1200 ಕಿ.ಮೀ ಸೈಕಲ್ ಸವಾರಿಯಿಂದ ಪ್ರಧಾನಿ ಬಾಲ ಪುರಸ್ಕಾರದವರೆಗೆ!?
ನವದೆಹಲಿ, ಜನವರಿ.25: ಭಾರತ ಲೌಕ್ ಡೌನ್ 4.0 ಸಂದರ್ಭದಲ್ಲಿ ಅನಾರೋಗ್ಯ ಪೀಡಿತ ತಂದೆಯನ್ನು ಸೈಕಲ್ ನಲ್ಲಿ ಕೂರಿಸಿಕೊಂಡು ಏಳು ದಿನದಲ್ಲಿ 1,200 ಕಿಲೋ ಮೀಟರ್ ಕ್ರಮಿಸಿದ 16 ವರ್ಷದ ಜ್ಯೋತಿ ಕುಮಾರಿ ಅವರಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ.
ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗೆ ಭಾಜನರಾದ ಬಿಹಾರದ ದರ್ಭಾಂಗ್ ಮೂಲದ 16 ವರ್ಷದ ಜ್ಯೋತಿ ಕುಮಾರಿ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವಿಟರ್ ಸಂದೇಶದ ಮೂಲಕ ಶುಭಾಷಯ ಕೋರಿದ್ದಾರೆ.
ರಾಷ್ಟ್ರೀಯ ಬಾಲ ಪುರಸ್ಕಾರ-2021: 32 ಮಕ್ಕಳೊಂದಿಗೆ ಮೋದಿ ಸಂವಾದ
ಜನವರಿ.26ರಂದು ನಡೆಯಲಿರುವ ಗಣರಾಜೋತ್ಸವ ಸಮಾರಂಭದಲ್ಲಿ ಪುರಸ್ಕಾರಕ್ಕಾಗಿ 32 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಪಾಂಡಿತ್ಯಶಾಸ್ತ್ರ, ಕ್ರೀಡೆ, ನಾವೀನ್ಯತೆ, ಕಲೆ ಮತ್ತು ಸಾಂಸ್ಕೃತಿಕ, ಸಾಮಾಜಿಕ ಸೇವೆ ಮತ್ತು ಶೌರ್ಯ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ತೋರಿದ ಮಕ್ಕಳಿಗೆ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ನೀಡತ್ತಿದೆ.
|
ಸಾಧನೆಗೈದ ಬಾಲಕಿ ಬಗ್ಗೆ ಪ್ರಧಾನಿ ಮೆಚ್ಚುಗೆ
"ಅವಳು ತನ್ನ ವಯಸ್ಸಿನ ಇತರೆ ಹುಡುಗಿಯರಂತೆ ಸಾಮಾನ್ಯವಾಗಿ ಕಾಣಿಸಬಹುದು. ಆದರೆ, ಅನಾರೋಗ್ಯಪೀಡಿತ ತಂದೆಯನ್ನು ಸೈಕಲ್ನಲ್ಲಿ ಕೂರಿಸಿಕೊಂಡು 1,200 ಕಿಲೋಮೀಟರ್ ದೂರ ಕ್ರಮಿಸುವ ಮೂಲಕ ಅವಳು ಪ್ರದರ್ಶಿಸಿದ ಧೈರ್ಯ ಮತ್ತು ಶಕ್ತಿಯನ್ನು ಪದಗಳಲ್ಲಿ ವರ್ಣಿಸಲಾಗುವುದಿಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
1,200 ಕಿ.ಮೀ ಸೈಕಲ್ ಸವಾರಿ ಕಥೆ
ಆಟೋರಿಕ್ಷಾ ಚಾಲಕರಾಗಿದ್ದ 16 ವರ್ಷದ ಬಾಲಕಿ ಜ್ಯೋತಿ ಕುಮಾರಿ ಅವರ ತಂದೆಗೆ ಭಾರತ ಲಾಕ್ ಡೌನ್ 4.0 ಹಿನ್ನೆಲೆ ದುಡಿಮೆ ಇರಲಿಲ್ಲ. ಇದರ ಮಧ್ಯೆ ಅನಾರೋಗ್ಯಕ್ಕೆ ತುತ್ತಾದ ತಂದೆ ಹಾಗೂ ತಾನು ಹೊತ್ತಿನ ಊಟಕ್ಕೂ ಪರಿತಪಿಸುವಂತಾ ಪರಿಸ್ಥಿತಿ ಎದುರಾಗಿತ್ತು. ಇದರಿಂದ ಹತಾಶೆಕೊಂಡ ಜ್ಯೋತಿ ಕುಮಾರಿ ಸೆಕೆಂಡ್ ಹ್ಯಾಂಡ್ ಸೈಕಲ್ ವೊಂದನ್ನು ಖರೀಸಿದರು. ಅದೇ ಸೈಕಲ್ ನಲ್ಲಿ ಹರಿಯಾಣದಿಂದ ಬಿಹಾರದ ದರ್ಬಾಂಗ್ ವರೆಗೂ ಕ್ರಮಿಸಿದರು. ಅಂದರೆ 7 ದಿನಗಳಲ್ಲಿ 1200 ಕಿಲೋ ಮೀಟರ್ ದೂರವನ್ನು ಸೈಕಲ್ ನಲ್ಲಿ ತೆರಳಿದ್ದು, ಸಾಕಷ್ಟು ಸುದ್ದಿಯಾಗಿತ್ತು.
ಜ್ಯೋತಿಕುಮಾರಿ ಶಿಕ್ಷಣಕ್ಕೆ ಚಿರಾಗ್ ಪಾಸ್ವಾನ್ ಆಸರೆ
ಬಿಹಾರದ ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ 15 ವರ್ಷದ ಜ್ಯೋತಿ ಕುಮಾರಿ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಡತನದಲ್ಲಿರುವ ಕುಟುಂಬಕ್ಕೆ ನೆರವು ನೀಡುವುದರ ಜೊತೆಗೆ ಬಾಲಕಿಯ ಶಿಕ್ಷಣಕ್ಕೆ ಸಂಪೂರ್ಣ ಸಹಾಯ ಮಾಡುವುದಾಗಿ ತಿಳಿಸಿದ್ದರು. ದೇಶದ ಯಾವುದೇ ಮೂಲೆಯಲ್ಲಿ ಜ್ಯೋತಿಕುಮಾರಿ ತಮಗೆ ಇಷ್ಟಪಟ್ಟ ಕೋರ್ಸ್ ಗಳನ್ನು ಕಲಿಯಲಿ. ಅದರ ವೆಚ್ಚವನ್ನು ಭರಿಸುವ ಸಂಪೂರ್ಣ ಜವಾಬ್ದಾರಿಯನ್ನು ತಾವು ತೆಗೆದುಕೊಳ್ಳುವುದಾಗಿ ಚಿರಾಗ್ ಪಾಸ್ವಾನ್ ಘೋಷಿಸಿದ್ದರು.
ಮಗಳನ್ನು ಸೈಕಲಿಂಗ್ ತರಬೇತಿಗೆ ಕಳಿಸುತ್ತೇನೆ ಎಂದ ಅಪ್ಪ
ಪಿಂದರ್ಚು ಪ್ರೌಢಶಾಲೆಯಲ್ಲಿ 9ನೇ ತರಗತಿಗೆ ಓದುತ್ತಿರುವ ಜ್ಯೋತಿ ಕುಮಾರಿ ಅವರ ನಿವಾಸಕ್ಕೆ ಜಿಲ್ಲಾಡಳಿತ ಅಧಿಕಾರಿಗಳು ಭೇಟಿ ನೀಡಿದ್ದರು. ಈ ವೇಳೆ ಬಾಲಕಿಗೆ ಹೊಸ ಸೈಕಲ್, ಶಾಲಾ ಸಮವಸ್ತ್ರ ಹಾಗೂ ಬೂಟ್ ಗಳನ್ನು ವಿತರಿಸಿದ್ದರು. 1200 ಕಿಲೋ ಮೀಟರ್ ದೂರದಿಂದ ತಂದೆ ಮೋಹನ್ ಪಾಸ್ವಾನ್ ರನ್ನು ಸ್ವಗ್ರಾಮಕ್ಕೆ ಕರೆತಂದ ಮಗಳಿಗೆ ಉಚಿತವಾಗಿ ತರಬೇತಿ ನೀಡುವುದಕ್ಕೆ ಸೈಕಲ್ ಫೆಡರೇಷನ್ ಆಫ್ ಇಂಡಿಯಾ ಹೇಳಿತ್ತು.