ದೆಹಲಿ ಹಿಂಸಾಚಾರ: ವಿಪಕ್ಷ ನಾಯಕರಿಂದ ರಾಷ್ಟ್ರಪತಿ ಭೇಟಿ
ನವದೆಹಲಿ, ಸೆಪ್ಟೆಂಬರ್ 17: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ಗುರುವಾರ ಮಧ್ಯಾಹ್ನ ಭೇಟಿಯಾಗಲಿರುವ ವಿರೋಧ ಪಕ್ಷಗಳ ನಾಯಕರು ದೆಹಲಿ ಹಿಂಸಾಚಾರದ ತನಿಖೆಯ ಕುರಿತು ತಮ್ಮ ಕಳವಳ ವ್ಯಕ್ತಪಡಿಸಲಿದ್ದಾರೆ.
ಕಾಂಗ್ರೆಸ್ನ ಅಹ್ಮದ್ ಪಟೇಲ್, ಸಿಪಿಐನ ಡಿ. ರಾಜಾ, ಸಿಪಿಎಂನ ಸೀತಾರಾಮ್ ಯೆಚೂರಿ, ಡಿಎಂಕೆಯ ಕನಿಮೊಳಿ ಮತ್ತು ಆರ್ಜೆಡಿಯ ಮನೋಜ್ ಝಾ ಅವರು ರಾಮ್ ನಾಥ್ ಕೋವಿಂದ್ ಅವರನ್ನು ಭೇಟಿಯಾಗಿ ದೆಹಲಿ ಹಿಂಸಾಚಾರದ ತನಿಖೆಯ ದಿಕ್ಕಿನ ಬಗ್ಗೆ ಚರ್ಚಿಸಲಿದ್ದಾರೆ.
ದೆಹಲಿ ಪೊಲೀಸರು ಪೂರ್ವ ದೆಹಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಬಗ್ಗೆ ಹಾಗೂ ತನಿಖೆಯನ್ನು ಹೇಗೆ ನಿರ್ವಹಿಸುತ್ತಿದ್ದಾರೆ ಎಂಬ ಬಗ್ಗೆ ರಾಷ್ಟ್ರಪತಿಗೆ ಮನವಿ ಪತ್ರವೊಂದನ್ನು ಸಲ್ಲಿಸುವುದಾಗಿ ಡಿ. ರಾಜಾ ತಿಳಿಸಿದ್ದಾರೆ.
ತನಿಖೆಯಲ್ಲಿ ಏನಾಗುತ್ತಿದೆ ಎಂದು ಅವರಿಗೆ ವಿವರಿಸಲಿದ್ದೇವೆ. ಜತೆಗೆ ಈ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡುವಂತೆ ಅವರನ್ನು ಕೋರಲಿದ್ದೇವೆ ಎಂದು ಹೇಳಿದ್ದಾರೆ.
ದೆಹಲಿ ಪೊಲೀಸರು ಇತ್ತೀಚೆಗೆ ಸಲ್ಲಿಸಿದ್ದ ಪೂರಕ ಆರೋಪಪಟ್ಟಿಯಲ್ಲಿ ಬಂಧಿತ ಆರೋಪಿಗಳ ಹೇಳಿಕೆಗಳನ್ನು ಉಲ್ಲೇಖಿಸಿ ಸೀತಾರಾಮ್ ಯೆಚೂರಿ ಮತ್ತು ಇತರೆ ಕಾರ್ಯಕರ್ತರನ್ನು ಪ್ರಕರಣದಲ್ಲಿ ಹೆಸರಿಸಿದ್ದಾರೆ.
ಫೆಬ್ರವರಿಯಲ್ಲಿ ನಡೆದಿದ್ದ ಸಿಎಎ/ಎನ್ಎಸಿ ವಿರೋಧಿ ಪ್ರತಿಭಟನೆಯ ವೇಳೆ ಪೂರ್ವ ದೆಹಲಿಯಲ್ಲಿ ವ್ಯಾಪಕ ಹಿಂಸಾಚಾರ ನಡೆದಿತ್ತು. ಈ ಸಂಬಂಧ ಪೊಲೀಸರು 17,500 ಪುಟಗಳ ವರದಿ ಸಲ್ಲಿಸಿದ್ದು, ಅದರಲ್ಲಿ 15 ಆರೋಪಿಗಳನ್ನು ಮತ್ತು ಏಳು ವಾಟ್ಸಾಪ್ ಚಾಟ್ ಗುಂಪುಗಳನ್ನು ಹೆಸರಿಸಲಾಗಿದೆ.