ಅಯೋಧ್ಯಾ ವಿವಾದ: ನ್ಯಾಯಪೀಠದಿಂದ ಉದಯ್ ಲಲಿತ್ ಹಿಂದೆ ಸರಿದಿದ್ದೇಕೆ?
ನವದೆಹಲಿ, ಜನವರಿ 10: ಅಯೋಧ್ಯಾ ವಿವಾದ ಪ್ರಕರಣದ ವಿಚಾರಣೆಯನ್ನು ಗುರುವಾರ ಕೈಗೆತ್ತಿಕೊಂಡ ಬೆನ್ನಲ್ಲೇ ಸುಪ್ರೀಂಕೋರ್ಟ್ ಅದನ್ನು ಜ.29ಕ್ಕೆ ಮುಂದೂಡಿದೆ. ಇದಕ್ಕೆ ಕಾರಣ ಸಾಂವಿಧಾನಿಕ ಪೀಠದ ಐವರು ನ್ಯಾಯಮೂರ್ತಿಗಳಲ್ಲಿ ಒಬ್ಬರಾದ ಉದಯ್ ಯು. ಲಲಿತ್ ವಿಚಾರಣೆಯಿಂದ ಹಿಂದಕ್ಕೆ ಸರಿದಿರುವುದು.
ಉದಯ್ ಲಲಿತ್ ಪೀಠದಲ್ಲಿದ್ದು, ವಿಚಾರಣೆ ಆರಂಭವಾಗಬೇಕಾದ ದಿನವೇ ದಿಢೀರನೆ ಹಿಂದಕ್ಕೆ ಸರಿಯಲು ಕಾರಣವಾಗಿರುವ ಅಂಶ ಈಗ ವ್ಯಾಪಕ ಚರ್ಚೆಯಾಗುತ್ತಿದೆ. ಉದಯ್ ಲಲಿತ್ ಅವರು ಸಾಂವಿಧಾನಿಕ ಪೀಠದಲ್ಲಿ ವಿಚಾರಣೆಗೆ ಕೂರುವುದು ನೈತಿಕವಲ್ಲ ಎಂದು ಪೀಠದಿಂದ ನಿರ್ಗಮಿಸಿದ್ದಾರೆ.
ಅಯೋಧ್ಯೆ ವಿಚಾರಣೆ ಜ.29 ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್
1994ರಲ್ಲಿ ಉತ್ತರ ಪ್ರದೇಶದ ಆಗಿನ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ಪರವಾಗಿ ಆಗ ವಕೀಲರಾಗಿದ್ದ ಉದಯ್ ಲಲಿತ್ ವಾದಿಸಿದ್ದರು.
1992ರಲ್ಲಿ ಕಲ್ಯಾಣ್ ಸಿಂಗ್ ಅವರ ಅಧಿಕಾರಾವಧಿಯಲ್ಲಿಯೇ ಬಾಬ್ರಿ ಮಸೀದಿ ಧ್ವಂಸ ಘಟನೆ ನಡೆದಿತ್ತು. ಬಳಿ ಕಲ್ಯಾಣ್ ಸಿಂಗ್ ಅವರು ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಿದ್ದರು. ಇದರಲ್ಲಿ ಕಲ್ಯಾಣ್ ಸಿಂಗ್ ಪರ ಉದಯ್ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
ಸ್ವ ಇಚ್ಛೆಯಿಂದ ಹೊರನಡೆದ ಉದಯ್
ಇದನ್ನು ಮುಸ್ಲಿಂ ಅರ್ಜಿದಾರರ ಪರ ವಕೀಲ ರಾಜೀವ್ ಧವನ್ ಗುರುವಾರ ವಿಚಾರಣೆ ಆರಂಭವಾದಾಗ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತಂದಿದ್ದರು. ಆದರೆ, ನ್ಯಾ. ಉದಯ್ ಲಲಿತ್ ವಿಚಾರಣೆಯಿಂದ ಹಿಂದಕ್ಕೆ ಸರಿಯಬೇಕು ಎಂದು ಅವರು ಕೋರಿರಲಿಲ್ಲ. ಹಾಗಿದ್ದರೂ ಸ್ವತಃ ಉದಯ್ ಅವರೇ ಹೊರ ಹೋಗಲು ನಿರ್ಧರಿಸಿದರು.
ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ, ಎನ್ವಿ ರಮಣ ಮತ್ತು ಡಿ.ವೈ. ಚಂದ್ರಚೂಡ್ ಅವರನ್ನು ಒಳಗೊಂಡ ನ್ಯಾಯಪೀಠ ಕೂಡ ಈ ಅಂಶವನ್ನು ಮನಗಾಣಿತು.
ನ್ಯಾಯಾಂಗ ಆದೇಶ ಅಗತ್ಯ
ಈ ಪ್ರಕರಣವು ಮೂವರು ನ್ಯಾಯಮೂರ್ತಿಗಳ ನ್ಯಾಯಪೀಠ ವಿಚಾರಣೆ ನಡೆಸಲಿದೆ ಎಂದು ಈ ಹಿಂದೆ ಮುಖ್ಯ ನ್ಯಾಯಮೂರ್ತಿಗಳು ಪ್ರಕಟಿಸಿದ್ದರು. ಆದರೆ, ಅದನ್ನು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆಗೆ ಪಟ್ಟಿಯಲ್ಲಿ ಇರಿಸಲಾಯಿತು ಎಂಬುದನ್ನು ಧವನ್ ಗಮನಕ್ಕೆ ತಂದರು. ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ರಚಿಸಲು ನ್ಯಾಯಾಂಗ ಆದೇಶ ಹೊರಡಿಸುವುದು ಅಗತ್ಯವಾಗಿದೆ ಎಂಬುದನ್ನೂ ಅವರು ವಿವರಿಸಿದರು.
ಯುಯು ಲಲಿತ್ ಪ್ರಕರಣದಿಂದ ಹಿಂದೆ ಸರಿದಿದ್ದಕ್ಕೆ ವಿಹಿಂಪ ಹೇಳಿದ್ದೇನು?
ನ್ಯಾಯಪೀಠ ರಚನೆ ತಪ್ಪೇನಿಲ್ಲ
ಸುಪ್ರೀಂಕೋರ್ಟ್ನ ನಿಯಮದ ಪ್ರಕಾರ ಯಾವುದೇ ಬೆಂಚು ಕನಿಷ್ಠ ಇಬ್ಬರು ನ್ಯಾಯಮೂರ್ತಿಗಳನ್ನು ಒಳಗೊಂಡಿರಬೇಕು. ಅಲ್ಲದೆ, ಐವರು ನ್ಯಾಯಮೂರ್ತಿಗಳ ನ್ಯಾಯಪೀಠ ರಚಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.
ಪ್ರಕರಣದ ಸಂದರ್ಭ ಮತ್ತು ವಾಸ್ತವತೆಗಳನ್ನು ಗಮನದಲ್ಲಿರಿಸಿಕೊಂಡು ಇದು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ಸೂಕ್ತ ಎಂದು ನಿರ್ಧರಿಸಿದ್ದಾಗಿ ತಿಳಿಸಿದರು.
|
ಭಾಷಾಂತರದ್ದೇ ಸಮಸ್ಯೆ
ನ್ಯಾಯಾಲಯದ ಕೊಠಡಿಯಲ್ಲಿರುವ 50 ಟ್ರಂಕ್ಗಳಲ್ಲಿ ದಾಖಲೆಗಳಿದ್ದು, ನ್ಯಾಯಾಲಯದ ರಿಜಿಸ್ಟ್ರಿ ಸ್ವತಃ ಅವುಗಳನ್ನು ಪರಿಶೀಲನೆ ಮಾಡಲಿದ್ದಾರೆ. ಬಳಿಕ ಅವುಗಳನ್ನು ಸೀಲ್ ಮಾಡಿ ಇರಿಸಲಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಾರ ಪ್ರಮಾಣದ ದಾಖಲೆಗಳು ಇವೆ. ಕೆಲವು ದಾಖಲೆಗಳು ಸಂಸ್ಕೃತ, ಅರೇಬಿಕ್, ಉರ್ದು, ಹಿಂದಿ, ಅವಾಧಿ, ಪರ್ಷಿಯನ್ ಮತ್ತು ಗುರ್ಮುಖಿ ಭಾಷೆಗಳಲ್ಲಿದ್ದು, ಅವುಗಳ ತರ್ಜುಮೆ ಮಾಡಬೇಕಿದೆ. ಅಗತ್ಯ ಬಿದ್ದರೆ ನ್ಯಾಯಾಲಯದ ರಿಜಿಸ್ಟ್ರಿ ವೃತ್ತಿಪರ ಭಾಷಾಂತರಕಾರರ ಸೇವೆ ಪಡೆದುಕೊಳ್ಳಲಿದೆ ಎಂದು ನ್ಯಾಯಪೀಠ ಹೇಳಿದೆ.
ಹಿಂದಿ, ಅವಾಧಿ, ಗುರ್ಮುಖಿ, ಪರ್ಷಿಯನ್, ಉರ್ದು ದಾಖಲೆ ಭಾಷಾಂತರವೇ ಸವಾಲು