ರಿಜಿಜು ಅವರ ವಿರುದ್ಧ ಕಾನೂನು ಹೋರಾಟ ಮಾಡುವೆ: ರೇಣುಕಾ ಚೌಧರಿ
ನವದೆಹಲಿ, ಫೆಬ್ರವರಿ 08: ಬಿಜೆಪಿ ಮುಖಂಡ, ಕೇಂದ್ರ ಗೃಹಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಹೇಳಿದ್ದಾರೆ.
ನಿನ್ನೆ(ಫೆ.7) ರಾಜ್ಯ ಸಭೆಯಲ್ಲಿ ಮೋದಿಯವರು ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಆಧಾರ್ ಥರದ ಗುರುತಿನ ಚೀಟಿಯ ಪರಿಕಲ್ಪನೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ್ದು ಎಂದಿದ್ದರು. ಇದನ್ನು ಕೇಳಿ ಗಹಗಹಿಸಿ ನಕ್ಕಿದ್ದ ರೇಣುಕಾ ಚೌಧರಿ ಅವರನ್ನು ನೋಡಿ, 'ಚೌಧರಿ ಅವರ ನಗುವನ್ನು ನೋಡಿ ನನಗೆ ರಾಮಾಯಣ ಧಾರಾವಾಹಿ ನೆನಪಿಗೆ ಬಂತು' ಎಂದು ಮೋದಿ ತಕ್ಷಣ ಕಿಚಾಯಿಸಿದ್ದರು.
ಪ್ರಧಾನಿ ಮೋದಿ, ಮಹಿಳಾ ವಿರೋಧಿ: ರೇಣುಕಾ ಚೌಧರಿ ಪ್ರತಿಕ್ರಿಯೆ
ಆದರೆ ಬಿಜೆಪಿ ನಾಯಕ ಕಿರಣ್ ರಿಜಿಜು ಅವರು ವಿಡಿಯೋವೊಂದರಲ್ಲಿ ರೇಣುಕಾ ಚೌಧರಿ ಅವರ ಹೆಸರನ್ನು ಉಲ್ಲೇಖಿಸದೆ, ಅವರನ್ನು ರಾಮಾಯಣದಲ್ಲಿ ಬರುವ ಶೂರ್ಪನಖಿ ಪಾತ್ರದೊಂದಿಗೆ ಹೋಲಿಕೆ ಮಾಡಿದ್ದರು. ಆದರೆ ಈಗ ಆ ವಿಡಿಯೋ ಡಿಲೀಟ್ ಆಗಿದೆಯಾದರೂ, ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಚೌಧರಿ, ರಿಜಿಜು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಪ್ರಧಾನಿ ಮೋದಿಯವರು ರೇಣುಕಾ ಚೌಧರಿ ಅವರನ್ನು ಅವಮಾನಿಸಿದ ಘಟನೆಗೆ ಸಂಬಂಧಿಸಿದಂತೆ ಇಂದು ಸಂಸತ್ತಿನಲ್ಲಿ ಕೆಲಕಾಲ ಕಾಂಗ್ರೆಸ್ಸಿಗರು ಗದ್ದಲ ಏರ್ಪಡಿಸಿದ್ದರಿಂದ ರಾಜ್ಯಸಭಾ ಕಲಾಪವನ್ನು ಕೆಲಕಾಲ ಮುಂದೂಡಲಾಗಿತ್ತು.