ಹುತಾತ್ಮ ಯೋಧರ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ಹೊತ್ತ ರಿಲಯನ್ಸ್
ನವದೆಹಲಿ, ಫೆಬ್ರವರಿ 16: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಫೆಬ್ರವರಿ 14ರಂದು ನಡೆದ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಹುತಾತ್ಮರಾದ ಎಲ್ಲಾ ಸೈನಿಕರ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೊತ್ತುಕೊಂಡು ರಿಲಯನ್ಸ್ ಸಂಸ್ಥೆ ಮಾನವೀಯತೆ ಮೆರೆದಿದೆ.
ಭಾರತ ಕಂಡು ಕೇಳರಿಯದಂತಹ ದಾಳಿ ಪುಲ್ವಾಮಾದಲ್ಲಿ ನಡೆದಿದೆ. ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಭಾರತದ ನಲವತ್ತಕ್ಕೂ ಹೆಚ್ಚು ಸೈನಿಕರು ವೀರಮರಣವನ್ನು ಹೊಂದಿದ್ದಾರೆ. ದೇಶಾದ್ಯಂತ ಆಕ್ರೋಶ ಮುಗಿಲುಮುಟ್ಟಿದೆ. ಇತ್ತ ತನ್ನ ಮನೆಯ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
Reliance Foundation reaches out to families of Pulwama CRPF Martyrs #MediaRelease pic.twitter.com/nBttJmf6Iy
— Flame of Truth (@flameoftruth) February 16, 2019
ಮನೆಯ ಆಧಾರವಾದ ಮಗ ದೇಶದ ರಕ್ಷಣೆ ಮಾಡುತ್ತಾ ಮೃತಪಟ್ಟಿರುವುದು ಕುಟುಂಬಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸರ್ಕಾರಗಳು, ಸಂಘ ಸಂಸ್ಥೆಗಳು, ಪರಿಹಾರದ ಮೂಲಕ ಸಹಾಯ ಮಾಡುತ್ತಿದೆ. ಇದೀಗ ಭಾರತದ ಪ್ರತಿಷ್ಠಿತ ಸಂಸ್ಥೆಯಾಗಿರುವ ರಿಲಯನ್ಸ್ ಫೌಂಡೇಷನ್ ತಾವು ನೆರವು ನೀಡುವುದಾಗಿ ತಿಳಿಸಿದ್ದಾರೆ.
ನೀತಾ ಅಂಬಾನಿ ಒಡೆತನದ ಸಂಸ್ಥೆ ಇದಾಗಿದೆ. ಪಾಕಿಸ್ತಾನಿ ಉಗ್ರಗಾಮಿಗಳ ಅಟ್ಟಹಾಸಕ್ಕೆ ಹುತಾತ್ಮರಾದ ಎಲ್ಲಾ ಭಾರತೀಯ ಸೈನಿಕರ ಯೋಧರ ಮಕ್ಕಳ ವಿದ್ಯಾಭ್ಯಾಸವನ್ನು ರಿಲಯನ್ಸ್ ಫೌಂಡೇಷನ್ ನೋಡಿಕೊಳ್ಳುವುದಾಗಿ ಘೋಷಿಸಿದೆ. ಅದರ ಜೊತೆ ನೌಕರಿಯ ಜವಾಬ್ದಾರಿಯನ್ನೂ ಹೊರಲು ತಯಾರಿರುವುದಾಗಿ ತಿಳಿಸಿದೆ.