ಸೇನೆಗೆ 1 ಕೋಟಿ ರೂ. ದೇಣಿಗೆ ನೀಡಿದ ನಿವೃತ್ತ ಯೋಧ
ನವದೆಹಲಿ, ಜುಲೈ 16: ನಿವೃತ್ತ ಸೈನಿಕರೊಬ್ಬರು ತಮ್ಮ ಜೀವಮಾನವಿಡೀ ಕೂಡಿಟ್ಟ ದೊಡ್ಡ ಮೊತ್ತದ ಹಣವನ್ನು ರಕ್ಷಣಾ ಸಚಿವಾಲಯಕ್ಕೆ ದೇಣಿಗೆಯಾಗಿ ನೀಡುವ ಮೂಲಕ ದೇಶಭಕ್ತಿ ಮೆರೆದಿದ್ದಾರೆ.
74 ವರ್ಷದ ನಿವೃತ್ತ ಯೋಧ ಸಿಬಿಆರ್ ಪ್ರಸಾದ್ ಅವರು ಬರೋಬ್ಬರಿ ಒಂದು ಕೋಟಿ ರೂಪಾಯಿ ಮೊತ್ತವನ್ನು ಸೇನೆಗೆ ನೀಡಿದ್ದಾರೆ.
ಭಾರತೀಯ ವಾಯುಪಡೆಯ ಯೋಧರಾಗಿದ್ದ ಅವರು ಒಂಬತ್ತು ವರ್ಷ ಸೇವೆ ಸಲ್ಲಿಸಿದ ಬಳಿಕ ಭಾರತೀಯ ರೈಲ್ವೆಯಿಂದ ಉದ್ಯೋಗದ ಆಫರ್ ಪಡೆದುಕೊಂಡಿದ್ದರು. ಆದರೆ, ದುರದೃಷ್ಟವಶಾತ್ ಅವರಿಗೆ ಆ ಉದ್ಯೋಗ ಸಿಗಲಿಲ್ಲ.
ಎಂಎನ್ ಸಿ ಕೆಲಸ ಬಿಟ್ಟು ಫುಡ್ ಡೆಲಿವರಿ ಗರ್ಲ್ ಆದ ಮೇಘನಾ!
ಈ ನೌಕರಿಗಾಗಿ ಐಎಎಫ್ ತ್ಯಜಿಸಿದ್ದ ಅವರು, ಜೀವನೋಪಾಯಕ್ಕಾಗಿ ಸಣ್ಣದಾಗಿ ಪೌಲ್ಟ್ರಿ ಫಾರಂ ತೆರೆದರು. ಅದು ಅವರ ಕೈಹಿಡಿಯಿತು. ಉತ್ತಮವಾಗಿ ವ್ಯವಹಾರ ನಡೆಯಿತು. ಅಲ್ಲಿಂದ ಕಠಿಣ ಪರಿಶ್ರಮ ಪಟ್ಟು ಒಂದೊಂದೇ ಹೆಜ್ಜೆಗಳನ್ನು ಇರಿಸಿದ ಅವರು ಈಗ ಒಂದು ಘಟ್ಟಕ್ಕೆ ತಲುಪಿದ ನೆಮ್ಮದಿಯಲ್ಲಿದ್ದಾರೆ. ತಮ್ಮ ಉಳಿತಾಯದ ಹಣವನ್ನು ರಕ್ಷಣಾ ಇಲಾಖೆಗೆ ನೀಡಿದ್ದಾರೆ. ಅಷ್ಟಕ್ಕೆ ಅವರ ಸಮಾಜಕಾರ್ಯ ಮುಗಿದಿಲ್ಲ. ಸಮಾಜದಿಂದ ಪಡೆದಿದ್ದನ್ನು ಮರಳಿ ಕೊಡಬೇಕು ಎಂಬ ಧ್ಯೇಯದೊಂದಿಗೆ ಮತ್ತಷ್ಟು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಸೋಮವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ ಅವರು ದೇಣಿಗೆಯ ಚೆಕ್ ಅನ್ನು ಹಸ್ತಾಂತರಿಸಿದರು.
2017ರಲ್ಲಿ ಗುಜರಾತ್ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಅಧಿಕಾರಿ ಜನಾರ್ದನ್ ಭಟ್ (84) ಮತ್ತು ಅವರ ಪತ್ನಿ 1 ಕೋಟಿ ರೂಪಾಯಿಯನ್ನು ರಾಷ್ಟ್ರೀಯ ರಕ್ಷಣಾ ನಿಧಿಗೆ ದೇಣಿಗೆಯಾಗಿ ನೀಡಿದ್ದರು.
ಎದೆಯೊಡ್ಡಿ ನಿಂತು ಉಗ್ರರನ್ನು ಕೊಂದಿದ್ದ ಕನ್ನಡಿಗನ ಸಾಹಸಗಾಥೆ ಪುಸ್ತಕ ರೂಪದಲ್ಲಿ
ಇಷ್ಟು ದೊಡ್ಡ ಮೊತ್ತದ ಹಣವನ್ನು ದೇಣಿಗೆಯಾಗಿ ನೀಡಿದ್ದರೂ ಅದೇನೂ ಮಹಾಕಾರ್ಯ ಅಲ್ಲ ಎಂಬಂತೆ ಅವರು ಸಹಜವಾಗಿ ಪ್ರತಿಕ್ರಿಯಿಸುತ್ತಾರೆ. ರಕ್ಷಣಾ ಇಲಾಖೆಗೆ ತನ್ನ ಉಳಿತಾಯದ ಮೊತ್ತವನ್ನು ದೇಣಿಗೆ ನೀಡುವ ಯೋಜನೆ ಹೇಗೆ ಬಂತು ಎಂದು ಕೇಳಿದರೆ, ಅದೊಂದು ದೊಡ್ಡ ಕಥೆ ಎಂದು ಅವರು ವಿವರಿಸುತ್ತಾರೆ.
1.08 ಕೋಟಿ ರೂಪಾಯಿ ದೇಣಿಗೆ
'ನನ್ನ ಕುಟುಂಬದ ಜವಾಬ್ದಾರಿಗಳನ್ನು ಪೂರ್ಣಗೊಳಿಸಿದ ಬಳಿಕ ನಾನು ರಕ್ಷಣಾ ಇಲಾಖೆಯಿಂದ ಪಡೆದುಕೊಂಡಿದ್ದನ್ನು ಅದಕ್ಕೆ ಮರಳಿ ಕೊಡಬೇಕು ಎನಿಸಿತು. ಹೀಗಾಗಿ ಉಳಿಸಿದ ಹಣದಲ್ಲಿ 1.08 ಕೋಟಿ ರೂಪಾಯಿಯನ್ನು ರಕ್ಷಣಾ ಇಲಾಖೆಗೆ ನೀಡಲು ನಿರ್ಧರಿಸಿದೆ' ಎಂದು ಸಿಬಿಆರ್ ಪ್ರಸಾದ್ ತಿಳಿಸಿದ್ದಾರೆ.
ಪ್ರಸಾದ್ ಒಂಬತ್ತು ವರ್ಷ ಐಎಎಫ್ನಲ್ಲಿ ಸೇವೆ ಸಲ್ಲಿಸಿದ ನಂತರ ಕೋಳಿ ಸಾಕಾಣಿಕೆ ಆರಂಭಿಸಿ ಸುಮಾರು 30 ವರ್ಷ ಅದನ್ನು ನಡೆಸಿದ್ದಾರೆ. ಸಮಾಜಕ್ಕೆ ಏನಾದರೂ ಕೊಡುಗೆ ಸಲ್ಲಿಸಬೇಕು ಎಂಬ ಘನ ಉದ್ದೇಶದೊಂದಿಗೆ ಕ್ರೀಡಾ ವಿಶ್ವವಿದ್ಯಾಲಯವೊಂದನ್ನೂ ಸ್ಥಾಪಿಸಿದ್ದಾರೆ.
ಉಳಿತಾಯದ ಶೇ 97 ಸಮಾಜಕ್ಕೆ
ತಮ್ಮ ದುಡಿಮೆಯ ಹಣವನ್ನೆಲ್ಲ ಸೈನಿಕರಿಗಾಗಿ ದಾನ ಮಾಡುವ ಈ ನಿರ್ಧಾರಕ್ಕೆ ಕುಟುಂಬ ಒಪ್ಪಿಗೆ ನೀಡಿತ್ತೇ ಎಂಬ ಪ್ರಶ್ನೆಗೆ, 'ಖಂಡಿತವಾಗಿಯೂ. ಯಾವುದೇ ಸಮಸ್ಯೆ ಇರಲಿಲ್ಲ. ನನ್ನ ಆಸ್ತಿಯ ಶೇ 2ರಷ್ಟನ್ನು ನನ್ನ ಮಗಳಿಗೆ ನೀಡಿದ್ದೇನೆ. ಇನ್ನು ಶೇ 1ರಷ್ಟನ್ನು ನನ್ನ ಹೆಂಡತಿಗೆ ಕೊಟ್ಟಿದ್ದೇನೆ. ಮಿಕ್ಕ ಶೇ 97ರಷ್ಟನ್ನು ಸಮಾಜಕ್ಕೆ ಮರಳಿ ನೀಡಿದ್ದೇನೆ' ಎಂದು ಹೇಳಿದರು.
'ಸಣ್ಣ ಸಿಪಾಯಿಯೊಬ್ಬ ತನ್ನ ಸಂಪೂರ್ಣ ಉಳಿತಾಯವನ್ನು ರಕ್ಷಣಾ ಇಲಾಖೆಗೆ ನೀಡುತ್ತಿರುವುದನ್ನು ಕಂಡು ರಾಜನಾಥ್ ಸಿಂಗ್ ಅವರು ಸಂತೋಷಗೊಂಡಿದ್ದಾರೆ' ಎಂದು ತಿಳಿಸಿದರು.
ಹಸಿದವರಿಗೆ ಆಹಾರ ಕೊಡಲು ಕೆಲಸವನ್ನೇ ಬಿಟ್ಟ, ವಿಶ್ವದಾಖಲೆ ಬರೆದ: ಮಾನವೀಯ ವರದಿ
ಪ್ರಭಾವ ಬೀರಿದ ಮಹಾನ್ ವ್ಯಕ್ತಿ
'ನಾವು 20 ವರ್ಷದವನಿದ್ದಾಗ ವಾಯುಪಡೆಯಲ್ಲಿ ಕೆಲಸ ಮಾಡುತ್ತಿದ್ದೆ. ನಮ್ಮ ಅಧಿಕಾರಿಗಳು ಕಾರ್ಯಕ್ರಮವೊಂದಕ್ಕೆ ಕೊಯಮತ್ತೂರಿನಿಂದ ಜಿಡಿ ನಾಯ್ಡು ಎಂಬ ಮಹಾನುಭಾವರನ್ನು ಅತಿಥಿಯನ್ನಾಗಿ ಕರೆಯಿಸಿದ್ದರು. ಅವರು ತಮ್ಮ ಮಾತಿನ ನಡುವೆ, ಒಮ್ಮೆ ನಮ್ಮ ಕುಟುಂಬದ ಹೊಣೆಗಾರಿಕೆಗಳು ಮುಗಿದ ಬಳಿಕ ನಮ್ಮ ಸಮಾಜಕ್ಕೆ ನಾವು ಮರಳಿ ಕೊಡಬೇಕು ಎಂಬ ನಂಬಿಕೆ ಇದ್ದ ಕಾರಣದಿಂದ ಭಾರತ ಮಹಾನ್ ದೇಶವಾಗಿ ಬೆಳೆಯಿತು ಎಂದು ಹೇಳಿದ್ದರು' ಎಂಬುದನ್ನು ನೆನಪಿಸಿಕೊಂಡರು.
'ನೀವು ಯಾವುದನ್ನೂ ವಾಪಸ್ ಪಡೆದುಕೊಳ್ಳುವಂತಿಲ್ಲ. ಏಕೆಂದರೆ ಬರುವಾಗ ನೀವು ಏನನ್ನೂ ತಂದಿರುವುದಿಲ್ಲ. ನಿಮ್ಮ ಕುಟುಂಬಕ್ಕೆ ಎಷ್ಟು ಕನಿಷ್ಠ ಅಗತ್ಯವಿದೆಯೋ ಅಷ್ಟನ್ನು ನೀಡಿ. ಉಳಿದಿದ್ದನ್ನು ಸಮಾಜಕ್ಕೆ ಕೊಡಿ ಮತ್ತು ಉಳಿದ ಬದುಕನ್ನು ಸಮಾಜಕ್ಕಾಗಿ ದುಡಿಯಿರಿ' ಎಂದು ಹೇಳಿದರು.
ಮನೆ ಬಿಟ್ಟಾಗ ಇದ್ದದ್ದು 5 ರೂ.
ತಮ್ಮ ಆರಂಭದ ಹೆಣಗಾಟದ ದಿನಗಳನ್ನು ಸ್ಮರಿಸಿಕೊಂಡ ಅವರು, 'ನಾನು ಮನೆ ಬಿಟ್ಟಾಗ ಜೇಬಿನಲ್ಲಿ ಇದ್ದದ್ದು ಐದು ರೂಪಾಯಿ ಮಾತ್ರ. ಕೇವಲ ನನ್ನ ಕಠಿಣ ಪರಿಶ್ರಮದಿಂದಲೇ 500 ಎಕರೆ ಭೂಮಿ ಖರೀದಿ ಮಾಡಿದ್ದೆ. ಐದು ಎಕರೆಯನ್ನು ನನ್ನ ಹೆಂಡತಿಗೆ ಮತ್ತು ಹತ್ತು ಎಕರೆ ಜಮೀನನ್ನು ನನ್ನ ಮಗಳಿಗೆ ನೀಡಿದೆ. ಉಳಿದ ಎಲ್ಲವನ್ನೂ ಸಮಾಜಕ್ಕಾಗಿ ಬಳಸಿಕೊಳ್ಳುತ್ತಿದ್ದೇನೆ' ಎಂದರು.
ಎರಡು ಶಿಕ್ಷಣ ಸಂಸ್ಥೆಗಳ ಗುರಿ
ಒಂದು ಕಾಲದಲ್ಲಿ ತಮಗೆ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿ ಪದಕ ಗೆಲ್ಲಬೇಕೆಂಬ ಕನಸು ಇತ್ತು. ಆದರೆ ಅದು ನೆರವೇರಲಿಲ್ಲ. ಹೀಗಾಗಿ ಮಕ್ಕಳನ್ನು ಅದಕ್ಕಾಗಿ ತರಬೇತಿಗೊಳಿಸುತ್ತಿರುವುದಾಗಿ ತಿಳಿಸಿದರು.
'ಸುಮಾರು 50 ಎಕರೆ ಜಮೀನಿನಲ್ಲಿ ಕ್ರೀಡಾ ವಿಶ್ವವಿದ್ಯಾಲಯದಂತಹ ಕ್ಯಾಂಪಸ್ ಅನ್ನು ಆರಂಭಿಸಿದ್ದೇನೆ. ಇನ್ನೊಂದು 50 ಎಕರೆಯಲ್ಲಿ ಮತ್ತೊಂದು ಕ್ರೀಡಾ ವಿಶ್ವವಿದ್ಯಾಲಯವನ್ನು ಸ್ಥಾಪಿಸುತ್ತಿದ್ದೇನೆ. ಎರಡು ಕ್ರೀಡಾ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದು ನನ್ನ ಗುರಿ. ಒಂದು ಬಾಲಕರಿಗೆ ಮತ್ತೊಂದು ಬಾಲಕಿಯರಿಗೆ. ಬಾಲಕನಾಗಿದ್ದಾಗ ಒಲಿಂಪಿಕ್ ಪದಕ ಗೆಲ್ಲಬೇಕೆಂಬ ಆಸೆ ನನಗಿತ್ತು. ಆದರೆ, ಅದು ಈಡೇರಲಿಲ್ಲ. ಹೀಗಾಗಿ, ಕಳೆದ 20 ವರ್ಷಗಳಿಂದ ಮಕ್ಕಳಿಗೆ ತರಬೇತಿ ನೀಡುತ್ತಿದ್ದೇನೆ' ಎಂದು ಹೇಳಿದರು.