ಪ್ರತಿಕ್ರಿಯೆ ನೀಡಿ, ಇಲ್ಲದಿದ್ದರೂ ಪಾಕ್ಗೆ ಹೋಗ್ತೀನಿ: ಮೋದಿ ಸರ್ಕಾರದ ಮೇಲೆ ಸಿಧು ಕೋಪ
ನವದೆಹಲಿ, ನವೆಂಬರ್ 7: ಕರ್ತಾರ್ಪುರ ಕಾರಿಡಾರ್ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಪಾಕಿಸ್ತಾನದಿಂದ ಆಹ್ವಾನ ಪಡೆದಿರುವ ಪಂಜಾಬ್ ಸಚಿವ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು, ತಮಗೆ ಅನುಮತಿ ನೀಡದೆ ಇದ್ದರೂ ಪಾಕಿಸ್ತಾಕ್ಕೆ ತೆರಳುವುದಾಗಿ ನರೇಂದ್ರ ಮೋದಿ ಸರ್ಕಾರಕ್ಕೆ ಹೇಳಿದ್ದಾರೆ.
ಪಾಕಿಸ್ತಾನದ ಗಡಿಯಿಂದ ನಾಲ್ಕು ಕಿಮೀ ದೂರದಲ್ಲಿರುವ ಗುರುದ್ವಾರ ಸಾಹಿಬ್ಗೆ ಸಂಪರ್ಕ ಕಲ್ಪಿಸುವ ಕರ್ತಾರ್ಪುರ ಕಾರಿಡಾರ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಮ್ರಾನ್ ಖಾನ್ ಸರ್ಕಾರವು ನವಜೋತ್ ಸಿಂಗ್ ಸಿಧು ಅವರಿಗೆ ಆಹ್ವಾನ ನೀಡಿದೆ. ಈ ಸಂಬಂಧ ಪಾಕಿಸ್ತಾನಕ್ಕೆ ತೆರಳಲು ಅನುಮತಿ ನೀಡುವಂತೆ ಸಿಧು, ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ಆದರೆ ಅವರ ಎರಡೂ ಪತ್ರಗಳಿಗೆ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮಾಜಿ ಕ್ರಿಕೆಟಿಗ, ಶಾಸಕ ಸಿಧು ಪತ್ನಿ ಕಾಂಗ್ರೆಸ್ಗೆ ಗುಡ್ಬೈ
ಕಳೆದ ವರ್ಷ ಪಾಕಿಸ್ತಾನದ ಭೇಟಿಯ ಸಂದರ್ಭದಲ್ಲಿ ಸಿಧು, ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಪಾಕಿಸ್ತಾನದ ಭಾಗದಿಂದ ಕಾರಿಡಾರ್ ನಿರ್ಮಿಸುವ ಮೂಲಕ ಭಾರತದಿಂದ ಬರುವ ಸಿಖ್ ಭಕ್ತರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದರು. ಈಗ ಪಾಕಿಸ್ತಾನದ ಕಡೆಯಿಂದ ಗುರುದ್ವಾರದವರೆಗೆ ಕಾರಿಡಾರ್ ನಿರ್ಮಿಸಲಾಗಿದೆ. ಗುರುನಾನಕ್ ಅವರ 150ನೇ ವರ್ಷಾಚರಣೆ ಸಂಬಂಧ ಭಾರತದಿಂದ ಲಕ್ಷಾಂತರ ಮಂದಿ ಸಿಖ್ ಯಾತ್ರಾರ್ಥಿಗಳು ಪಾಕಿಸ್ತಾನದಲ್ಲಿರುವ ಗುರುದ್ವಾರಕ್ಕೆ ಭೇಟಿ ನೀಡಲಿದ್ದಾರೆ.
ಕಾನೂನಿಗೆ ಬದ್ಧನಾಗಿರುತ್ತೇನೆ
'ನನ್ನ ಪತ್ರಕ್ಕೆ ಪ್ರತಿಕ್ರಿಯೆ ನೀಡದೆ ಇರುವುದು ಮತ್ತು ವಿಳಂಬ ಮಾಡುತ್ತಿರುವುದು ನನ್ನ ಭವಿಷ್ಯದ ಕೆಲಸಗಳಿಗೆ ಅಡ್ಡಿ ಮಾಡಿದಂತೆ. ಸರ್ಕಾರವು ಯಾವುದೇ ನಿರ್ಬಂಧಗಳನ್ನು ಹೊಂದಿದ್ದು, ನನ್ನ ಮನವಿಗೆ ಇಲ್ಲ ಎಂದರೆ, ಕಾನೂನಿಗೆ ಬದ್ಧನಾದ ನಾಗರಿಕನಾಗಿ ನಾನು ಅಲ್ಲಿಗೆ ತೆರಳುವುದಿಲ್ಲ' ಎಂದು ಸಿಧು ಹೇಳಿದ್ದಾರೆ.
ಪಾಕಿಸ್ತಾನಕ್ಕೆ ಹೋಗುತ್ತೇನೆ
'ಆದರೆ, ನೀವು ನನ್ನ ಮೂರನೇ ಪತ್ರಕ್ಕೂ ಪ್ರತಿಕ್ರಿಯೆ ನೀಡದೆ ಹೋದರೆ ಲಕ್ಷಾಂತರ ಸಿಖ್ ಭಕ್ತರು ಪಡೆದುಕೊಳ್ಳುವ ಅರ್ಹ ವೀಸಾದಡಿ ನಾನೂ ಪಾಕಿಸ್ತಾನಕ್ಕೆ ತೆರಳುತ್ತೇನೆ' ಎಂದು ಕೇಂದ್ರ ಸರ್ಕಾರಕ್ಕೆ ಸಿಧು ಎಚ್ಚರಿಕೆ ನೀಡಿದ್ದಾರೆ.
ಕರ್ತಾರ್ಪುರ ಯಾತ್ರಾರ್ಥಿಗಳ ಪಟ್ಟಿಯಲ್ಲಿ ಮನಮೋಹನ್ ಸಿಂಗ್ ಹೆಸರು
ಪ್ರಮಾಣವಚನದಲ್ಲಿ ಪಾಲ್ಗೊಂಡಿದ್ದ ಸಿಧು
ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭದಲ್ಲಿ ಸಿಧು ಪಾಲ್ಗೊಂಡಿದ್ದರು. ಆಗ ಪಾಕಿಸ್ತಾನದ ಸೇನಾ ಮುಖ್ಯಸ್ಥ ಖಮರ್ ಬಾಜ್ವಾ ಅವರನ್ನು ಆಲಂಗಿಸಿಕೊಂಡಿದ್ದ ಚಿತ್ರ ವೈರಲ್ ಆಗಿತ್ತು. ಉಭಯ ದೇಶಗಳ ನಡುವಿನ ಶತ್ರುತ್ವ ತೀವ್ರವಾಗಿದ್ದ ಸಂದರ್ಭದಲ್ಲಿಯೇ ಸಿಧು ಪಾಕಿಸ್ತಾನಕ್ಕೆ ತೆರಳಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇಮ್ರಾನ್ ಖಾನ್ ಕರ್ತಾರ್ ಪುರ ಕಾರಿಡಾರ್ ಉದ್ಘಾಟನೆಗೂ ಸಿಧು ಅವರಿಗೆ ಆಹ್ವಾನ ನೀಡಿದ್ದಾರೆ.
ಅನುಮತಿ ನೀಡುವುದು ಕಷ್ಟ
ಮೂಲಗಳ ಪ್ರಕಾರ ವಿದೇಶಾಂಗ ಇಲಾಖೆಯು ಸಿಧು ಅವರ ಪಾಕಿಸ್ತಾನ ಪ್ರಯಾಣಕ್ಕೆ ರಾಜಕೀಯ ಅನುಮತಿ ನೀಡುವುದು ಕಷ್ಟ. ಸಿಧು ಅಥವಾ ಬೇರೆ ಯಾವುದೇ ವ್ಯಕ್ತಿ ಗುರುದ್ವಾರಕ್ಕೆ ತೆರಳಲು ರಾಜಕೀಯ ಅನುಮತಿ ಪಡೆಯುವುದು ಸಾಧ್ಯವಿಲ್ಲ. ಆದರೆ ಅವರು ಸಾಮಾನ್ಯ ಭಕ್ತರಾಗಿ ತೆರಳಬಹುದು ಎಂದು ಹೇಳಲಾಗಿದೆ. ನ.9ರಂದು ಪಾಕಿಸ್ತಾನಕ್ಕೆ ತೆರಳಲು ಸಿಧು ಅನುಮತಿ ಕೋರಿದ್ದಾರೆ. ಈ ಸಂಬಂಧ ಬುಧವಾರ ಮತ್ತು ಶನಿವಾರ ಅವರು ಪತ್ರ ಬರೆದಿದ್ದರು.