ಎಮರ್ಜೆನ್ಸಿಯಲ್ಲಿ ಏನಾಗಿತ್ತು? ನೆನಪಿಸಿಕೊಳ್ಳಿ: ಕಾಂಗ್ರೆಸ್ಗೆ ಅಮಿತ್ ಶಾ ತಿರುಗೇಟು
ನವದೆಹಲಿ, ಆಗಸ್ಟ್ 2: ಕೇಂದ್ರ ಸರ್ಕಾರದ ಕಾರ್ಯವೈಖರಿ, ಮಸೂದೆಗಳ ಕುರಿತು ರಾಜ್ಯಸಭೆಯಲ್ಲಿ ಶುಕ್ರವಾರ ಭಾರಿ ಚರ್ಚೆ ನಡೆಯಿತು. ಕಾಂಗ್ರೆಸ್ನ ಟೀಕೆ, ಆಕ್ಷೇಪಗಳಿಗೆ ಗೃಹ ಸಚಿವ ಅಮಿತ್ ಶಾ ಖಡಕ್ ಪ್ರತಿಕ್ರಿಯೆಗಳನ್ನು ನೀಡಿದರು.
ತೀವ್ರ ವಿವಾದ ಸೃಷ್ಟಿಸಿರುವ ಕಾನೂನು ಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ ಮಸೂದೆ (ಯುಎಪಿಎ) ಸೇರಿದಂತೆ ಮೂರು ಮಸೂದೆಗಳು ರಾಜ್ಯಸಭೆಯಲ್ಲಿ ಚರ್ಚೆಗೆ ಬರಲಿದ್ದು, ಅವುಗಳ ಅಂಗೀಕಾರಕ್ಕೆ ಮತ ಪ್ರಕ್ರಿಯೆ ನಡೆಯಲಿದೆ. ಯುಎಪಿಎ ಈ ಮಸೂದೆ ವಿರೋಧಿಸಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿವೆ. ಕಾಶ್ಮೀರದಲ್ಲಿ ಸುಮಾರು 28,000 ಪಡೆಗಳನ್ನು ನಿಯೋಜಿಸಿರುವುದರ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ತೃಣಮೂಲ ಕಾಂಗ್ರೆಸ್ ಒತ್ತಾಯಿಸಿತು.
ಮೋಟಾರು ವಾಹನ ಮಸೂದೆಗೆ ರಾಜ್ಯಸಭೆಯಲ್ಲಿ ಒಪ್ಪಿಗೆ
ತೀವ್ರ ಗದ್ದಲದ ಹಿನ್ನೆಲೆಯಲ್ಲಿ ರಾಜ್ಯಸಭೆ ಕಲಾಪವನ್ನು ಬೆಳಿಗ್ಗೆ ಸ್ವಲ್ಪ ಸಮಯ ಮುಂದೂಡಲಾಗಿತ್ತು. ಮೊದಲು ಚರ್ಚೆ ಆರಂಭಿಸಿದ ಕಾಂಗ್ರೆಸ್ನ ಪಿ. ಚಿದಂಬರಂ, 'ಈ ಮಸೂದೆಯಡಿ ಯಾರ ಹೆಸರನ್ನು ಮೊದಲು ನೀವು ದಾಖಲಿಸುವಿರಿ? ಪ್ರತಿಯೊಬ್ಬರೂ ಆ ರಾತ್ರಿ ಮಲಗಬೇಕಿದೆ. ಯುಎಪಿಎ ಅಡಿ ಸರ್ಕಾರ ಮಾತ್ರವೇ ಯಾರದ್ದಾದರೂ ಹೆಸರನ್ನು ಸೇರಿಸುತ್ತದೆ ಎಂದಾದರೆ ಅಂದು ಯಾರಿಗೂ ನಿದ್ದೆ ಮಾಡಲು ಸಾಧ್ಯವಿಲ್ಲ' ಎಂದು ವ್ಯಂಗ್ಯವಾಗಿ ಹೇಳಿದರು.
ವಿರೋಧದ ನಡುವೆಯೂ ಎರಡು ಪ್ರಮುಖ ಮಸೂದೆ ಅಂಗೀಕಾರ
ಎನ್ಐಎಯನ್ನು ಬಲಪಡಿಸಲು ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ ಎಂಬ ಕಾರಣ ನೀಡುತ್ತಿದ್ದೀರಿ. ವ್ಯಕ್ತಿಯೊಬ್ಬರ ಹೆಸರನ್ನು ಭಯೋತ್ಪಾದಕ ಎಂಬ ಪಟ್ಟಿಗೆ ಸೇರಿಸಬಹುದು ಅಥವಾ ತೆಗೆದುಹಾಕಬಹುದು. ಇದು ತಪ್ಪು. ಈ ಕಾರಣಕ್ಕಾಗಿ ನಾವು ತಿದ್ದುಪಡಿಯನ್ನು ವಿರೋಧಿಸುತ್ತಿದ್ದೇವೆ. ನಾವು ಯುಎಪಿಎ (ತಡೆ) ಯನ್ನು ವಿರೋಧಿಸುತ್ತಿಲ್ಲ ಎಂದು ತಿಳಿಸಿದರು.
ಉಳಿದ ಎರಡು ಕಾಲು ಎಲ್ಲಿ?
'2008ರಲ್ಲಿ ನಾನು ಗೃಹಸಚಿವನಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಭಯೋತ್ಪಾದನಾ ವಿರೋಧಿ ಹೋರಾಟವು ಎನ್ಐಎ, ನ್ಯಾಟ್ಗ್ರಿಡ್ ಮತ್ತು ಎನ್ಸಿಟಿಸಿ ಎಂಬ ಮೂರು ಕಾಲುಗಳ ಮೇಲೆ ನಿಲ್ಲಲಿದೆ ಎಂದು ಹೇಳಿದ್ದೆ. ಈಗ ನಾವಿಲ್ಲಿ ಒಂದೇ ಒಂದು ಕಾಲನ್ನು ಹೊಂದಿದ್ದೇವೆ. ನ್ಯಾಟ್ಗ್ರಿಡ್ ಮತ್ತು ಎನ್ಸಿಟಿಸಿಗಳಿಗೆ ನೀವು ಏನು ಮಾಡಿದ್ದೀರಿ? ಅವೇಕೆ ಅತಂತ್ರ ಸ್ಥಿತಿಯಲ್ಲಿವೆ?' ಎಂದು ಪ್ರಶ್ನಿಸಿದರು.
ಭಯೋತ್ಪಾದನೆ ವಿರುದ್ಧ ಹೋರಾಟ
ಬಳಿಕ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಎರಡು ವಿಷಯಗಳನ್ನು ಬೆರೆಸಿ ಮಾತನಾಡುತ್ತಿದೆ ಎಂದು ಆರೋಪಿಸಿದರು. 'ಯುಎಪಿಎ ಕಾಯ್ದೆಯು ಭಯೋತ್ಪಾದನೆ ವಿರುದ್ಧ ಹೋರಾಟಕ್ಕಾಗಿಯೇ ಇದೆ ವಿನಾ ಬೇರೆ ಯಾವುದೇ ಉದ್ದೇಶಕ್ಕೆ ಅಲ್ಲ. ಭಯೋತ್ಪಾದನಾ ಸಂಘಟನೆ ಮಾತ್ರವಲ್ಲ, ಭಯೋತ್ಪಾದಕರನ್ನೂ ಪ್ರತ್ಯೇಕವಾಗಿ ಗುರುತಿಸುವುದು ಅತಿ ಅಗತ್ಯವಾಗಿದೆ. ಭಯೋತ್ಪಾದನೆ ಎನ್ನುವುದು ಭಾರತದ ಸಮಸ್ಯೆಯಷ್ಟೇ ಅಲ್ಲ. ಭಯೋತ್ಪಾದಕರನ್ನು ಹೆಸರಿಸುವುದಕ್ಕೆ ನಾವೇಕೆ ಭಯಪಟ್ಟುಕೊಳ್ಳುತ್ತೇವೆ?' ಎಂದು ಕಾಂಗ್ರೆಸ್ಗೆ ತಿರುಗೇಟು ನೀಡಿದರು.
|
ಮತ್ತೊಂದು ಸಂಘಟನೆ ಹುಟ್ಟುತ್ತದೆ
'ಎನ್ಐಎ ಕಟ್ಟುನಿಟ್ಟಾಗಿ ಕೆಲಸ ಮಾಡುತ್ತಿದೆ. ಭಯೋತ್ಪಾದಕರು ನಂಟು ಹೊಂದಿರುವ ಸಂಘಟನೆಯನ್ನು ನಿಷೇಧಿಸುವಾಗ ಭಯೋತ್ಪಾದಕನನ್ನು ವ್ಯಕ್ತಿಗತವಾಗಿ ಗುರುತಿಸಿ ಆತನನ್ನು ಹೆಸರಿಸುವುದೇಕೆ ಎಂದು ಚಿದಂಬರಂ ಅವರು ಕೇಳಿದ್ದಾರೆ. ಇದು ಏಕೆಂದರೆ, ನಾವು ಒಂದು ಸಂಘಟನೆಯನ್ನು ನಿಷೇಧಿಸಿದರೆ, ಅದೇ ವ್ಯಕ್ತಿಗಳಿಂದ ಕೂಡಿದ ಇನ್ನೊಂದು ಸಂಘಟನೆ ಹುಟ್ಟಿಕೊಳ್ಳುತ್ತದೆ. ಎಲ್ಲಿಯವರೆಗೆ ನಾವು ಈ ಸಂಘಟನೆಗಳನ್ನು ನಿಷೇಧಿಸುತ್ತಾ ಕೂರುತ್ತೇವೆ?' ಎಂದು ಕೇಳಿದರು.
ಧರ್ಮದೊಂದಿಗೆ ಭಯೋತ್ಪಾದನೆ ತಳಕು
ಕಾಂಗ್ರೆಸ್ ಧರ್ಮದೊಂದಿಗೆ ಭಯೋತ್ಪಾದನೆಯನ್ನು ತಳುಕು ಹಾಕುತ್ತಿದೆ. ಯಾಸಿನ್ ಭಟ್ಕಳ್ನನ್ನು ಭಯೋತ್ಪಾದಕ ಎಂದು ಘೋಷಣೆ ಮಾಡಬೇಕಿತ್ತು. ಯುಎಪಿಎ ಅಡಿ ಯಾವುದೇ ವ್ಯಕ್ತಿಗೆ ಭಯೋತ್ಪಾದಕ ಎಂಬ ಹಣೆಪಟ್ಟಿ ಕಟ್ಟುವ ಮೊದಲು ನಾಲ್ಕು ಹಂತದ ಪರಿಶೀಲನೆ ನಡೆಯುತ್ತದೆ ಎಂದು ತಿಳಿಸಿದರು.
|
19 ತಿಂಗಳು ಪ್ರಜಾಪ್ರಭುತ್ವವೇ ಇರಲಿಲ್ಲ
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಏನಾಗಿತ್ತು? ಎಲ್ಲ ಮಾಧ್ಯಮಗಳನ್ನೂ ನಿಷೇಧಿಸಲಾಗಿತ್ತು. ವಿರೋಧಪಕ್ಷದ ಎಲ್ಲ ನಾಯಕರನ್ನೂ ಜೈಲಿಗೆ ಹಾಕಲಾಗಿತ್ತು. 19 ತಿಂಗಳವರೆಗೆ ಯಾವುದೇ ಪ್ರಜಾಪ್ರಭುತ್ವ ಇರಲಿಲ್ಲ. ಈಗ ನೀವು ಕಾನೂನಿನ ದುರ್ಬಳಕೆ ಆಗುತ್ತಿದೆ ಎಂದು ನಮ್ಮನ್ನು ಆರೋಪಿಸುತ್ತಿದ್ದೀರಿ? ಮೊದಲು ದಯಮಾಡಿ ನಿಮ್ಮ ಭೂತಕಾಲದ ಬಗ್ಗೆ ಒಮ್ಮೆ ನೋಡಿಕೊಳ್ಳಿ ಎಂದು ಕಿಡಿಕಾರಿದರು.
ಕಾಂಗ್ರೆಸ್ಗೆ ಬಿಜೆಪಿ ಬೆಂಬಲ ನೀಡಿತ್ತು
ಭಯೋತ್ಪಾದನಾ ವಿರೋಧಿ ಕಾಯ್ದೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚಿನ ತಿದ್ದುಪಡಿಗಳನ್ನು ಮಾಡಿದೆ. ಈ ತಿದ್ದುಪಡಿಗಳ ವಿಚಾರದಲ್ಲಿ ಬಿಜೆಪಿ ಯಾವಾಗಲೂ ಕಾಂಗ್ರೆಸ್ಗೆ ಬೆಂಬಲ ನೀಡಿದೆ. ಯುಎಪಿಎ ಮಸೂದೆಯಲ್ಲಿ ಯಾವುದೇ ರಾಜಕೀಯ ಇರಬಾರದು. ಭಯೋತ್ಪಾದಕರನ್ನು ಗುರುತಿಸಬೇಕು ಮತ್ತು ಹೆಸರಿಸಬೇಕು ಎಂದರು.