ಆಗಸ್ಟ್ 15ರವರೆಗೂ ಕೆಂಪುಕೋಟೆಯಲ್ಲಿ ಸಾರ್ವಜನಿಕ ಪ್ರವೇಶ ನಿರ್ಬಂಧ
ನವದೆಹಲಿ, ಜುಲೈ 21: ಐತಿಹಾಸಿಕ ಕೆಂಪುಕೋಟೆಯನ್ನು ಬುಧವಾರದಿಂದ ಮುಂದಿನ ಆಗಸ್ಟ್ 15ರವರೆಗೂ ಮುಚ್ಚಲಾಗುತ್ತಿದ್ದು, ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧಿಸಲಾಗುವುದು ಎಂದು ಭಾರತೀಯ ಪುರಾತತ್ವ ಸಮೀಕ್ಷೆ ತಿಳಿಸಿದೆ.
ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ತಾಣಗಳು ಮತ್ತು ಉಳಿದ ನಿಯಮಗಳು, 1959ರ ನಿಯಮ 6ರ ಅಡಿಯಲ್ಲಿ ಭಾರತೀಯ ಪುರಾತತ್ವ ಸಮೀಕ್ಷೆ ನಿರ್ದೇಶಕರು ಈ ಕುರಿತು ನಿರ್ದೇಶನ ನೀಡಿದ್ದಾರೆ. ಜುಲೈ 21ರ ಬೆಳಗ್ಗೆಯಿಂದ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಮುಕ್ತಾಯವಾಗುವ ತನಕ ಕೆಂಪುಕೋಟೆಯಲ್ಲಿ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ ಎಂದು ಸೂಚಿಸಲಾಗಿದೆ.
ಕೆಂಪು ಕೋಟೆ ಮೇಲೆ ಕತ್ತಿವರಸೆ; ದೆಹಲಿ ಗಲಭೆ ಆರೋಪಿ ಬಂಧನ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹರಡುವಿಕೆ ಆತಂಕ ಮತ್ತು ಭದ್ರತೆ ದೃಷ್ಟಿಯಿಂದ ಜುಲೈ 15ರಿಂದ ಆಗಸ್ಟ್ 15ರವರೆಗೂ ಕೆಂಪುಕೋಟೆಯನ್ನು ಮುಚ್ಚುವಂತೆ ದೆಹಲಿ ಪೊಲೀಸರು ಪತ್ರ ಬರೆದಿದ್ದ ಹಿನ್ನೆಲೆ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ದೆಹಲಿಯಲ್ಲಿ ಭದ್ರತೆ ಬಿಗಿಗೊಳಿಸಿದ ಪೊಲೀಸರು:
ಸ್ವಾತಂತ್ರ್ಯ ದಿನಾಚರಣೆ ದಿನ ಸನ್ನಿಹಿತವಾಗುತ್ತಿದ್ದಂತೆ ರಾಷ್ಟ್ರ ರಾಜಧಾನಿಯಲ್ಲಿ ಪೊಲೀಸ್ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ದೆಹಲಿಯ ಸಿಂಘು, ಟಿಕ್ರಿ ಮತ್ತು ಗಾಜಿಪುರ್ ಗಡಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
30,000 ಪೊಲೀಸ್ ಸಿಬ್ಬಂದಿ ಗಸ್ತು:
ನವದೆಹಲಿಯಲ್ಲಿ ಕಳೆದ ಭಾನುವಾರ ಪೊಲೀಸ್ ಆಯುಕ್ತ ಬಾಲಾಜಿ ಶ್ರೀವಾಸ್ತವ್ ಸೂಚನೆ ಮೇರೆಗೆ 30,000 ಪೊಲೀಸ್ ಸಿಬ್ಬಂದಿ ರಾತ್ರಿಯಿಡೀ ನಗರದಾದ್ಯಂತ ಗಸ್ತು ತಿರುಗಿದರು. ನಗರದ ಎಲ್ಲ ಕಡೆಗಳಲ್ಲಿ ನಿಯೋಜನೆಗೊಂಡಿರುವ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿ ಜಾಗರೂಕತೆಯಿಂದ ದಿನದ 24*7 ಕಟ್ಟೆಚ್ಚರಿಕೆ ವಹಿಸಿ ಕರ್ತವ್ಯ ನಿರ್ವಹಿಸುವಂತೆ ಬಾಲಾಜಿ ಶ್ರೀವಾಸ್ತವ್ ಸೂಚನೆ ನೀಡಿದ್ದಾರೆ.
Recommended Video