ಲಸಿಕೆಯನ್ನೂ ರಾಜಕೀಯಗೊಳಿಸುತ್ತಿರುವುದು ಬೇಸರ; ಭಾರತ್ ಬಯೋಟೆಕ್
ನವದೆಹಲಿ, ಜನವರಿ 04: ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಡಿಸಿಜಿಐ ಭಾನುವಾರ ಅನುಮತಿ ನೀಡಿದ್ದು, ಅನುಮೋದನೆ ದೊರೆಯುತ್ತಿದ್ದಂತೆಯೇ ಲಸಿಕೆ ಬಳಕೆ ಬಗ್ಗೆ ಆಕ್ಷೇಪ ವ್ಯಕ್ತಗೊಂಡಿದೆ.
ಲಸಿಕೆಯ ಪರಿಣಾಮ ಹಾಗೂ ದಕ್ಷತೆ ಬಗ್ಗೆ ಸೂಕ್ತವಾಗಿ ಪರಿಶೀಲನೆ ನಡೆಸದೇ, ಸಮರ್ಪಕ ದಾಖಲೆಗಳು ದೊರೆಯುವ ಮುನ್ನವೇ ಅನುಮತಿ ನೀಡಿರುವುದು ಸರಿಯಲ್ಲ, ಇದು ಆತುರದ ನಿರ್ಧಾರ ಎಂದು ಕೆಲವು ತಜ್ಞರು ಅಭಿಪ್ರಾಯ ಪಟ್ಟಿದ್ದು, ಇದಕ್ಕೆ ಭಾರತ್ ಬಯೋಟೆಕ್ ನ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲಾ ಮಾಧ್ಯಮ ಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ...
"ಇದು ದೇಶಕ್ಕೆ ಹೆಮ್ಮೆಯ ವಿಷಯ"
ಭಾರತದಲ್ಲಿ ಕೊವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ ಅನುಮತಿ ದೊರೆತಿರುವುದು ಲಸಿಕೆ ಉತ್ಪನ್ನ ಅಭಿವೃದ್ಧಿಯಲ್ಲಿ ಭಾರತದ ದೈತ್ಯ ಹೆಜ್ಜೆ. ರಾಷ್ಟ್ರಕ್ಕೆ ಇದು ಹೆಮ್ಮೆಯ ವಿಷಯ. ಭಾರತದ ವೈಜ್ಞಾನಿಕ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು. ಆದರೆ ಲಸಿಕೆಯನ್ನೂ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ನನ್ನ ಕುಟುಂಬದ ಯಾವುದೇ ಸದಸ್ಯರು ರಾಜಕೀಯದಲ್ಲಿಲ್ಲ. ಲಸಿಕೆ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಎಂದು ಹೇಳಿದ್ದಾರೆ.
ಸಮರ್ಪಕ ದಾಖಲೆಗೂ ಮುನ್ನ ಕೋವ್ಯಾಕ್ಸಿನ್ ಲಸಿಕೆಗೆ ಅನುಮತಿ: ವಿಜ್ಞಾನಿಗಳ ಆಕ್ಷೇಪ
"ನಮ್ಮದು ಜಾಗತಿಕ ಸಂಸ್ಥೆ"
ಭಾರತದಲ್ಲಿ ಭಾರತ್ ಬಯೋಟೆಕ್ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುತ್ತಿದೆ. ಬ್ರಿಟನ್ ಒಳಗೊಂಡಂತೆ 12ಕ್ಕೂ ಹೆಚ್ಚಿನ ದೇಶಗಳಲ್ಲಿ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುತ್ತಿದ್ದೇವೆ. ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಹಾಗೂ ಇತರೆ ದೇಶಗಳಲ್ಲಿ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುತ್ತಿದ್ದೇವೆ. ನಮ್ಮದು ಭಾರತೀಯ ಸಂಸ್ಥೆ ಮಾತ್ರವಲ್ಲ, ಜಾಗತಿಕ ಸಂಸ್ಥೆ ಎಂದಿದ್ದಾರೆ. ಹೊಸ ಕೊರೊನಾ ರೂಪಾಂತರ ಸೋಂಕಿಗೆ ಕೊವ್ಯಾಕ್ಸಿನ್ ಪರಿಣಾಮಕಾರಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಒಂದು ವಾರ ಸಮಯ ಕೊಡಿ. ಈ ಕುರಿತ ಖಚಿತ ಮಾಹಿತಿಗಳನ್ನು ನಿಮ್ಮ ಮುಂದೆ ಇಡುತ್ತೇನೆ ಎಂದು ಹೇಳಿದ್ದಾರೆ.
"ಸುಮ್ಮನೆ ವದಂತಿ ಹಬ್ಬಿಸಬೇಡಿ"
ಲಸಿಕೆಯಲ್ಲಿ ಅನುಭವ ಇರದ ಸಂಸ್ಥೆ ನಮ್ಮದಲ್ಲ. 123 ದೇಶಗಳ ಸಂಪರ್ಕ ನಮಗಿದೆ. ನಾವು ಲಸಿಕೆ ಕುರಿತು ಸೂಕ್ತ ಮಾಹಿತಿ, ಅಂಕಿ ಅಂಶಗಳನ್ನು ನೀಡಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಜನರಿಗೆ ಸ್ವಲ್ಪ ತಾಳ್ಮೆ ಇರಬೇಕು. ಜಾಲತಾಣದಲ್ಲಿ ನಮ್ಮ ಕುರಿತು ಎಷ್ಟು ವರದಿಗಳು ಬಂದಿವೆ ಎನ್ನುವುದನ್ನು ನೋಡಬೇಕು. ಇದುವರೆಗೂ ನಮ್ಮ ಸಂಸ್ಥೆ ಬಗ್ಗೆ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ 70ಕ್ಕೂ ಹೆಚ್ಚು ವರದಿಗಳು ಪ್ರಕಟವಾಗಿವೆ. ಸುಮ್ಮನೆ ಜನರು ವದಂತಿ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದರು.
"700 ಮಿಲಿಯನ್ ಡೋಸ್ ಸಿದ್ಧಪಡಿಸುವ ಗುರಿ
ಪ್ರಸ್ತುತ ನಮ್ಮ ಬಳಿ 20 ಮಿಲಿಯನ್ ಡೋಸ್ ಗಳಿವೆ. 700 ಮಿಲಿಯನ್ ಡೋಸ್ ಗಳನ್ನು ಸಿದ್ಧಪಡಿಸುವ ಗುರಿ ಇದೆ. ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ ಲಸಿಕೆಗಳ ತಯಾರಿ ಮಾಡುವ ಯೋಜನೆಯಿದೆ. ಮೊದಲು ಲಸಿಕೆ ಬೆಲೆ ಅಧಿಕ ಎನಿಸಬಹುದು. ಉತ್ಪಾದನೆ ಹೆಚ್ಚುತ್ತಿದ್ದಂತೆ ದರವೂ ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾರೆ.