ಡಿಕೆ ಶಿವಕುಮಾರ್ ಜಾಮೀನು ಅರ್ಜಿ ತಿರಸ್ಕೃತವಾಗಲು ಕಾರಣಗಳೇನು?
ನವದೆಹಲಿ, ಸೆಪ್ಟೆಂಬರ್ 25: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೆ ಒಳಗಾಗಿ ನ್ಯಾಯಾಂಗ ಬಂಧನ ಎದುರಿಸುತ್ತಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯನ್ನು ಇ.ಡಿ ವಿಶೇಷ ನ್ಯಾಯಾಲಯ ಬುಧವಾರ ತಿರಸ್ಕರಿಸಿದೆ. ಈ ತೀರ್ಪು ಪ್ರಶ್ನಿಸಿ ಗುರುವಾರ ದೆಹಲಿ ಹೈಕೋರ್ಟ್ಗೆ ಮನವಿ ಸಲ್ಲಿಸಲು ಡಿಕೆ ಶಿವಕುಮಾರ್ ಮುಂದಾಗಿದ್ದಾರೆ.
ಡಿಕೆ ಶಿವಕುಮಾರ್ ಅವರು ಜಾಮೀನು ಮಂಜೂರು ಮಾಡಲು ಅರ್ಹರಾಗಿಲ್ಲ ಎಂದು ರೋಸ್ ಅವೆನ್ಯೂ ಕೋರ್ಟ್ ಅಭಿಪ್ರಾಯಪಟ್ಟಿತ್ತು. ಅನಾರೋಗ್ಯದ ನೆಪವೊಡ್ಡಿ ಜಾಮೀನು ನೀಡಲು ಆಗುವುದಿಲ್ಲ. ಅಲ್ಲದೆ ಡಿಕೆ ಶಿವಕುಮಾರ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ವರದಿ ನೀಡಿದ್ದಾರೆ. ಅವರ ಆರೋಗ್ಯದಲ್ಲಿ ಯಾವುದೇ ಹೊಸ ಸಮಸ್ಯೆಗಳು ಕಂಡುಬಂದಿಲ್ಲ. ಒಂದು ವೇಳೆ ಅವರಿಗೆ ಅನಾರೋಗ್ಯ ಸಮಸ್ಯೆ ಕಾಡಿದರೆ ತಿಹಾರ್ ಜೈಲಿನ ಅಧಿಕಾರಿಗಳು ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.
ದೇವೇಗೌಡ್ರ ಪೂಜೆ ಫಲಿಸಲಿಲ್ಲ, ಡಿಕೆಶಿಗೆ ಜಾಮೀನು ಸಿಗಲಿಲ್ಲ!
ಡಿಕೆ ಶಿವಕುಮಾರ್ ಅವರ ವಿರುದ್ಧದ ಆರೋಪ ಗಂಭೀರವಾಗಿದೆ. ಅವರು ಪ್ರಭಾವಿ ವ್ಯಕ್ತಿಯಾಗಿದ್ದು, ಬಿಡುಗಡೆ ಹೊಂದಿದರೆ ತಮ್ಮ ಪ್ರಭಾವ ಬಳಸಿ ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅಲ್ಲದೆ, ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಅಕ್ರಮ ವ್ಯವಹಾರಗಳಿಗೂ ಡಿಕೆ ಶಿವಕುಮಾರ್ ಅವರ ಕುಟುಂಬದ ಖಾತೆಗಳಲ್ಲಿ ನಡೆದ ವರ್ಗಾವಣೆಗೂ ಇರುವ ಸಂಬಂಧ ಮತ್ತು ಅದರೊಂದಿಗೆ ವ್ಯಕ್ತಿಗಳ ನಂಟುಗಳ ಬಗ್ಗೆ ಸಹ ತನಿಖೆ ನಡೆಯಬೇಕಿದೆ ಎಂಬ ಇಡಿ ಪರ ವಕೀಲರ ವಾದವನ್ನು ನ್ಯಾಯಾಲಯ ಪರಿಗಣಿಸಿತ್ತು. ಈ ವಾದಗಳನ್ನು ಪುರಸ್ಕರಿಸಿದ ನ್ಯಾಯಾಲಯ ಜಾಮೀನನ್ನು ನಿರಾಕರಿಸಿದೆ. ಈ ನಿರಾಕರಣೆಗೆ ಕಾರಣಗಳೇನು? ಮುಂದೆ ಓದಿ.
ಕುಟುಂಬದವರ ವಿಚಾರಣೆ ಅಗತ್ಯವಿದೆ
ಡಿಕೆ ಶಿವಕುಮಾರ್ ಅವರ 317 ಬ್ಯಾಂಕ್ ಖಾತೆಗಳಲ್ಲಿ ಹಣದ ವಹಿವಾಟು ನಡೆಸಲಾಗಿದೆ. 1997-2017ರ ಅವಧಿಯಲ್ಲಿ ಡಿಕೆ ಶಿವಕುಮಾರ್ ಅವರು ತಮ್ಮ ಕೃಷಿ ಆದಾಯ 1.38 ಕೋಟಿ ರೂ. ಎಂದು ನಮೂದಿಸಿದ್ದರು. ಈಗ ಅದು ಏಕಾಏಕಿ ಹೆಚ್ಚಾಗಿದೆ. ಅಲ್ಲದೆ ಅವರು ಘೋಷಣೆಯಾದ ಆಸ್ತಿಯೇ 800 ಕೋಟಿ ರೂ. ಇದೆ. ಅವರು ಆಸ್ತಿ ಘೋಷಣೆ ಮಾಡಿದ್ದರೂ ಆದಾಯದ ಮೂಲ ತೋರಿಸಿಲ್ಲ. ಅವರ ಕುಟುಂಬದವರ ಹೆಸರಿನಲ್ಲಿ ಆಸ್ತಿ ಇದ್ದು, ಹಣ ವರ್ಗಾವಣೆಯೂ ಆಗಿದೆ. ಇನ್ನೂ ಅವರ ತಾಯಿ, ಸಹೋದರ ಮತ್ತು ಪತ್ನಿಯ ವಿಚಾರಣೆ ನಡೆಸಿಲ್ಲ. ಜಾಮೀನು ನೀಡಿದರೆ ಅವರ ವಿಚಾರಣೆಗೆ ತೊಂದರೆಯಾಗುತ್ತದೆ.
ಸಾಕ್ಷ್ಯ ನಾಶ ಸಾಧ್ಯತೆ
ಡಿಕೆ ಶಿವಕುಮಾರ್ ಅವರು ಬಹಳ ಪ್ರಭಾವಶಾಲಿ ವ್ಯಕ್ತಿ. ಅವರು ಸರ್ಕಾರದ ಭಾಗವಾಗಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅವರ ಆಸ್ತಿ ಗಣನೀಯ ಹೆಚ್ಚಳವಾಗಿದೆ. ಅಂದರೆ ಅವರು ಅಧಿಕಾರ ದುರುಪಯೋಗ ಮಾಡಿರುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ದಾಖಲೆಗಳು ದೊರಕಿದ್ದು, ಇನ್ನಷ್ಟು ವಿಚಾರಣೆ ನಡೆಸಬೇಕಿರುವುದರಿಂದ ಅವರು ಹೊರಗಿದ್ದರೆ ತನಿಖೆಗೆ ಹಿನ್ನಡೆಯಾಗಲಿದೆ. ಅವರು ಸಾಕ್ಷ್ಯ ನಾಶಮಾಡಬಹುದು.
ಡಿಕೆಶಿ ಆಪ್ತರ ವಿಚಾರಣೆಯಾಗಬೇಕು
ಡಿಕೆ ಶಿವಕುಮಾರ್ ಅವರ ವ್ಯವಹಾರಗಳಲ್ಲಿ ಅವರ ಕುಟುಂಬದವರು ಮಾತ್ರವಲ್ಲದೆ ಅನೇಕರು ಭಾಗಿಯಾಗಿದ್ದಾರೆ. ಹಣದ ವ್ಯವಹಾರ ದೊಡ್ಡಮಟ್ಟದಲ್ಲಿ ನಡೆದಿದೆ. ಹೀಗಾಗಿ ಇನ್ನಷ್ಟು ಮಂದಿಯನ್ನು ವಿಚಾರಣೆಗೆ ಒಳಪಡಿಸಬೇಕಿದೆ. ಈಗ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ನೀಡಿದರೆ ವಿಚಾರಣೆ ವೇಳೆ ಅವರ ಆಪ್ತರು ಪ್ರಶ್ನೆಗಳಿಗೆ ಉತ್ತರ ಸಿದ್ಧಪಡಿಸಿಕೊಂಡು ತನಿಖೆಯ ಹಾದಿ ತಪ್ಪಿಸುವ ಸಾಧ್ಯತೆ ಇರುತ್ತದೆ.
ಜಾಮೀನು ನಿರಾಕರಣೆ: ಡಿಕೆ ಶಿವಕುಮಾರ್ ಮುಂದಿನ ನಡೆ ಏನು?
ತನಿಖೆಗೆ ಸಹಕಾರ ನೀಡಿಲ್ಲ
ಡಿಕೆ ಶಿವಕುಮಾರ್ ಅವರು 14 ದಿನ ಜಾರಿ ನಿರ್ದೇಶನಾಲಯದ ವಶದಲ್ಲಿದ್ದರು. ಆದರೆ ಈ ಅವಧಿಯಲ್ಲಿ ಅನಾರೋಗ್ಯದ ಕಾರಣದಿಂದ ನಾಲ್ಕು ದಿನ ಆಸ್ಪತ್ರೆಯಲ್ಲಿಯೇ ಕಳೆದಿದ್ದಾರೆ. ವಿಚಾರಣೆಗೆ ಒಪ್ಪಿಸಿದ್ದ ಅವಧಿಯಲ್ಲಿ ಸರಿಯಾಗಿ ಸಹಕರಿಸಿಲ್ಲ. ಹೀಗಾಗಿ ಅಗತ್ಯ ಮಾಹಿತಿ ದೊರಕಿಲ್ಲ ಎಂದು ಇ.ಡಿ ನೀಡಿದ್ದ ಹೇಳಿಕೆಯನ್ನು ನ್ಯಾಯಾಲಯ ಮಾನ್ಯ ಮಾಡಿದೆ.
ತನಿಖೆಗೆ ಮುಕ್ತ ಅವಕಾಶ ಬೇಕು
ತನಿಖೆ ಈಗಷ್ಟೇ ಆರಂಭವಾಗಿರುವುದರಿಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಮುಕ್ತ ಹಾಗೂ ಪಾರದರ್ಶಕ ತನಿಖೆ ನಡೆಸಲು ಅವಕಾಶ ನೀಡಬೇಕಿದೆ. ಅಕ್ರಮ ಹಣ ವರ್ಗಾವಣೆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಂಗ್ರಹಿಸಬೇಕಿದೆ.
Breaking ಡಿಕೆ ಶಿವಕುಮಾರ್ಗೆ ಮತ್ತೆ ಕಹಿ: ಸದ್ಯಕ್ಕೆ ಜೈಲೇ ಗತಿ
ಹೇಳಿಕೆ ಬದಲಿಸಿದ್ದಾರೆ
ಇದು ಆರ್ಥಿಕ ಅಪರಾಧದ ಪ್ರಕರಣ. ಈ ಪ್ರಕರಣದಲ್ಲಿ ಕಠಿಣ ಕ್ರಮದ ಅಗತ್ಯವಿದೆ. ಆಸ್ತಿಗಳನ್ನು ನಗದು ಹಣ ನೀಡಿ ಖರೀದಿ ಮಾಡಲಾಗಿದೆ ಎಂಬ ಮಾಹಿತಿ ಇದೆ. ಈ ಕುರಿತು ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ದೆಹಲಿ ಮನೆಯಲ್ಲಿ ಸಿಕ್ಕ ಹಣ ಡಿಕೆ ಶಿವಕುಮಾರ್ ಅವರದ್ದೇ ಎಂದು ಮೊದಲು ಹೇಳಲಾಗಿತ್ತು. ಆದರೆ ಬಳಿಕ ಆ ಹೇಳಿಕೆಯನ್ನು ಬದಲಿಸಲಾಗಿದೆ.