ಪ್ರಧಾನಿ ಅಭ್ಯರ್ಥಿ ಯಾರೆಂದು ಪ್ರಕಟಿಸಿ : ಮಹಾಘಟಬಂಧನಕ್ಕೆ ಬಿಜೆಪಿ ಸವಾಲು!
ನವದೆಹಲಿ, ಡಿಸೆಂಬರ್ 10: ಲೋಕಸಭಾ ಚುನಾವಣೆಗೂ ಮುನ್ನ ಆಡಳಿತಾರೂಢ ಎನ್ ಡಿಎ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸುವ ಸಲುವಾಗಿ ಮಹಾಘಟಬಂಧನ ಅಸ್ತಿತ್ವಕ್ಕೆ ಬರುವ ಎಲ್ಲಾ ಸಾಧ್ಯತೆಗಳೂ ನಿಚ್ಚಳವಾಗಿವೆ.
ಅದಕ್ಕೆ ಪೂರಕವೆಂಬಂತೆ ಸೋಮವಾರ ವಿರೋಧ ಪಕ್ಷಗಳು ನವದೆಹಲಿಯಲ್ಲಿ ಸಭೆ ಸೇರಲಿವೆ. ಆದರೆ ವಿರೋಧ ಪಕ್ಷಗಳ ಮಹಾಮೈತ್ರಿಕೂಟ ಸಭೆಯನ್ನು ಬಿಜೆಪಿ ಅಣಕಿಸಿದೆ. 'ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪ್ರಧಾನಿ ಅಭ್ಯರ್ಥಿ ಯಾರು ಎಂಬುದನ್ನು ಮೊದಲು ಹೇಳಿ' ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಸವಾಲೆಸೆದಿದ್ದಾರೆ.
ಮಹಾಘಟಬಂಧನಕ್ಕೆ ಮುಹೂರ್ತ: ಇಂದು ವಿರೋಧ ಪಕ್ಷಗಳ ಸಭೆ
ನಮಗೆ ಪ್ರಧಾನಿ ಅಭ್ಯರ್ಥಿಯಾಗಿ ಹಾಲಿ ಪ್ರಧಾನಿ ನರೇಂದ್ರ ಮೋದಿಯವರಿದ್ದಾರೆ. ಅವರಗೆ ಯಾರಿದ್ದಾರೆ ಎಂದು ಕೈಲಾಶ್ ಪ್ರಶ್ನಿಸಿದ್ದಾರೆ.
ಮಹಾಘಟಬಂಧನದಲ್ಲಿ ಈಗಾಗಲೆ ಹಲವು ನಾಯಕರ ಹೆಸರುಗಳು ಪ್ರಧಾನಿ ಹುದ್ದೆಗೆ ಕೇಳಿಬರುತ್ತಿವೆ. ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಿದರೆ ನಾನು ಸಿದ್ಧ ಎಂದು ರಾಹುಲ್ ಗಾಂಧಿ ಅವರು ಕರ್ನಾಟಕ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿಯೇ ಹೇಳಿದ್ದರು. ಎಲ್ಲರನ್ನೂ ಒಗ್ಗೂಡಿಸುತ್ತಿರುವ ಚಂದ್ರ ಬಾಬು ನಾಯ್ಡು ಕೂಡ ಪ್ರಬಲ ಸ್ಪರ್ಧಿಯೆ. ಜೊತೆಗೆ, ಮಾಯಾವತಿ ಮತ್ತು ಮಮತಾ ಬ್ಯಾನರ್ಜಿ ಕೂಡ ನಾವ್ಯಾರಿಗೆ ಕಮ್ಮಿ ಎಂದಿದ್ದಾರೆ.
ಆಮೇಲೆ ಕನಸು ಕಾಣಿ!
'ವಿರೋಧ ಪಕ್ಷಗಳೆಲ್ಲ ನಮ್ಮ ವಿರುದ್ಧ ಹೋರಾಡಲು ಒಗ್ಗೂಡಿರುವುದನ್ನು ಕಂಡು ಸಂತೋಷವಾಯಿತು! ಆದರೆ, ಮೊದಲು ಪ್ರಧಾನಿ ಅಭ್ಯರ್ಥಿಯ ಹೆಸರು ಹೇಳಿ, ನಂತರ ಕನಸು ಕಾಣಿ! ನಮ್ಮ ವಿರುದ್ಧ ಪ್ರಧಾನಿ ಅಭ್ಯರ್ಥಿಯಾಗುವವರು ಯಾರು ಎಂಬುದನ್ನು ತಿಳಿಯುವ ಕುತೂಹಲವಿದೆ. ನಮಗೆ ಮೋದಿಯಿದ್ದಾರೆ, ನಿಮಗೆ?' ಎಂದು ಕೈಲಾಶ್ ಪ್ರಶ್ನಿಸಿದರು.
ಚುನಾವಣೋತ್ತರ ಸಮೀಕ್ಷೆ: ಯಾವ ರಾಜ್ಯದಲ್ಲಿ ಯಾವ ಪಕ್ಷದ ಗೆಲುವು?
ವಿರೋಧಿಗಳೊಂದಿಗೇ ಕೈಜೋಡಿಸುತ್ತಿದ್ದಾರೆ!
1998 ರಲ್ಲಿ ತೃಣಮೂಲ ಕಾಂಗ್ರೆಸ್ ಸ್ಥಾಪನೆಯಾದಾಗ ಅದರ ನಾಯಕಿ, ಹಾಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದರು, 'ಟಿಎಂಸಿ ಗೆ ಕಮ್ಯುನಿಸ್ಟ್ ಪಕ್ಷ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ವಿರೋಧಿಗಳು ಎಂದು. ಆದರೆ ಇಂದು ಆ ವಿರೋಧಿಗಳೊಂದಿಗೇ ಅವರು ಕೈಜೋಡಿಸುತ್ತಿದ್ದಾರೆ. ಈ ಕುರಿತು ಸ್ವತಃ ಬ್ಯಾನರ್ಜಿ ಅವರೇ ಸ್ಪಷ್ಟನೆ ನೀಡಬೇಕು' ಎಂದು ಬಿಜೆಪಿ ಆಗ್ರಹಿಸಿದೆ.
ಮಧ್ಯಪ್ರದೇಶದಲ್ಲಿ Poll of Polls : ಮರೀಚಿಕೆಯಾದ ಮ್ಯಾಜಿಕ್ ನಂಬರ್
ಸಭೆ ಸೇರಲಿರುವ ವಿಪಕ್ಷಗಳು
ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲೇಬೇಕು ಎಂದು ಶಪಥ ಮಾಡಿರುವ ಎಲ್ಲಾ ಬಿಜೆಪಿ ವಿರೋಧಿ ಪಕ್ಷಗಳೂ ನವದೆಹಲಿಯಲ್ಲಿಂದು ಸಭೆ ಸೇರಲಿವೆ. ವಿಪಕ್ಷಗಳೆಲ್ಲವನ್ನೂ ಒಗ್ಗೂಡಿಸುವ ಕಾರ್ಯದಲ್ಲಿ ಟಿಡಿಪಿ ಮುಖಂಡ ಮತ್ತು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ನಿರತರಾಗಿದ್ದಾರೆ. ಕಾಂಗ್ರೆಸ್ ಜೊತೆ ಮುನಿಸಿಕೊಂಡಿದ್ದ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ರಾಜಿ ಸಂಧಾನದ ಮೂಲಕ ಮಹಾಘಟಬಂಧನದ ಸಭೆಗೆ ಸ್ವತಃ ನಾಯ್ಡು ಆಮಂತ್ರಿಸಿದ್ದಾರೆ. ಲೋಕಸಭಾ ಚುನಾವಣೆಯ ಹೊತ್ತಲ್ಲಿ ಮಹಾಘಟಬಂಧನ ಬಿಜೆಪಿಗೆ ದೊಡ್ಡ ತಲೆನೋವಾಗಬಹುದು.
ಮಹಾಘಟಬಂಧನಕ್ಕೆ ಯಾರ್ಯಾರ ಬೆಂಬಲ?
ಸ್ವತಂತ್ರ್ವಾಗಿ ಸ್ಪರ್ಧಿಸಿ ಗೆಲ್ಲುವ ವಿಶ್ವಾಸವನ್ನು ಕಳೆದುಕೊಂಡಿರುವ ಕಾಂಗ್ರೆಸ್. ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಮಹಾಘಟಬಂಧನದ ಮೊರೆಹೋಗುವುದು ಅನಿವಾರ್ಯ. ಪ್ರಧಾನಿ ಅಭ್ಯರ್ಥಿಯನ್ನಾಗಿ ತಮ್ಮನ್ನು ಸೂಚಿಸುವುದಾದರೆ ಟಿಎಂಸಿಯ ಮಮತಾ ಬ್ಯಾನರ್ಜಿ ಮಹಾಘಟಬಂಧನದಲ್ಲಿ ಪಾಲುದಾರರಾಗಬಹುದು. ಆದರೆ ಮಹಾಘಟಬಂಧನದಲ್ಲಿ ಕಾಂಗ್ರೆಸ್ ಇದ್ದರೆ ತಾನು ಬೆಂಬಲಿಸುವುದಿಲ್ಲ ಎಂದು ಬಿಎಸ್ಪಿಯ ಮಾಯಾವತಿ ಈಗಾಗಲೇ ಹೇಳಿದ್ದಾರೆ. ಅತೀ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶ(80/543) ದಲ್ಲಿ ಮಾಯಾವತಿ ಅವರ ಬೆಂಬಲ ಅತ್ಯಗತ್ಯ. ಅವರು ಬೆಮಬಲಿಸುವುದಾದರೆ ಪ್ರಧಾನಿ ಹುದ್ದೆಯ ಮೇಲೇ ಕಣ್ಣಿಡಬಹುದು! ಆದ್ದರಿಂದ ಮಹಾಮೈತ್ರಿಕೂಟವೂ ಲೋಕಸಭಾ ಚುನಾವಣೆ ಮುಗಿಯುವವರೆಗೂ ಭದ್ರವಾಗಿಯೇ ಇರುತ್ತದೆ ಎಂಬಂತಿಲ್ಲ!