ರಾಹುಲ್ ಗಾಂಧಿ ಕಾಲೆಳೆದು ಸದನದಲ್ಲಿ ನಗೆಯುಕ್ಕಿಸಿದ ಸಚಿವ ಅಠವಲೆ
ನವದೆಹಲಿ, ಜೂನ್ 19: ಕೇಂದ್ರ ಸಚಿವ ರಾಮ್ದಾಸ್ ಅಠವಲೆ ತಮ್ಮ ಹಾಸ್ಯಪ್ರಜ್ಞೆಗೆ ಹೆಸರಾದವರು. ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ (ಆರ್ಪಿಐ) ಅಧ್ಯಕ್ಷರಾದ ಅವರು ರಾಜ್ಯಸಭೆಯ ಸದಸ್ಯರಾಗಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದೊಂದಿಗೆ ಗುರುತಿಸಿಕೊಂಡಿದ್ದಾರೆ.
ಲೋಕಸಭೆಯ ಸ್ಪೀಕರ್ ಆಗಿ ನೇಮಕಗೊಂಡ ಓಮ್ ಬಿರ್ಲಾ ಅವರನ್ನು ಸ್ವಾಗತಿಸುವ ಭಾಷಣದ ವೇಳೆ ಅಠವಲೆ ಅವರು 49ನೇ ಹುಟ್ಟುಹಬ್ಬ ಆಚರಿಸಿಕೊಂಡ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಶುಭಾಶಯ ಕೋರಿದರು. ಜತೆಗೆ ಗಾಂಧಿ ಕುಟುಂಬದ ಪ್ರಬಲ ನೆಲೆ ಅಮೇಥಿಯಲ್ಲಿ ರಾಹುಲ್ ಅವರು ಸ್ಮೃತಿ ಇರಾನಿ ಎದುರು ಆಘಾತಕಾರಿ ಸೋಲು ಅನುಭವಿಸಿದ ಸಂಗತಿಯನ್ನು ಮುಂದಿಟ್ಟುಕೊಂಡು ಅವರ ಕಾಲೆಳೆದರು.
ಭಾಷಣ ಮಾಡಲು ಎದ್ದು ನಿಂತ ಅಠವಲೆ, ಇಂದು ರಾಹುಲ್ ಗಾಂಧಿ ಅವರ ಜನ್ಮದಿನವಲ್ಲವೇ? ಇಂದೇ ಅಥವಾ ನಾಳೆಯೇ? ಎಂದು ಕೇಳಿದರು. ಆಗ ತಮ್ಮ ತಾಯಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪಕ್ಕ ಕುಳಿತಿದ್ದ ರಾಹುಲ್ ಗಾಂಧಿ ತಲೆಯಾಡಿಸಿದರು. ಇತರೆ ಕೆಲವು ಸದಸ್ಯರು ಇಂದೇ ಎಂದು ಖಚಿತಪಡಿಸಿದರು.
17 ನೇ ಲೋಕಸಭಾ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ, ಮೋದಿ ಅಭಿನಂದನೆ
ಬಳಿಕ ಮಾತು ಮುಂದುವರಿಸಿದ ಅಠವಲೆ, 'ಅವರು ನನ್ನ ಸ್ನೇಹಿತ. ನಿಮಗೆ ಈ ಜಾಗದಲ್ಲಿ ಕೂರಲು ಅವಕಾಶ ದೊರೆತಿದ್ದಕ್ಕೆ ಶುಭಾಶಯಗಳನ್ನು ಸಲ್ಲಿಸುತ್ತೇನೆ' ಎಂದು ಕಾಲೆಳೆದರು.
ಗಾಳಿ ಬೀಸುವ ದಿಕ್ಕು ನೋಡಿದೆ
ವಿರೋಧ ಪಕ್ಷದ ಬೆಂಚಿನ ಕಡೆಗೆ ಕೈ ತೋರಿಸುತ್ತಾ ಮಾತನಾಡಿದ ಅಠವಲೆ, 'ಆ ಜಾಗದಲ್ಲಿ ಕೂರಲು ನಿಮಗೆ ಅವಕಾಶ ಸಿಕ್ಕಿದ್ದರೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಯುಪಿಎ ಅಧಿಕಾರದಲ್ಲಿ ಇದ್ದಾಗ ನಾನು ಅದರ ಜತೆಗೆ ಇದ್ದೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಮುಖಂಡರು ಮತ್ತೆ ತಮ್ಮನ್ನು ಸೇರಿಕೊಳ್ಳುವಂತೆ ಕೋರಿದರು. ಆದರೆ, ನಾನು ಯಾವ ದಿಕ್ಕಿನೆಡೆಗೆ ಗಾಳಿ ಬೀಸುತ್ತಿದೆ ಎಂಬುದನ್ನು ನೋಡಿದೆ ಮತ್ತು ಎನ್ಡಿಎ ಜತೆ ಉಳಿದುಕೊಳ್ಳಲು ತೀರ್ಮಾನಿಸಿದೆ' ಎಂದು ಅವರು ಹೇಳಿದರು.
ಕಾಂಗ್ರೆಸ್ಸಿನ ಲೋಕಸಭಾ ನಾಯಕರಾಗಿ ಅಧೀರ್ ರಂಜನ್ ಚೌಧುರಿ
ಜನ ಬಯಸುವ ಪಕ್ಷ ಅಧಿಕಾರಕ್ಕೆ ಬರುತ್ತದೆ
ಅಠವಲೆ ಅವರ ಮಾತು ಗದ್ದಲ ಮೂಡಿಸಿತು. ಮಾತು ಮುಂದುವರಿಸಿದ ಅವರು, 'ನಾನು ಹೇಳಿದ್ದು ನೀವು ಸಾಕಷ್ಟು ಪ್ರಯತ್ನಿಸಿದ್ದೀರಿ ಎಂದು. ಈ ರೀತಿಯ ಘಟನೆಗಳು ಪ್ರಜಾಪ್ರಭುತ್ವದಲ್ಲಿ ನಡೆಯುತ್ತದೆ. ಜನರು ಯಾವ ಪಕ್ಷ ಬಯಸುತ್ತಾರೋ ಅದು ಅಧಿಕಾರಕ್ಕೆ ಬರುತ್ತಾರೆ. ನೀವು ಅಧಿಕಾರದಲ್ಲಿ ಇದ್ದಾಗ ನಾನು ನಿಮ್ಮ ಜತೆ ಇದ್ದೆ. ಈ ಬಾರಿ ಚುನಾವಣೆಗೂ ಮುನ್ನ ಕಾಂಗ್ರೆಸ್ ಮುಖಂಡರು, ನೀವು ಏಕೆ ಆ ಕಡೆ ಇದ್ದೀರಿ, ಇಲ್ಲಿಗೆ ಬನ್ನಿ ಎಂದು ಕರೆದರು. ಆದರೆ, ನಾನು ಅಲ್ಲಿಗೆ ಹೋಗಿ ಏನು ಮಾಡುವುದು? ಏಕೆಂದರೆ ಗಾಳಿ ಮೋದಿಜಿ ಅವರ ಕಡೆಗೆ ಬೀಸುತ್ತಿತ್ತು' ಎಂದರು.
ಇನ್ನೂ ಐದು ವರ್ಷ ನಮ್ಮ ಸರ್ಕಾರ ಇರಲಿದೆ
'ನಮ್ಮ ಸರ್ಕಾರ ಈಗ ಐದು ವರ್ಷ ಪೂರೈಸಲಿದೆ. ಬಳಿಕ ಮತ್ತೂ ಐದು ವರ್ಷ ಪೂರೈಸಲಿದೆ. ಉತ್ತಮ ಕೆಲಸಗಳನ್ನು ಮಾಡಲು ಮೋದಿ ಸಾಹಿಬ್ ಅವರು ಮುಂದುವರಿಯಲಿದ್ದಾರೆ. ನಿಮ್ಮನ್ನು ಅಷ್ಟು ಸುಲಭವಾಗಿ ಈ ಭಾಗಕ್ಕೆ ಬರಲು (ಆಡಳಿತ ಪಕ್ಷದ ಭಾಗ) ನಾವು ಬಿಡುವುದಿಲ್ಲ' ಎಂದು ಅಠವಲೆ ಹೇಳಿದಾಗ ಎನ್ಡಿಎ ಸಂಸದರು ಮೇಜು ಕುಟ್ಟಿ ಸ್ವಾಗತಿಸಿದರು.
ರಾಹುಲ್ ಗಾಂಧಿಗೆ ಹುಟ್ಟುಹಬ್ಬದ ಶುಭ ಕೋರಿದ ನರೇಂದ್ರ ಮೋದಿ
ರಾಹುಲ್- ಸೋನಿಯಾ ಮುಖದಲ್ಲಿಯೂ ನಗು
ಅಠವಲೆ ಅವರ ಮಾತನ್ನು ಕ್ರೀಡಾಮನೋಭಾವದಿಂದ ಸ್ವೀಕರಿಸಿದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ನಗು ಸೂಸುತ್ತಾ ಕುಳಿತಿದ್ದರು. ಅಠವಳೆ ಅವರ ಭಾಷಣದ ವೇಳೆ ಮೋದಿ ಹಲವು ಬಾರಿ ನಗುತ್ತಿರುವುದು ಕಂಡುಬಂತು. ಸದನದ ತುಂಬಾ ನಗು, ಕೂಗಾಟದ ಸದ್ದು ಕೇಳಿಬಂತು. ನೂತನವಾಗಿ ಆಯ್ಕೆಯಾದ ಸ್ಪೀಕರ್ ಓಂ ಬಿರ್ಲಾ ಅವರೂ ನಗುತ್ತಾ ಕುಳಿತಿದ್ದರು.
ಮಹಾರಾಷ್ಟ್ರದ ಕಾಂಗ್ರೆಸ್-ಎನ್ಸಿಪಿ ಮೈತ್ರಿಯೊಂದಿಗೆ ಕೈಜೋಡಿಸಿದ್ದ ಅಠವಲೆ ಅವರು 2009ರಲ್ಲಿ ಅವರಿಂದ ಹೊರಬಂದು 2011ರಲ್ಲಿ ಬಿಜೆಪಿ ಜತೆ ಸೇರಿಕೊಂಡಿದ್ದರು. ಪ್ರಸ್ತುತ ಮೋದಿ ಸರ್ಕಾರದಲ್ಲಿ ಅವರು ಸಾಮಾಜಿಕ ನ್ಯಾಯ ಸಚಿವರಾಗಿದ್ದಾರೆ.