ಶಿಶು ಅತ್ಯಾಚಾರಿಗಳಿಗೆ ಕ್ಷಮಾದಾನದ ಅರ್ಜಿಗೆ ಅನುಮತಿಯನ್ನೇ ಕೊಡಬಾರದು: ಕೋವಿಂದ್
ನವದೆಹಲಿ, ಡಿಸೆಂಬರ್ 6: ನಿರ್ಭಯಾ ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ವಿನಯ್ ಶರ್ಮಾ ಸಲ್ಲಿಸಿದ್ದ ಕ್ಷಮಾದಾನದ ಮನವಿಯನ್ನು ಕೇಂದ್ರ ಗೃಹಸಚಿವಾಲಯ ಕೂಡ ತಿರಸ್ಕರಿಸಿದೆ.
ವಿನಯ್ ಶರ್ಮಾನ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದ ದೆಹಲಿ ಸರ್ಕಾರ ಅದನ್ನು ಗೃಹಸಚಿವಾಲಯಕ್ಕೆ ಕಳುಹಿಸಿತ್ತು. ಈ ಶಿಫಾರಸನ್ನು ಕೇಂದ್ರ ಗೃಹ ಸಚಿವಾಲಯ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಕಳುಹಿಸಿದೆ.
'ಪಶುವೈದ್ಯೆ' ಕೊಂದ ಪಾಪಿಗಳಾಯ್ತು, 'ನಿರ್ಭಯಾ' ನೀಚರಿಗೆಂದು ಶಿಕ್ಷೆ?
ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ ಕಡತವನ್ನು ಗೃಹ ಸಚಿವಾಲಯಕ್ಕೆ ವಾರದ ಆರಂಭದಲ್ಲಿ ಕಳುಹಿಸಿದ್ದರು. ಈ ಅರ್ಜಿಯನ್ನು ರಾಷ್ಟ್ರಪತಿಗಳ ಅಂತಿಮ ವಿವೇಚನೆಗಾಗಿ ರವಾನಿಸಲಾಗಿದೆ.
ರಾಜಸ್ಥಾನದಲ್ಲಿ ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಷ್ಟ್ರಪತಿ ಕೋವಿಂದ್, 'ಲೈಂಗಿಕ ಅಪರಾಧಗಳಿಂದ ಮಕ್ಕಳಿಗೆ ರಕ್ಷಣೆ ನೀಡುವ ಕಾಯ್ದೆ (ಪೋಕ್ಸೋ) ಕಾಯ್ದೆಯಡಿ ಅತ್ಯಾಚಾರದ ಶಿಕ್ಷೆಗೆ ಗುರಿಯಾದವರಿಗೆ ಯಾವುದೇ ಕ್ಷಮಾದಾನಕ್ಕೆ ಮನವಿ ಮಾಡುವ ಅವಕಾಶವನ್ನೇ ನೀಡಬಾರದು' ಎಂದು ಹೇಳಿದರು.
ನಿರ್ಭಯಾ ಅತ್ಯಾಚಾರಿಗೆ ಕ್ಷಮಾಧಾನ ಬೇಡ: ದೆಹಲಿ ಸರ್ಕಾರ
'ಮಹಿಳೆಯರ ರಕ್ಷಣೆ ಅತ್ಯಂತ ಗಂಭೀರ ವಿಚಾರ. ಪೋಕ್ಸೋ ಕಾಯ್ದೆಯಡಿ ಶಿಕ್ಷೆಗೆ ಒಳಗಾದ ಅತ್ಯಾಚಾರಿಗಳು ಕ್ಷಮಾದಾನ ಕೋರಿಕೆ ಅರ್ಜಿ ಸಲ್ಲಿಸುವ ಹಕ್ಕನ್ನು ಹೊಂದುವಂತಾಗಬಾರದು. ಕ್ಷಮಾದಾನದ ಅರ್ಜಿಯ ಕುರಿತು ಸಂಸತ್ ಪರಾಮರ್ಶೆ ನಡೆಸಬೇಕು' ಎಂದರು.
2012ರ ಡಿ. 16ರಂದು ರಾಜಧಾನಿ ದೆಹಲಿಯಲ್ಲಿ ನಡೆದ 23 ವರ್ಷದ ವಿದ್ಯಾರ್ಥಿನಿ ನಿರ್ಭಯಾ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಭೀಕರ ಹತ್ಯೆ ಪ್ರಕರಣ ದೇಶವನ್ನು ತಲ್ಲಣಗೊಳಿಸಿತ್ತು.