ಮುತ್ಸದ್ದಿ ಮುಲಾಯಂ ಮಾತಿಗೆ ಹರಿದುಬಂದ ತರಹೇವಾರಿ ಪ್ರತಿಕ್ರಿಯೆ
Recommended Video
ನವದೆಹಲಿ, ಫೆಬ್ರವರಿ 13 : ಸಂಸತ್ ಅಧಿವೇಶನದ ಕಡೆಯ ದಿನ ಮುಲಾಯಂ ಸಿಂಗ್ ಅವರು 'ಮೋದಿಯೇ ಮತ್ತೆ ಪ್ರಧಾನಿಯಾಗಲಿ' ಎಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ ನಂತರ, ಮಹಾಘಟಬಂಧನ್ ಸದಸ್ಯ ಪಕ್ಷಗಳಿಂದ ಅಸಮಾಧಾನದ ಮಾತುಗಳು ಹರಿದುಬರಲು ಆರಂಭಿಸಿವೆ.
ಮುಲಾಯಂ ಅವರು ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿ ಮಾತನಾಡುತ್ತಿದ್ದಾಗ ಅವರ ಹಿಂದೆಯೇ ಕುಳಿತಿದ್ದ, ನ್ಯಾಷನಲ್ ಕಾಂಗ್ರೆಸ್ ಪಕ್ಷದ ಸಂಸದೆ ಸುಪ್ರಿಯಾ ಸುಳೆ ಅವರು, "ಸನ್ಮಾನ್ಯ ಮುಲಾಯಂ ಸಿಂಗ್ ಯಾದವ್ ಅವರು ಇಂಥದೇ ಮಾತನ್ನು 2014ರಲ್ಲಿ ಮನಮೋಹನ ಸಿಂಗ್ ಅವರಿಗೂ ಹೇಳಿದ್ದರು ಎಂದು ಕೇಳಿದ್ದೆ" ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ಸೋನಿಯಾ ಪಕ್ಕದಲ್ಲೇ ಕುಳಿತು ಮೋದಿ ಪ್ರಧಾನಿ ಆಗಲೆಂದ ಮುಲಾಯಂ!
ಮೋದಿಯವರು ಕೂಡ ಮನಮೋಹನ್ ಸಿಂಗ್ ಅವರಂತೆ ಸೋಲುತ್ತಾರೆ ಎಂಬರ್ಥದ ಮಾತಿಗೆ, "ಮೇಡಂ ಯಾಕಿಷ್ಟು ಚಿಂತಿಸುತ್ತೀರಿ? 2014ರಲ್ಲಿ ಲೋಕಸಭೆ ಅವಧಿ ಮುಗಿಯುವ ಹೊತ್ತಿಗೆ ಸನ್ಮಾನ್ಯ ಡಾ. ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿ ಉಳಿದೇ ಇರಲಿಲ್ಲ" ಎಂದು ಟ್ವಿಟ್ಟಿಗರೊಬ್ಬರು ತಿರುಗೇಟು ನೀಡಿದ್ದಾರೆ.
ಮುಲಾಯಂ ಸಿಂಗ್ ಅವರದೇ ಸಮಾಜವಾದಿ ಪಕ್ಷದ ಧುರೀಣ ರವಿದಾಸ್ ಮಹ್ಲೋತ್ರಾ ಅವರು, ನಮ್ಮ ನೇತಾಜಿ ಅವರು ಯಾವ ಅರ್ಥದಲ್ಲಿ ಈ ಮಾತನ್ನು ಹೇಳಿದ್ದಾರೋ ನಮಗೆ ಗೊತ್ತಿಲ್ಲ. ಆದರೆ, ಕೇಂದ್ರದಲ್ಲಿ ನಾವು ಸರಕಾರವನ್ನು ಬದಲಾಯಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಅವರ ಕ್ಷೇತ್ರದಲ್ಲಿ ಸೋಲುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಮುಲಾಯಂ ಅವರ ಶಾಕಿಂಗ್ ಹೇಳಿಕೆಗೆ ದಿಗ್ಮೂಢರಾದಂತೆ ಕಂಡುಬಂದ ರಾಹುಲ್ ಗಾಂಧಿ ಅವರು, ನಂತರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, "ನಾನು ಅವರ ಮಾತಿಗೆ ಸಹಮತ ವ್ಯಕ್ತಪಡಿಸುವುದಿಲ್ಲ. ಮುಲಾಯಂ ಸಿಂಗ್ ಯಾದವ್ ಜಿ ಅವರು ರಾಜಕೀಯದಲ್ಲಿ ಇನ್ನೂ ದೊಡ್ಡ ಪಾತ್ರ ವಹಿಸಬೇಕಾಗಿದೆ. ನಾನು ಅವರ ಅಭಿಪ್ರಾಯಕ್ಕೆ ಗೌರವ ಸೂಚಿಸುತ್ತೇನೆ" ಎಂದು ನುಡಿದಿದ್ದಾರೆ. ಮುಲಾಯಂ ಮಾತಿಗೆ ಹುಸಿನಗುವೇ ಸೋನಿಯಾ ಗಾಂಧಿ ಅವರ ಉತ್ತರವಾಗಿತ್ತು.
ಹೇಗಿದ್ದ ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಹೇಗಾಗಿ ಹೋದರು!
ಟ್ವಿಟ್ಟಿಗರಿಂದಲೂ ಹಲವಾರು ತರಹೇವಾರಿ ಪ್ರತಿಕ್ರಿಯೆಗಳು ಮೂಡಿಬರುತ್ತಿವೆ. ಒಬ್ಬರು, ನರೇಂದ್ರ ಮೋದಿಯವರು 10 ಸಮಾವೇಶ ನಡೆಸಿದಷ್ಟು ಪರಿಣಾಮವನ್ನು ಮುಲಾಯಂ ಸಿಂಗ್ ಯಾದವ್ ಅವರು ಒಂದೇ ಮಾತಿನಲ್ಲಿ ಮಾಡಿ ಮುಗಿಸಿದ್ದಾರೆ ಎಂದಿದ್ದಾರೆ. ಮುಲಾಯಂ ಸಿಂಗ್ ಅವರು ವಿರೋಧ ಪಕ್ಷದವರಾಗಿದ್ದರೂ, ಪ್ರಧಾನಿ ಮೋದಿಯವರ ಕೆಲಸವನ್ನು ಶ್ಲಾಘಿಸಿ ಮುತ್ಸದ್ದಿತನವನ್ನು ಮೆರೆದಿದ್ದಾರೆ ಎಂದು ಮತ್ತೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸೈನಿಕರ ಜೀವಕ್ಕೆ ಬೆಲೆ ಇಲ್ಲವೇ? ಕೇಂದ್ರಕ್ಕೆ ಮುಲಾಯಂ ಪ್ರಶ್ನೆ
ಲೋಕಸಭೆ ಚುನಾವಣೆಗೂ ಮುನ್ನ ನಡೆದ ಕಡೆಯ ಸಂಸತ್ ಅಧಿವೇಶನದ ಕಡೆಯ ದಿನದಂದು ಬಿಜೆಪಿ ಮುಖದಲ್ಲಿ ಕಮಲದ ನಗೆಯರಳಿದೆ. ಒಂದೆಡೆ ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ಸಿಎಜಿ ಸಲ್ಲಿಸಿದ ವರದಿ ಬಿಜೆಪಿ ಪರವಾಗಿದ್ದರೆ, ಮತ್ತೊಂದೆಡೆ ಮುಲಾಯಂ ಸಿಂಗ್ ಅವರು ನರೇಂದ್ರ ಮೋದಿಯವರೇ ಮುಂದಿನ ಪ್ರಧಾನಿಯಾಗಬೇಕು ಎಂದು ಹಾರೈಸಿದ್ದಾರೆ. ವಿರೋಧ ಪಕ್ಷದವರು ಪ್ರತಿಭಟಿಸುವಲ್ಲಿ ಮತ್ತು ಮಹಾಘಟಬಂಧನ್ ಸಂಘಟಿಸುವಲ್ಲಿ ನಿರತರಾಗಿದ್ದಾರೆ.