವಾಹಾ, ರಾಜೀನಾಮೆ ನೀಡುವ ಮೂಲಕ ಆ ಮಾತನ್ನು ಸತ್ಯವಾಗಿಸಿದ್ದಾರೆ.