ದೇಶದಾದ್ಯಂತ ಆಚರಣೆಗೊಂಡ ಸಂಭ್ರಮದ ರಕ್ಷಾ ಬಂಧನ
ನವದೆಹಲಿ, ಆಗಸ್ಟ್ 8: ಭ್ರಾತೃತ್ವದ ಸಂದೇಶ ಸಾರುವ ರಕ್ಷಾಬಂಧನ ಹಬ್ಬವನ್ನು ಭಾರತದಾದ್ಯಂತ ಸಂಭ್ರಮದಿಂದ ಆಚರಸಿಯಾಗಿದೆ. ನಿನ್ನೆ(ಆಗಸ್ಟ್ 7), ಅಂದರೆ ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲ್ಪಡುವ ಈ ಹಬ್ಬ ಭಾರತೀಯ ಸಂಸ್ಕೃತಿಯ ಶ್ರೀಮಂತ ಆಚರಣೆಗಳಲ್ಲೊಂದು.
ಸಹೋದರ-ಸಹೋದರಿಯರ ನಡುವಿನ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ, ದುಷ್ಟ ಶಕ್ತಿಗಳಿಂದ ತಂಗಿ-ಅಕ್ಕನನ್ನು ರಕ್ಷಿಸಲು ಸಹೋದರ ಅಭಯ ನೀಡುವ ಈ ವಿಭಿನ್ನ ಆಚರಣೆಯ ದಿನ ಹೆಂಗೆಳೆಯರೆಲ್ಲ ತಮ್ಮ ಸಹೋದರರಿಗೆ ರಕ್ಷೆ ಕಟ್ಟುವ ಮೂಲಕ ಅವರ ಬಗೆಗಿನ ತಮ್ಮ ಪ್ರೀತಿ-ಅಕ್ಕರೆಯನ್ನು ವ್ಯಕ್ತಪಡಿಸುತ್ತಾರೆ.
ಭಾರತದೊಂದಿಗೆ ನೇಪಾಳದ ಕೆಲವೆಡೆಯೂ ಈ ಹಬ್ಬವನ್ನು ಆಚರಿಸಲಾಗುತ್ತದೆ. ದೇಶಕಾಯುವ ಸೈನಿಕರಿಗೆ ರಾಖಿ ಕಟ್ಟಿ ನೀವೇ ನಮ್ಮ ನಿಜವಾದ ರಕ್ಷಕರು ಎಂದ ಲಲನೆಯರು, ಮರಕ್ಕೆ ರಕ್ಷೆ ಕಟ್ಟುವ ಮೂಲಕ ವೃಕ್ಷೋರಕ್ಷತಿ ರಕ್ಷಿತಃ ಎಂದ ಜಾರ್ಖಂಡ್ ನ ಬುಡಕಟ್ಟು ಮಹಿಳೆಯರು, ಚೀನೀ ರಾಖಿಗಳನ್ನು ನಿಷೇಧಿಸಿ, ತಾವೇ ರಾಖಿ ತಯಾರಿಸಿದ ಕಾಶ್ಮೀರದ ಹುಡುಗಿಯರು ಹೀಗೇ ದೇಶದ ವಿವಿಧೆಡೆಗಳಲ್ಲಿ ರಾಖಿ ಹಬ್ಬವನ್ನು ಒಬ್ಬೊಬ್ಬರು ಒಂದೊಂದು ರೀತಿ ಆಚರಿಸಿದರು.
ರಕ್ಷಾಬಂಧನವೆಂಬ ಪವಿತ್ರ ಬೆಸುಗೆ: ಏನಿದರ ಮಹತ್ವ?
ಚಿಕ್ಕ ಚಿಕ್ಕ ಮಕ್ಕಳು ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಖಿ ಕಟ್ಟಿ ಖುಷಿಪಟ್ಟರೆ, ಬ್ರಹ್ಮಕುಮಾರಿಯರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ರಾಖಿ ಕಟ್ಟಿ ಶುಭಹಾರೈಸಿದರು. ದೇಶದ ತುಂಬ ಭ್ರಾತೃತ್ವದ ಸಂಭ್ರಮ ಹುಟ್ಟಿಸಿದ ರಕ್ಷಾಬಂಧನ ಝಲಕು ಇಲ್ಲಿದೆ. (ಚಿತ್ರಕೃಪೆ: ಪಿಟಿಐ)
ಚಿಣ್ಣರಿಂದ ರಾಖಿ ಕಟ್ಟಿಸಿಕೊಂಡ ಪ್ರಧಾನಿ ಮೋದಿ
ನವದೆಹಲಿಯಲ್ಲಿ ಆಗಸ್ಟ್ 7 ರಂದು ಮೋದಿಯವರಿಗೆ ಪುಟ್ಟ ಪುಟ್ಟ ಮಕ್ಕಳು ರಾಖಿ ಕಟ್ಟಿ ಸಂಭ್ರಮಿಸಿದರು. ಪ್ರಧಾನಿ ಮೋದಿ ಸಹ ತಮ್ಮ ದಿನನಿತ್ಯದ ಬ್ಯುಸಿ ಶೆಡ್ಯೂಲ್ ನಡುವಲ್ಲೂ ಈ ಚಿಣ್ಣರೊಂದಿಗೆ ರಾಖಿ ಹಬ್ಬದ ಸಂಭ್ರಮ ಅನುಭವಿಸಿದರು. ಭಾರತದ ಭವಿಷ್ಯದ ನಾಗರಿಕರಿಗೆ ಶುಭಹಾರೈಸಿ, ಆಶೀರ್ವದಿಸಿದರು.
ಬ್ರಹ್ಮಕುಮಾರಿಯರಿಂದ ರಕ್ಷೆ
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ನವದೆಹಲಿಯಲ್ಲಿ ಬ್ರಹ್ಮಕುಮಾರಿಯರು ತಿಲಕ ಇಟ್ಟು, ರಕ್ಷೆ ಕಟ್ಟುವ ಮೂಲಕ ರಕ್ಷಾಬಂಧನದ ಶುಭಕೋರಿದರು.
ರಕ್ಷಾಬಂಧನ ಆಚರಿಸಿದ ರಾಜೆ
ಜೈಪುರದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ರಾಖಿ ಕಟ್ಟುವ ಮೂಲಕ ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೆ ರಕ್ಷಾಬಂಧನ ಆಚರಿಸಿದರು.
ಕೇಜ್ರಿವಾಲ್ ಗೂ ರಕ್ಷಾಬಂಧನದ ಸಂಭ್ರಮ
ದೆಹಲಿಯಲ್ಲಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ರಾಖಿ ಕಟ್ಟಿ, ರಕ್ಷಾಬಂಧನ ಆಚರಿಸಿದ ಶಾಲಾಮಕ್ಕಳು.
ಟಿಎಂಸಿ ರಾಖಿ!
ಪಶ್ಚಿಮ ಬಂಗಾಳದಲ್ಲಿ ವ್ಯಕ್ತಿಯೊಬ್ಬ ತೃಣಮೂಲ ಕಾಂಗ್ರೆಸ್ ಚಿಹ್ನೆ ಮತ್ತು ಟಿಎಂಸಿ ಮುಖ್ಯಸ್ಥೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭಾವಚಿತ್ರವುಳ್ಳ ರಾಖಿ ಕಟ್ಟಿಕೊಂಡು ಸಂಭ್ರಮಿಸಿದ್ದು ಹೀಗೆ
ರಕ್ಷಕರಿಗೆ ರಕ್ಷಕರಿಂದ 'ರಕ್ಷೆ'!
ಗಡಿ ಭದ್ರತಾ ಪಡೆ(ಬಿಎಸ್ ಎಫ್)ಯ ಮಹಿಳಾ ಸಿಬ್ಬಂದಿಗಳು, ತಮ್ಮ ಪುರುಷ ಸಹೋದ್ಯೋಗಿಗಳಿಗೆ ತಿಲಕ ಇಟ್ಟು ರಾಖಿ ಕಟ್ಟಿದ್ದು ಹೀಗೆ. ಪಶ್ಚಿಮ ಬಂಗಾಳದ ಬಲುರ್ಘಾಟ್ ಎಂಬ ಪ್ರದೇಶದಲ್ಲಿ.
ರಕ್ಷಾಬಂಧನ ಆಚರಣೆಗೆ ವಯಸ್ಸಿನ ಹಂಗಿಲ್ಲ
ಜಮ್ಮುವಿನ ವೃದ್ಧಾಶ್ರಮವೊಂದರಲ್ಲಿ ವಾಸವಾಗಿರುವ ವೃದ್ಧೆಯೊಬ್ಬರು ವ್ಯಕ್ತಿಯೊಬ್ಬರಿಗೆ ರಾಖಿ ಕಟ್ಟಿ ಸಂಭ್ರಮಿಸಿದ್ದು ಹೀಗೆ.
ಸೈನಿಕರಿಗೆ ರಾಖಿ
ಭುವನೇಶ್ವರದಲ್ಲಿ ಭಾರತೀಯ ಸೇನೆಯ ಸೈನಿಕರಿಗೆ ಯುವತಿಯರು ರಾಖಿ ಕಟ್ಟುವ ಮೂಲಕ ರಕ್ಷಾಬಂಧನದ ಶುಭಕೋರಿದರು.
ಅಣ್ಣನಿಗಾಗಿ ಕಾಯುತ್ತ...
ಜೈಲಿನಲ್ಲಿರುವ ತಮ್ಮ ಸಹೋದರರಿಗೆ ರಾಖಿ ಕಟ್ಟುವುದಕ್ಕಾಗಿ ಮಳೆಯನ್ನೂ ಲೆಕ್ಕಿಸದೆ ಅಲಹಾಬಾದ್ ನ ನೈನಿ ಸೆಂಟ್ರಲ್ ಜೈಲಿನ ಮುಂದೆ ಸಾಲು ಸಾಲಾಗಿ ನಿಂತಿದ್ದ ಮಹಿಳೆಯರು ಕಂಡಿದ್ದು ಹೀಗೆ.