"ಕಾರು, ಬೈಕ್ ಬಳಸುವವರಿಗಷ್ಟೇ ಅಲ್ಲ, ಬೇರೆ ಕ್ಷೇತ್ರಕ್ಕೂ ತೈಲ ಬೆಲೆ ಪೆಟ್ಟು ಕೊಟ್ಟಿದೆ"
ನವದೆಹಲಿ, ಫೆಬ್ರವರಿ 25: ಕಾರು, ಬೈಕ್ಗಳನ್ನು ಬಳಸುವವರ ಮೇಲಷ್ಟೇ ಅಲ್ಲ, ಹಲವು ಕ್ಷೇತ್ರಗಳು, ಚಟುವಟಿಕೆಗಳ ಮೇಲೂ ತೈಲ ಬೆಲೆ ಏರಿಕೆ ಬಹುದೊಡ್ಡ ಪರಿಣಾಮ ಬೀರಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ ಏರಿಕೆ ದೇಶದಲ್ಲಿ ಹಲವು ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಕಾರು ಹಾಗೂ ಬೈಕ್ಗಳನ್ನು ಬಳಸುವ ಪ್ರಯಾಣಿಕರೊಂದಿಗೆ, ಉತ್ಪಾದನೆ, ಸರಕು ಸಾಗಣೆ ಹಾಗೂ ಇನ್ನಿತರ ಕ್ಷೇತ್ರಗಳು ಕೂಡ ಬೆಲೆ ಏರಿಕೆಯಿಂದ ತತ್ತರಿಸುತ್ತಿವೆ ಎಂದಿದ್ದಾರೆ. ಬಾಂಬೆ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ 185ನೇ ಸಂಸ್ಥಾಪನಾ ದಿನದ ಆಚರಣೆ ಸಂದರ್ಭ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ: ಎಲೆಕ್ಟ್ರಿಕ್ ಸ್ಕೂಟರ್ ಸವಾರಿ ಮಾಡಿದ ಮಮತಾ ಬ್ಯಾನರ್ಜಿ
ಈ ತೈಲಗಳ ಮೇಲೆ ತೆರಿಗೆ ಕಡಿತಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯದ ಕ್ರಮ ತೆಗೆದುಕೊಳ್ಳುವ ಅವಶ್ಯಕತೆಯಿದೆ. ಎರಡೂ ಸರ್ಕಾರಗಳು ಪರೋಕ್ಷ ತೆರಿಗೆಗಳನ್ನು ವಿಧಿಸುತ್ತಿವೆ ಎಂದು ತಿಳಿಸಿದರು.
ದೇಶದಲ್ಲಿನ ಕೊರೊನಾ ನಿರ್ವಹಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಅಧಿಕ ಮಟ್ಟದ ಹಣದ ಅವಶ್ಯಕತೆಯಿದ್ದು, ಸರ್ಕಾರಗಳ ಮೇಲೆ ಆದಾಯದ ಒತ್ತಡವಿದೆ ಎಂಬುದು ನಮಗೆ ಅರಿವಿಗೆ ಬಂದಿದೆ. ಕೊರೊನಾ ಸೋಂಕಿನಿಂದ ಕಳೆದ ಒಂದು ವರ್ಷ ಇಡೀ ವಿಶ್ವವೇ ಸಹಿಸಲಾಗದ ಸಂಕಟ ಎದುರಿಸಿದೆ ಎಂದರು.
ಕೊರೊನಾ ಸೋಂಕಿನ ಕೆಟ್ಟ ಪರಿಣಾಮಗಳನ್ನು ತಡೆಯಲು ವಿಶ್ವದಾದ್ಯಂತ ಸರ್ಕಾರ ಹಾಗೂ ಬ್ಯಾಂಕುಗಳು ಸಾಂಪ್ರದಾಯಿಕ ಹಾಗೂ ಅಸಾಂಪ್ರದಾಯಿಕ ನೀತಿಗಳೊಂದಿಗೆ ಸಾಕಷ್ಟು ಬೆಂಬಲ ನೀಡಿವೆ ಎಂದು ಶ್ಲಾಘಿಸಿದರು.