ಕಾನೂನುಬಾಹಿರ ಚಟುವಟಿಕೆ ವಿರೋಧಿ ತಿದ್ದುಪಡಿ ಮಸೂದೆ: ರಾಜ್ಯಸಭೆಯಲ್ಲಿ ಅಂಗೀಕಾರ
ನವದೆಹಲಿ, ಆಗಸ್ಟ್ 2: ತೀವ್ರ ವಿವಾದ ಉಂಟುಮಾಡಿರುವ ಕಾನೂನು ಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ ವಿಧೇಯಕಕ್ಕೆ (ಯುಎಪಿಎ) ರಾಜ್ಯಸಭೆಯಲ್ಲಿ ಅನುಮೋದನೆ ದೊರಕಿದೆ.
ಲೋಕಸಭೆಯಲ್ಲಿ ಈ ಮಸೂದೆಯು ಜುಲೈ 24ರಂದು ಅಂಗೀಕಾರಗೊಂಡಿತ್ತು. ಈ ಮಸೂದೆ ಶುಕ್ರವಾರ ರಾಜ್ಯಸಭೆಯಲ್ಲಿ ಚರ್ಚೆಗೆ ಬಂದಿತ್ತು. ಬಳಿಕ ಮತಕ್ಕೆ ಹಾಕಿದಾಗ 147 ಪರ ಮತ್ತು ಕೇವಲ 42 ವಿರೋಧ ಮತಗಳ ನಡುವೆ ಸುಲಭವಾಗಿ ಅಂಗೀಕಾರವಾಯಿತು.
ಎಮರ್ಜೆನ್ಸಿಯಲ್ಲಿ ಏನಾಗಿತ್ತು? ನೆನಪಿಸಿಕೊಳ್ಳಿ: ಕಾಂಗ್ರೆಸ್ಗೆ ಅಮಿತ್ ಶಾ ತಿರುಗೇಟು
ಯುಎಪಿಎ ತಿದ್ದುಪಡಿಗಳನ್ನು ಆಯ್ಕೆಸಮಿತಿಗೆ ಕಳುಹಿಸಬೇಕು ಎಂಬ ವಿರೋಧಪಕ್ಷಗಳ ಬೇಡಿಕೆಯನ್ನು ಪರಿಗಣಿಸುವ ವಿಚಾರದಲ್ಲಿ ಮೊದಲು ಮತದಾನ ನಡೆಯಿತು. ಆದರೆ, ಇದರಲ್ಲಿ ಕಾಂಗ್ರೆಸ್ ನೇತೃತ್ವದ ವಿರೋಧಪಕ್ಷಗಳಿಗೆ ಸೋಲಾಯಿತು. ಹೀಗಾಗಿ ಆಯ್ಕೆ ಸಮಿತಿಗೆ ಅದನ್ನು ಕಳುಹಿಸದೆಯೇ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸುವ ಸಂಬಂಧ ಮತ ಪ್ರಕ್ರಿಯೆ ನಡೆಯಿತು.
ಇದಕ್ಕೂ ಮೊದಲು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಈ ಮಸೂದೆ ಕುರಿತು ತೀವ್ರ ವಾಗ್ವಾದ ನಡೆಯಿತು. 'ಈ ಮಸೂದೆ ವಿಚಾರದಲ್ಲಿ ಬಿಜೆಪಿಯ ಉದ್ದೇಶವನ್ನು ನಾವು ಅನುಮಾನಿಸುತ್ತೇವೆ. ಕಾಂಗ್ರೆಸ್ ಎಂದಿಗೂ ಭಯೋತ್ಪಾದನೆ ವಿಚಾರದಲ್ಲಿ ರಾಜಿಯಾಗಿರಲಿಲ್ಲ. ಆ ಕಾರಣಕ್ಕಾಗಿಯೇ ನಾವು ಈ ಕಾಯ್ದೆಯನ್ನು ತಂದಿದ್ದೆವು. ಭಯೋತ್ಪಾದನೆ ವಿಚಾರದಲ್ಲಿ ರಾಜಿಯಾದವರು ನೀವು, ಮೊದಲು ರುಬಿಯಾ ಸಯೀದ್ ಜಿಯನ್ನು ಬಿಡುಗಡೆ ಮಾಡುವ ವೇಳೆ ಹಾಗೂ ಮತ್ತೊಮ್ಮೆ ಮಸೂದ್ ಅಜರ್ನ ಬಿಡುಗಡೆ ಮಾಡುವಾಗ' ಎಂದು ಎನ್ಡಿಎ ವಿರುದ್ಧ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಹರಿಹಾಯ್ದರು.
'ದಿಗ್ವಿಜಯ ಸಿಂಗ್ ಅವರು ಸಿಟ್ಟಿಗೆದ್ದಂತೆ ಕಾಣಿಸುತ್ತದೆ. ಅದು ಸಹಜ. ಅವರು ಚುನಾವಣೆಯಲ್ಲಿ ಸೋತಿದ್ದಾರಷ್ಟೇ. ಎನ್ಐಎ ಮೂರು ಪ್ರಕರಣಗಳಲ್ಲಿ ಯಾರೂ ಶಿಕ್ಷೆಗೆ ಒಳಗಾಗಲಿಲ್ಲ ಎಂದು ಅವರು ಹೇಳಿದ್ದಾರೆ. ಏಕೆಂದು ನಾನು ಹೇಳುತ್ತೇನೆ. ಏಕೆಂದರೆ, ಈ ಮೂರೂ ಪ್ರಕರಣಗಳಲ್ಲಿ ರಾಜಕೀಯ ಚಿತಾವಣೆ ಮಾಡಲಾಗಿತ್ತು. ಒಂದು ನಿರ್ದಿಷ್ಟ ಧರ್ಮವನ್ನು ಭಯೋತ್ಪಾದನೆಗೆ ನಂಟು ಬೆಸೆಯಲು ಪ್ರಯತ್ನಗಳು ನಡೆದಿದ್ದವು' ಎಂದು ಅಮಿತ್ ಶಾ ತಿರುಗೇಟು ನೀಡಿದ್ದರು.
=