ಹಣ ಕೀಳುವ ದಂಧೆಗಿಳಿದಿದ್ದ ರಾಕೇಶ್ ಅಸ್ಥಾನಾ : ಸಿಬಿಐ ಶಾಕಿಂಗ್ ಹೇಳಿಕೆ
ನವದೆಹಲಿ, ಅಕ್ಟೋಬರ್ 24 : ಭ್ರಷ್ಟಾಚಾರದ ಆರೋಪ, ಪ್ರತ್ಯಾರೋಪಗಳಿಂದ ಸಿಬಿಐ ಜರ್ಝರಿತವಾಗಿರುವಾಗಲೇ, ಸ್ಪೆಷಲ್ ಡೈರೆಕ್ಟರ್ ಆಗಿದ್ದ ರಾಕೇಶ್ ಅಸ್ಥಾನಾ ಮತ್ತು ಅವರ ಸಹಾಯಕ ಡಿಎಸ್ ಪಿ ದೇವೇಂದ್ರ ಕುಮಾರ್ ಅವರು, ತನಿಖೆಯ ಹೆಸರಿನಲ್ಲಿ ಹಣ ಕೀಳುವ ದಂಧೆಗಿಳಿದಿದ್ದರು ಎಂದು ದೆಹಲಿ ಹೈಕೋರ್ಟ್ ಮುಂದೆ ಹೇಳಿ, ಸಿಬಿಐ ತನ್ನ ಸಂಸ್ಥೆಗೇ ಮತ್ತಷ್ಟು ಮುಜುಗರ ತಂದಿದೆ.
ಈ ಬೆಳವಣಿಗೆಗಳಿಂದಾಗಿ ತೀವ್ರ ಆಘಾತಕ್ಕೊಳಗಾಗಿರುವ ಕೇಂದ್ರ ಸರಕಾರ ಇನ್ನಷ್ಟು ಮುಜುಗರ ತಪ್ಪಿಸಲು ಕಾರ್ಯಾಚರಣೆಗಿಳಿದಿದ್ದು, ಡೈರೆಕ್ಟರ್ ಅಲೋಕ್ ವರ್ಮಾ ಮತ್ತು ಆರೋಪಿ ಸ್ಥಾನದಲ್ಲಿರುವ ರಾಕೇಶ್ ಅಸ್ಥಾನಾ ಅವರನ್ನು ಸುದೀರ್ಘ ರಜಾದ ಮೇಲೆ ಮನೆಗೆ ಕಳಿಸಿದ್ದು, ಏಳಕ್ಕೂ ಹೆಚ್ಚು ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ರೋಗಗ್ರಸ್ಥವಾಗಿರುವ ಸಂಸ್ಥೆಯ ಸರ್ಜರಿಗಿಳಿದಿದೆ. ಅವರಿಬ್ಬರ ಸ್ಥಾನದಲ್ಲಿ ನಾಗೇಶ್ವರ ರಾವ್ ಅವರನ್ನು ಹಂಗಾಮಿ ನಿರ್ದೇಶಕರನ್ನಾಗಿ ಕೇಂದ್ರ ಸರಕಾರ ನೇಮಿಸಿದೆ.
ರಾಕೇಶ್ ಅಸ್ಥಾನ ಕೈಲಿದ್ದ ಮಲ್ಯ ಕೇಸ್ ಕತೆ ಏನಾಗಲಿದೆ?
"ಸಾರ್ವಜನಿಕ ಸೇವೆಯಲ್ಲಿ ನಿರತರಾಗಿದ್ದ ಈ ಅಧಿಕಾರಗಳ ವಿರುದ್ಧ ಮಾಡಲಾಗಿರುವ ಭ್ರಷ್ಟಾಚಾರದ ಆರೋಪದ ಗಾಂಭೀರ್ಯತೆಯನ್ನು ಪರಿಗಣಿಸಿ, ತನಿಖೆಯನ್ನು ಸರಿಯಾಗಿ ನಡೆಸುವ ಉದ್ದೇಶದಿಂದ ದೇವೇಂದ್ರ ಕುಮಾರ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ" ಎಂದು ವಿಶೇಷ ಸಿಬಿಐ ನ್ಯಾಯಮೂರ್ತಿ ಸಂತೋಷ್ ಸ್ನೇಹಿ ಅವರು ಹೇಳಿದ್ದರು.
ಬಂಧನ ತಪ್ಪಿಸುವಂತೆ ರಾಕೇಶ್ ಹೈಕೋರ್ಟ್ ಮೊರೆ
ಸಿಬಿಐ ನಲ್ಲಿ ನಂ.2ನೇ ಸ್ಥಾನದಲ್ಲಿದ್ದ ರಾಕೇಶ್ ಅಸ್ಥಾನಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದರಿಂದ, ತಮ್ಮ ಸಂಭಾವ್ಯ ಬಂಧನವನ್ನು ತಪ್ಪಿಸುವ ಉದ್ದೇಶದಿಂದ ರಾಕೇಶ್ ಅವರು ಅಕ್ಟೋಬರ್ 29ರವರೆಗೆ ಬಂಧಿಸದಂತೆ ಮಧ್ಯಂತರ ಆದೇಶ ಹೊರಡಿಸುವಂತೆ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ರಾಕೇಶ್ ಜೊತೆ ಭ್ರಷ್ಟಾಚಾರದ ಕೂಪದಲ್ಲಿ ಸಿಲುಕಿರುವ ಡಿಎಸ್ಪಿ ದೇವೇಂದ್ರ ಕುಮಾರ್ ಅವರು ಕೂಡ ಇದೇ ಆಗ್ರಹ ಇಟ್ಟುಕೊಂಡು ದೆಹಲಿ ಹೈಕೋರ್ಟ್ ಕದ ತಟ್ಟಿದ್ದರು. ನ್ಯಾಯಮೂರ್ತಿ ನಜ್ಮಿ ವಾಝಿರಿ ಅವರು, ಈ ಪ್ರಕರಣದಲ್ಲಿ ತಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಆದೇಶ ನೀಡಿದ್ದಾರೆ.
ಸಿಬಿಐ ಹಂಗಾಮಿ ನಿರ್ದೇಶಕರಾಗಿ ನಾಗೇಶ್ವರ್ ರಾವ್ ನೇಮಕ
ತನಿಖೆ ತಡೆಯಲು ನಿರಾಕರಿಸಿದ ಹೈಕೋರ್ಟ್
ಆದರೆ, ರಾಕೇಶ್ ಅಸ್ಥಾನಾ ವಿರುದ್ಧ ನಡೆಸಲಾಗುತ್ತಿರುವ ತನಿಖೆಯನ್ನು ತಡೆಯಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ರಾಕೇಶ್ ಅಸ್ಥಾನಾ ಅವರು ತಮ್ಮ ಮೊಬೈಲ್ ಫೋನ್, ಅದಕ್ಕೆ ಬಂದಿರುವ ಸಂದೇಶಗಳು ಸೇರಿದಂತೆ ಇತರ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಮುಟ್ಟದೆ, ಸಾಕ್ಷ್ಯಗಳನ್ನು ತಿರುಚಸು ಯತ್ನಿಸದೆ, ತನಿಖೆಗೆ ಸಹಕರಿಸಿದರೆ ಮಾತ್ರ ಯಥಾಸ್ಥಿತಿ ಕಾಪಾಡಿಕೊಳ್ಳಲಾಗುವುದು ಎಂದು ಹೈಕೋರ್ಟ್ ನ್ಯಾಯಮೂರ್ತಿ ಆದೇಶಿಸಿದ್ದಾರೆ. ಬಂಧನಕ್ಕೆ ತಡೆ ನೀಡಲಾಗಿದ್ದರೂ ತನಿಖೆಗೆ ಹಸಿರು ನಿಶಾನೆ ನೀಡಿರುವುದು ರಾಕೇಶ್ ಅಸ್ಥಾನಾ ಅವರಿಗೆ ನುಂಗಲಾಗದ ತುತ್ತಾಗಿದೆ.
ಸಿಬಿಐನಲ್ಲಿ ಲಂಚ ಪ್ರಕರಣ: ಡಿಎಸ್ಪಿ ದೇವೇಂದರ್ ಕುಮಾರ್ ಬಂಧನ
ವಿರೋಧಿಗಳ ಬಾಯಿಗೆ ಆಹಾರವಾದ ಸಿಬಿಐ
ದೇಶದ ಉನ್ನತ ತನಿಖಾ ಸಂಸ್ಥೆಯಾದ ಸಿಬಿಐನ ಇಬ್ಬರು ಅತ್ಯುನ್ನತ ಅಧಿಕಾರಿಗಳಾದ ಅಲೋಕ್ ವರ್ಮಾ ಮತ್ತು ರಾಕೇಶ್ ಅಸ್ಥಾನಾ ನಡುವೆ ನಡೆದಿರುವ ಯುದ್ಧದಿಂದಾಗಿ ಕೇಂದ್ರ ಸರಕಾರ ತೀವ್ರ ಮುಜುಗರಕ್ಕೀಡಾಗಿದ್ದು, ಕೇಂದ್ರ ಸರಕಾರದ ಅಡಿಯಲ್ಲಿ ಸಿಬಿಐ ಸಮರ್ಥವಾಗಿ ಮತ್ತು ಪಾರದರ್ಶಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ವಿರೋಧಿಗಳು ಆಡಿಕೊಳ್ಳುವಂತಾಗಿದೆ. ಇನ್ನು ಹಲವಾರು ಹುಳುಕುಗಳು ಹೊರಗೆ ಬರಬಹುದು ಮತ್ತು ಸ್ವಾಯತ್ತ ತನಿಖಾ ಸಂಸ್ಥಾಯಾದ ಸಿಬಿಐನ ಇಮೇಜಿಗೆ ಮತ್ತಷ್ಟು ಕಳಂಕ ತಟ್ಟಬಹುದು ಎಂದು ಕೇಂದ್ರ ಸರಕಾರ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದೆ.
ಬಂಧನ ಭೀತಿ : ಕೋರ್ಟ್ ಮೊರೆ ಹೋದ ಸಿಬಿಐನ ನಂ. 2ಗೆ ಮಿಶ್ರಫಲ
ಡಜನ್ ಗಟ್ಟಲೆ ಅಧಿಕಾರಿಗಳ ವರ್ಗಾವಣೆ
ಭ್ರಷ್ಟಾಚಾರವನ್ನು ಮಟ್ಟಹಾಕಬೇಕಾದ ಸಂಸ್ಥೆಯೇ ಭ್ರಷ್ಟಾಚಾರದ ಕೂಪದಲ್ಲಿ ಸಿಲುಕಿರುವ ಹೊತ್ತಿನಲ್ಲಿ, ನಂಬರ್ 1 ಆರೋಪಿ ಸ್ಥಾನದಲ್ಲಿರುವ ರಾಕೇಶ್ ಅಸ್ಥಾನ ಅವರ ವಿರುದ್ಧ ಹೂಡಲಾಗಿರುವ ಪ್ರಕರಣದ ತನಿಖೆ ನಡೆಸುತ್ತಿದ್ದ ಡಜನ್ ಗಟ್ಟಲೆ ಅಧಿಕಾರಿಗಳನ್ನು ಸಿಬಿಐನ ಜಂಟಿ ನಿರ್ದೇಶಕ ಎನ್ಎಂ ಸಿಂಗ್ ಅವರು ವರ್ಗಾವಣೆ ಮಾಡಿದ್ದಾರೆ. ಈ ನಡುವೆ ದೆಹಲಿ ಹೈಕೋರ್ಟ್ ನಲ್ಲಿ ಅಕ್ಟೋಬರ್ 29ರಂದು ರಾಕೇಶ್ ಅಸ್ಥಾನಾ ಹೂಡಿದ್ದ ಅರ್ಜಿಯ ವಿಚಾರಣೆ ನಡೆಯಲಿದೆ.
ಸಿಬಿಐನಲ್ಲಿ ಭಾರಿ ಬದಲಾವಣೆ: 11 ಅಧಿಕಾರಿಗಳ ವರ್ಗಾವಣೆ, ತಕ್ಷಣದಿಂದ ಜಾರಿ
ಕೇಂದ್ರ ಮೇಲೆ ಪ್ರಶಾಂತ್ ಭೂಷಣ್ ಟೀಕಾಪ್ರಹಾರ
ಕೇಂದ್ರ ಸರಕಾರದ ತೀವ್ರ ಟೀಕಾಕಾರರಾಗಿರುವ ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಅವರು, ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಿಬಿಐನ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಅವರನ್ನು ಅಮಾನತಿನಲ್ಲಿಡುವ ಬದಲು, ನಿರ್ದೇಶಕ ಅಲೋಕ್ ವರ್ಮಾ ಅವರನ್ನೇ ಮನೆಗೆ ಕಳಿಸಿದೆ. ನಿರ್ದೇಶಕರ ಸೇವಾ ಅವಧಿ ಸುರಕ್ಷಿತವಾಗಿರುವುದರಿಂದ ಅವರನ್ನು ಬಲವಂತದ ರಜೆಯ ಮೇಲೆ ಕಳಿಸುವ ಅಧಿಕಾರ ಪ್ರಧಾನಿ ಕಚೇರಿಗಿಲ್ಲ ಎಂದು ಅವರು ವಾಗ್ದಾಳಿ ಮಾಡಿದ್ದಾರೆ. ರಾಕೇಶ್ ಅಸ್ಥಾನಾ ಅವರನ್ನು ಅಮಾನತಿನಲ್ಲಿಡಬೇಕೆಂದು ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರೇ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದ್ದರು. ಈಗ ಅಲೋಕ್ ಅವರನ್ನೇ ಕೇಂದ್ರ ಸರಕಾರ ಬಲವಂತದ ರಜೆಯ ಮೇಲೆ ಮನೆಗೆ ಕಳುಹಿಸಿದೆ.