ನವಭಾರತ ನಿರ್ಮಾಣಕ್ಕೆ ಕರೆಕೊಟ್ಟ ರಾಷ್ಟ್ರಪತಿ ರಾಮನಾಥ್ ಕೋವಿಂದ್
ನವದೆಹಲಿ, ಜನವರಿ.25: ಭಾರತದಲ್ಲಿ 71ನೇ ಗಣರಾಜ್ಯೋತ್ಸವ ಸಂಭ್ರಮದ ಹಿನ್ನೆಲೆ ದೇಶವನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾತನಾಡಿದ್ದಾರೆ. ಸಂವಿಧಾನದ ಹಬ್ಬವನ್ನು ಆಚರಿಸಲು ಸರ್ವರಿಗೂ ಮನಪೂರ್ವಕ ಸ್ವಾಗತ ಕೋರಿದ್ದಾರೆ. ದೇಶ-ವಿದೇಶದಲ್ಲಿರುವ ಎಲ್ಲ ಭಾರತೀಯ ಪ್ರಜೆಗಳಿಗೆ ರಾಷ್ಟ್ರಪತಿಗಳು ಗಣರಾಜ್ಯೋತ್ಸವದ ಶುಭಾಷಯ ತಿಳಿಸಿದ್ದಾರೆ.
ಭಾರತವು ಪ್ರಜಾಪ್ರಭುತ್ವದ ದೇಶವಾಗಿದ್ದು, ಇಲ್ಲಿನ ಸಂವಿಧಾನವು ಪ್ರಜೆಗಳಿಗೆ ಸಾಕಷ್ಟು ಮೂಲಭೂತ ಹಕ್ಕುಗಳನ್ನು ನೀಡಿದೆ. ಇದರ ಜೊತೆಗೆ ಸಂವಿಧಾನದ ವ್ಯಾಪ್ತಿಯಲ್ಲಿ ಪ್ರಜೆಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕಿದೆ.
ಈ ಬಾರಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ 22 ಸ್ತಬ್ಧಚಿತ್ರಗಳ ಪ್ರದರ್ಶನ
ಸ್ವಾತಂತ್ರ್ಯ, ಸಮಾನತೆ, ಪ್ರಜಾಸತ್ತಾತ್ಮಕ ನ್ಯಾಯ ಹಾಗೂ ಸಹೋದರತ್ವದ ಬಗ್ಗೆ ರಾಮನಾಥ್ ಕೋವಿಂದ್ ಮಾತನಾಡಿದರು. ಪ್ರಜಾಪ್ರಭುತ್ವ ದೇಶದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಅವಿಭಾಜ್ಯ ಅಂಗಗಳಾಗಿ ಕಾರ್ಯ ನಿರ್ವಹಿಸುತ್ತಿವೆ.
ನವಭಾರತ ನಿರ್ಮಾಣಕ್ಕೆ ರಾಷ್ಟ್ರಪತಿ ಕರೆ:
ನವಭಾರತ ನಿರ್ಮಾಣ ಮಾಡುವಲ್ಲಿ ಯುವಕರು ಮುಂದೆ ಬರಬೇಕು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕರೆ ನೀಡಿದರು. ದೇಶವನ್ನು ಮುನ್ನೆಡೆಸಲು ತುರ್ತಾಗಿ ನವಭಾರತ ನಿರ್ಮಾಣ ಮಾಡುವ ಅಗತ್ಯವಿದೆ. ದೇಶದ ಯುವಕರು ಮನಸು ಮಾಡಿದರೆ, ಈ ಕಾರ್ಯ ಸಾಧ್ಯವಾಗುತ್ತದೆ. ಯುವಕರೆಲ್ಲ ಒಗ್ಗೂಡಿ ಕೆಲಸ ಮಾಡಿದ್ದಲ್ಲಿ ನವಭಾರತ ನಿರ್ಮಾಣದ ಕನಸು ನನಸಾಗುತ್ತದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕರೆ ನೀಡಿದರು.
ಆರೋಗ್ಯ ಮತ್ತು ಶಿಕ್ಷಣವು ಉತ್ತಮ ಸರ್ಕಾರಕ್ಕೆ ಭದ್ರಬುನಾದಿಯಾಗಿದೆ. ಕಳೆದ ಏಳು ದಶಕಗಳಲ್ಲಿ ಆರೋಗ್ಯ ಮತ್ತು ಶಿಕ್ಷಣ ರಂಗದಲ್ಲಿ ದೇಶವು ಸಾಕಷ್ಟು ಮುಂದುವರಿದಿದೆ ಎಂದು ರಾಮನಾಥ್ ಕೋವಿಂದ್ ಹೇಳಿದರು.