ಬಿಜೆಪಿ ತೊರೆಯುತ್ತೇನೆಂದು ರಾಜನಾಥ್ ಸಿಂಗ್ ಹೇಳಿದ್ದು ನಿಜಾನಾ?
ನವದೆಹಲಿ, ಜೂನ್ 07: ಕೇಂದ್ರ ಸಂಪುಟ ಸಮಿತಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಕಡೆಗಣಿಸಿದ್ದ ಕಾರಣ ಅವರು ಪಕ್ಷ ತೊರೆಯುತ್ತೇನೆಂದು ಬೆದರಿಕೆ ಒಡ್ಡಿದ್ದರು, ಆದ್ದರಿಂದ ಅವರನ್ನು ಎಲ್ಲಾ ಸಂಪುಟ ಸಮಿತಿಗೂ ನಂತರ ಸೇರಿಸಿಕೊಳ್ಳಲಾಯಿತು ಎಂಬ ವದಂತಿಯನ್ನು ರಾಜನಾಥ್ ಸಿಂಗ್ ಅವರ ಕಚೇರಿಯ ಮೂಲಗಳು ಅಲ್ಲಗಳೆದಿವೆ.
"ಪಕ್ಷ ತೊರೆಯುವ ಮಾತನ್ನು ರಾಜನಾಥ್ ಸಿಂಗ್ ಅವರು ಆಡಿಯೇ ಇಲ್ಲ. ಈ ವದಂತಿ ಶುದ್ಧ ಸುಳ್ಳು" ಎಂದು ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ.
ಕೇಂದ್ರದ ಎಲ್ಲಾ ಸಂಪುಟ ಸಮಿತಿಯಲ್ಲಿ ರಾಜನಾಥ್ಗೆ ಜಾಗ ಇಲ್ಲ, ಶಾಗೆ ಮಣೆ
ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಒಟ್ಟು 8 ಸಂಪುಟ ಸಮಿತಿಯನ್ನು ರಚಿಸಿದ್ದು, ಈ ಎಲ್ಲಾ ಸಮಿತಿಯಲ್ಲೂ ಪ್ರಧಾನಿ ನಂತರದ ಹುದ್ದೆಯನ್ನು ಗೃಹಸಚಿವ ಅಮಿತ್ ಶಾ ಅವರೇ ಪಡೆದಿದ್ದಾರೆ.
ಕಳೆದ ಸರ್ಕಾರದ ಅವಧಿಯಲ್ಲಿ ರಾಜನಾಥ್ ಸಿಂಗ್ ಅವರು ನಿಭಾಯಿಸುತ್ತಿದ್ದ ಹುದ್ದೆಗಳನ್ನು ಇದೀಗ ಅಮಿತ್ ಶಾ ಅವರೇ ಪಡೆದಿರುವುದು ಲಕ್ನೋ ಸಂಸದ ರಾಜನಾಥ್ ಸಿಂಗ್ ಅವರಿಗೆ ಮುಜುಗರವನ್ನುಂಟು ಮಾಡಿತ್ತು ಎಂಬ ವದಂತಿ ಹಬ್ಬಿತ್ತು. ಸಂಪುಟ ನೇಮಕಾತಿ ಸಮಿತಿ, ಅಕಮಡೇಷನ್ ಸಮಿತಿ, ಆರ್ಥಿಕ ವ್ಯವಹಾರಗಳ ಸಮಿತಿ, ಸಂಸದೀಯ ವ್ಯವಹಾರಗಳ ಸಮಿತಿ, ರಾಜಕೀಯ ವ್ಯವಹಾರಗಳ ಸಮಿತಿ, ಭದ್ರತಾ ಸಮಿತಿ, ಹೂಡಿಕೆ ಹಾಗೂ ಅಭಿವೃದ್ಧಿ ಸಮಿತಿ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಸಮಿತಿಗಳಲ್ಲಿ ಕೇವಲ ಎರಡು ಸಮಿತಿಗಳಲ್ಲಿ ಮಾತ್ರ ರಾಜನಾಥ್ ಸಿಂಗ್ ಅವರ ಹೆಸರು ಕೇಳಿಬಂದಿತ್ತು. ಇದೀಗ ಎಲ್ಲಾ ಸಮಿತಿಗಳಲ್ಲೂ ಅವರ ಹೆಸರನ್ನು ಸೇರಿಸಲು ಪ್ರಧಾನಿ ಮುಂದಾಗಿರುವುದು, ವಂದಂತಿಗೆ ಮತ್ತಷ್ಟು ಪುಷ್ಠಿ ನೀಡಿತ್ತು.