ಮೇಲ್ಜಾತಿಗೂ ಮೀಸಲಾತಿ: ಚುನಾವಣೆಗೂ ಮುನ್ನ ವಿಪಕ್ಷಗಳಿಗೆ ಭಾರೀ ಆಘಾತ!
Recommended Video
ಲೋಕಸಭಾ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರದಿಂದ ಒಂದಷ್ಟು ಮಾಸ್ಟರ್ ಸ್ಟ್ರೋಕ್ ಗಳು ಹೊರಬರಬಹುದು ಎಂಬ ನಿರೀಕ್ಷೆಗೆ ಮುನ್ನುಡಿ ಬರೆದಿದ್ದು 'ಮೇಲ್ಜಾತಿಗೂ ಮೀಸಲಾತಿ' ನೀಡುವ ನಿರ್ಣಯ.
ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯ ಜನರಿಗೂ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10 ರಷ್ಟು ಮೀಸಲಾತಿ ನೀಡುವ ಕೇಂದ್ರ ಸಚಿವ ಸಂಪುಟದ ನಿರ್ಧಾರಕ್ಕೆ ಲೋಕಸಭೆಯಲ್ಲೂ ಒಪ್ಪಿಗೆ ಸಿಕ್ಕಿದೆ. ಈ ಕುರಿತ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನೂ ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.
ಮೇಲ್ವರ್ಗದವರಿಗೂ ಉದ್ಯೋಗದಲ್ಲಿ ಮೀಸಲಾತಿ, ಯಾರು ಇದಕ್ಕೆ ಅರ್ಹರು?
8 ಲಕ್ಷ ರೂ.ಗಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಮೇಲ್ಜಾತಿಯ ಜನರಿಗೂ ಈ ಮೂಲಕ ಮೀಸಲಾತಿ ಸೌಲಭ್ಯ ಸಿಕ್ಕಂತಾಗಿದೆ. ವಿಪಕ್ಷಗಳು ನಿರೀಕ್ಷೆಯನ್ನೂ ಮಾಡಿರದ ನಡೆಯನ್ನು ಕೇಂದ್ರ ಸರ್ಕಾರ ಇಟ್ಟಿದೆ. ಈ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ 'ಮೇಲ್ಜಾತಿಗೂ ಮೀಸಲಾತಿ' ಎಂಬ ವಿಷಯವೇ ಎನ್ ಡಿಎ ಸರ್ಕಾರಕ್ಕೆ ಬಹುದೊಡ್ಡ ಲಾಭವನ್ನುಂಟು ಮಾಡುವ ಸಾಧ್ಯತೆ ನಿಚ್ಛಳವಾಗಿದೆ.
ಭೀತಿ ಮೂಡಿಸಿದ್ದ ಚುನಾವಣೆಯ ಸೋಲು
ಕಳೆದ ಡಿಸೆಂಬರ್ ನಲ್ಲಿ ಐದು ರಾಜ್ಯಗಳಲ್ಲೂ ಬಿಜೆಪಿ ಸೋಲು ಕಂಡಿದ್ದು ಕೇಂದ್ರ ಸರ್ಕಾರದ ನಿದ್ದೆ ಕೆಡಿಸಿತ್ತು. ಹೇಳಿ ಕೇಳಿ ಲೋಕಸಭಾ ಚುನಾವಣೆ ಕಣ್ಣೆದುರಲ್ಲಿದೆ. ಇಂಥ ಸಂದರ್ಭದಲ್ಲಿ ಐದು ರಾಜ್ಯಗಳಲ್ಲಿ ಸೋಲು ಕಂಡಿದ್ದು ಲೋಕಸಭಾ ಚುನಾವಣೆಯ ಮೇಲೂ ಪರಿಣಾಮ ಬೀರುವುದು ಖಂಡಿತ ಎಂಬುದನ್ನು ಅರಿತ ಕೇಂದ್ರ ಸರ್ಕಾರ ಮೇಲ್ಜಾತಿಗೂ ಮೀಸಲಾತಿ ನೀಡುವ ಹೊಸ ಯೋಚನೆಯನ್ನು ಕಾರ್ಯಕತಗೊಳಿಸಿದೆ. ಕೇಂದ್ರದ ಈ ನಡೆ ಲೋಕಸಭಾ ಚುನಾವಣೆಯ ದಿಕ್ಕನ್ನೇ ಬದಲಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
'ಮೀಸಲಾತಿ ಇರುವುದು ಸಾಮಾಜಿಕ ನ್ಯಾಯ ದೊರಕಿಸುವುದಕ್ಕೆ ಹೊರತು ಆರ್ಥಿಕ ವಿಚಾರಗಳಿಗಲ್ಲ'
ವಿಪಕ್ಷಗಳಿಗೆ ನುಂಗಲಾರದ ತುತ್ತು!
ಈ ಮೀಸಲಾತಿಯ ದಾಳ ವಿಪಕ್ಷಗಳ ನಿದ್ದೆ ಕೆಡಿಸಿರುವುದು ಖಂಡಿತ. ಈ ನಡೆಯನ್ನು ಸ್ವಾಗತಿಸಿದರೆ ಎನ್ ಡಿಎ ಸರ್ಕಾರವನ್ನು ಹೊಗಳಿದಂತೆ. ಒಪ್ಪದಿದ್ದರೆ ಮೇಲ್ಜಾತಿಯ ಮತಗಳನ್ನು ಕಳೆದುಕೊಳ್ಳುವ ಭಯ! ಒಟ್ಟಿನಲ್ಲಿ ವಿಪಕ್ಷಗಳನ್ನು ಅಡಕತ್ತರಿಯಲ್ಲಿ ಸಿಕ್ಕಿಸುವ ಕೆಲಸವನ್ನು ಮಾಡಿದೆ ಈ ಮೇಲ್ಜಾತಿಯ ಮೀಸಲಾತಿ ನಿರ್ಣಯ!
ಸಾಮಾನ್ಯವರ್ಗದವರಿಗೂ ಮೀಸಲಾತಿ ವಿಧೇಯಕ, ಲೋಕಸಭೆಯಲ್ಲಿ ಪಾಸ್
ಮಹಾಮೈತ್ರಿಕೂಟದಲ್ಲಿ ಒಡಕು
ಕೇಂದ್ರ ಸರ್ಕಾರದ ಈ ನಿರ್ಣಯವನ್ನು "ಚುನಾವಣಾ ಗಿಮಿಕ್" ಎಂದು ಹಲವು ವಿಪಕ್ಷಗಳು ಜರೆದಿವೆಯಾದರೂ, ಬೇರೆ ವಿಧಿಯಿಲ್ಲದೆ ಈ ನಡೆಯನ್ನು ಒಪ್ಪಿಕೊಂಡಿವೆ. ಬಿಎಸ್ಪಿಯ ಮಾಯಾವತಿ, ಟಿಎಂಸಿಯ ಮಮತಾ ಬ್ಯಾನರ್ಜಿ, ಜೆಡಿಎಸ್ ನ ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ಮಹಾಘಟಬಂಧನದಲ್ಲಿ ಕಾಣಿಸಿಕೊಳ್ಳಲಿರುವ ಪಕ್ಷಗಳೂ ಕೇಂದ್ರದ ಈ ನಡೆಯನ್ನು ಸ್ವಾಗತಿಸಿದ್ದು, ಕಾಂಗ್ರೆಸ್ಸಿಗೆ ಇರಿಸುಮುರಿಸುಂಟು ಮಾಡಿದೆ. ಮೀಸಲಾತಿ ಸಾಮಾಜಿಕ ಸ್ಥಿತಿಯನ್ನು ಆಧರಿಸಿ ಇರಬೇಕು ಮತ್ತು ಮೇಲ್ಜಾತಿಗೆ ಮೀಸಲಾತಿ ನೀಡುವ ಮೂಲಕ ಅಂಬೇಡ್ಕರ್ ಅವರ ಆದರ್ಶವನ್ನು ಗಾಳಿಗೆ ತೂರಲಾಗುತ್ತಿದೆ ಎಂಬ ಕಾಂಗ್ರೆಸ್ ದೂರನ್ನೂ ಯಾರೂ ಕಿವಿಗೆ ಹಾಕಿಕೊಂಡಂತೆ ಕಾಣುತ್ತಿಲ್ಲ. ಕೇಂದ್ರ ಸರ್ಕಾರದ ಈ ನಡೆಯಿಂದ ವಿಪಕ್ಷಗಳಲ್ಲೇ ಪರ-ವಿರೋಧದ ಎರಡು ಬಣಗಳನ್ನು ಸೃಷ್ಟಿಸಬಹುದು ಎಂಬ ಅನುಮಾನ ದಟ್ಟವಾಗಿದೆ.
ಅನಿರೀಕ್ಷಿತ ಬೆಳವಣಿಗೆ
ಮೇಲ್ಜಾತಿಗೂ ಮೀಸಲಾತಿ ನೀಡುವ ತನ್ನ ನಿರ್ಧಾರವನ್ನು ಸರ್ಕಾರ ಗೌಪ್ಯವಾಗಿಟ್ಟಿತ್ತು. ಘೋಷಣೆಗೂ ಮೂರು ದಿನ ಮೊದಲು ಪ್ರಧಾನಿ ಅವರ ಗೃಹ ಕಚೇರಿಯಲ್ಲಿ ಸಭೆ ನಡೆದರೂ, ಈ ಮಸೂದೆ ಬಗ್ಗೆ ಹೆಚ್ಚು ಚರ್ಚೆ ನಡೆದಿರಲಿಲ್ಲ. ಮೊದಲೇ ತಿಳಿದರೆ ವಿಪಕ್ಷಗಳು ಸದನದಲ್ಲಿ ಗದ್ದಲ ಎಬ್ಬಿಸಬಹುದು ಎಂಬ ಕಾರಣಕ್ಕೆ ಸರ್ಕಾರ ಇದನ್ನು ಆದಷ್ಟು ಗೌಪ್ಯವಾಗಿಯೇ ಇಟ್ಟಿತ್ತು. ಅದೂ ಅಲ್ಲದೆ, ಮುಂಗಾರು ಅಧಿವೇಶನದ ಕೊನೆಯ ದಿನವಾದ ನಿನ್ನೆ(ಮಂಗಳವಾರ) ಈ ಕುರಿತ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನೂ ಮಂಡಿಸಿದ್ದರಿಂದ ವಿರೋಧಿಸುವುದಕ್ಕೂ ವಿಪಕ್ಷಗಳಿಗೆ ಹೆಚ್ಚು ಅವಕಾಶ ಸಿಕ್ಕಲಿಲ್ಲ.
ಯುಪಿಎ ಅವಧಿಯಲ್ಲೇ ಪ್ರಸ್ತಾಪ
2006 ರಲ್ಲಿ ನೇಮಿಸಲಾಗಿದ್ದ ಎಸ್ ಆರ್ ಸಿನ್ಹೋ ಸಮಿತಿಯು ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯ ಜನರಿಗೂ ಒಬಿಸಿಗಳಿಗೆ ನೀಡಿದಷ್ಟೇ ಮೀಸಲಾತಿ ನೀಡಬೇಕು ಎಂಬ ಶಿಫಾರಸನ್ನು ಅಂದಿನ ಯುಪಿಎ ಸರ್ಕಾರದ ಮುಂದಿಟ್ಟಿತ್ತು. ಆದರೆ ಕಾರಣಾಂತರಗಳಿಂದ ಯುಪಿಎ ಸರ್ಕಾರ ಅದನ್ನು ಮಂಡಿಸಿರಲಿಲ್ಲ. ಆದರೆ ಅದೇ ವಿಷಯವನ್ನಿಟ್ಟುಕೊಂಡು ಇದೀಗ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಭಾರೀ ದಾಳವೊಂದನ್ನು ಬೀಳಿಸಿದೆ. ಲೋಕಸಭಾ ಚುನಾವಣೆಯ ಮೇಲೆ ಇದು ಯಾವ ರೀತಿ ಪರಿಣಾಮ ಬೀರಬಹುದು ಎಂಬುದನ್ನು ಕಾದುನೋಡಬೇಕು.
ಯಾರಿಗೆ ಉಪಯೋಗ?
ವಾರ್ಷಿಕ ಆದಾಯ 8 ಲಕ್ಷ ರೂ.ಗಿಂತ ಕಡಿಮೆ ಇರುವ ಬ್ರಾಹ್ಮಣ, ರಜಪೂತ್, ಠಾಕೂರ್, ಬನಿಯಾ ,ಪಟೇಲ್, ಗುಜ್ಜರ್ ಹಾಗೂ ಜಾಟ್ ಜಾತಿಗಳಿಗೆ ಈ ಮೀಸಲಾತಿ ಸೌಲಭ್ಯ ಸಿಗಲಿದೆ.