ಸುಪ್ರೀಂಕೋರ್ಟ್ನಲ್ಲಿ ಇಂದು ಮತ್ತೆ ಅಯೋಧ್ಯೆ ವಿಚಾರಣೆ
ನವದೆಹಲಿ, ಡಿಸೆಂಬರ್ 12: ಅಯೋಧ್ಯಾ ರಾಮಜನ್ಮಭೂಮಿ ಪ್ರಕರಣದ ಸುಪ್ರೀಂಕೋರ್ಟ್ ಆದೇಶ ಪ್ರಶ್ನಿಸಿ ಮುಸ್ಲಿಂ ಸಂಘಟನೆಗಳು ಸಲ್ಲಿಸಿರುವ ಮರು ಪರಿಶೀಲನಾ ಅರ್ಜಿಯ ವಿಚಾರಣೆ ಗುರುವಾರ ನಡೆಯಲಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ಎ ಬೋಬ್ಡೆ ಅವರ ನೇತೃತ್ವದಲ್ಲಿ ಇನ್ಛೇಂಬರ್(ನ್ಯಾಯಮೂರ್ತಿಗ ಕಚೇರಿ ಒಳಗೆ) ವಿಚಾರಣೆ ನಡೆಯಲಿದೆ.
ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹಾಗೂ ಇತರರು ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದು, ಸುಪ್ರೀಂಕೋರ್ಟ್ ಸಂವಿಧಾನಪೀಠದ ಸರ್ವಾನುಮತದ ಆದೇಶವು ಅಸಮರ್ಪಕವಾಗಿದೆ.
ಮುಸ್ಲಿಮರ ಭಾವನೆ ಹಾಗೂ ಹಕ್ಕುಗಳನ್ನು ಕಸಿದುಕೊಂಡಿದೆ. ಹೀಗಾಗಿ ಮರುಪರಿಶೀಲನೆ ಮಾಡಬೇಕು ಎಂದು ಅರ್ಜಿದಾರರು ಹೇಳಿದ್ದರು.
ಅಯೋಧ್ಯಾ ತೀರ್ಪು: ಗಮನಿಸಬೇಕಾದ ಕುತೂಹಲಕಾರಿ 10 ಸಂಗತಿಗಳು
ಆದರೆ ಪ್ರಮುಖ ಅರ್ಜಿದಾರರಾಗಿರುವ ಸುನ್ನಿ ವಕ್ಫ್ ಮಂಡಳಿ ಮರು ಪರಿಶೀಲನಾ ಅರ್ಜಿ ಸಲ್ಲಿಸದೆ, ವಿವಾದದಲ್ಲಿ ಕೋರ್ಟ್ ನೇರವಾಗಿ ಪರಿಗಣಿಸದ ವ್ಯಕ್ತಿಗಳು ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಕೋರ್ಟ್ ಆದೇಶದ ಮೇಲೆ ಕುತೂಹಲ ಮೂಡಿದೆ.
ಏತನ್ಮಧ್ಯೆ ಕೆಲ ಹಿಂದೂ ಸಂಘಟನೆಗಳು ಕೂಡ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಮುಂದಾಗಿವೆ.ಸುನ್ನಿ ವಕ್ಫ್ ಮಂಡಳಿಗೆ ಐದು ಎಕರೆ ಭೂಮಿ ನೀಡುವುದನ್ನು ಇದು ವಿರೋಧಿಸಿದೆ.
ಕಳೆದ ನವೆಂಬರ್ 9ರಂದು ಸುಪ್ರೀಂಕೋರ್ಟ್ನ ಸಂವಿಧಾನ ಪೀಠವು ಈ ವಿವಾದಕ್ಕೆ ಸಂಬಂಧಿಸಿ ಮಹತ್ವದ ತೀರ್ಪು ನೀಡಿತ್ತು.
ಆ ಪ್ರಕಾರ ಹಿಂದೂ ಸಂಘಟನೆಗೆ ಟ್ರಸ್ಟ್ ಮೂಲಕ ಎಲ್ಲಾ ವಿವಾದಿತ ಜಾಗವನ್ನು ನೀಡಿದ್ದರೆ, ಸುನ್ನಿ ವಕ್ಫ್ ಮಂಡಳಿಗೆ ಅಯೋಧ್ಯೆಯಲ್ಲಿ ಐದು ಎಕರೆ ಭೂಮಿ ನೀಡಲು ಸರ್ಕಾರಕ್ಕೆ ಸೂಚಿಸಿತ್ತು.
ಅಯೋಧ್ಯೆ ವಿವಾದಿತ ಭೂಮಿಯ ಮೇಲೆ ಮುಸ್ಲಿಂ ಅರ್ಜಿದಾರರಿಗೆ ಯಾವುದೇ ಅಧಿಕಾರವಿಲ್ಲ, ವಿವಾದಿತ ಭೂಮಿಯು ಮುಸ್ಲಿಮರಿಗೆ ಸೇರಿದೆ ಎನ್ನುವುದಕ್ಕೂ ದಾಖಲೆಗಳಿಲ್ಲ.
ಈ ಪ್ರಕರಣವನ್ನು ಧಾರ್ಮಿಕ ನಂಬಿಕೆ ಆಧಾರದ ಮೇಲೆ ನಿರ್ಧರಿಸಲೂ ಸಾಧ್ಯವಿಲ್ಲ. ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಹಿಂದೂಗಳಿಗೆ ನೀಡಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತ್ತು.