ರಾಜೀವ್ ಗಾಂಧಿ ಬೆಂಬಲಿಸಿ, ರಾಜೀನಾಮೆಗೆ ಮುಂದಾದ ಎಎಪಿ ಶಾಸಕಿ
Recommended Video
ನವದೆಹಲಿ, ಡಿಸೆಂಬರ್ 22: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ನೀಡಿರುವ ಭಾರತ ರತ್ನ ವನ್ನು ವಾಪಸ್ ಪಡೆವ ವಿಷಯಕ್ಕೆ ಸಂಬಂಧಿಸಿದಂತೆ ದೆಹಲಿ ವಿಧಾನಸಭೆ ತೆಗೆದುಕೊಂಡ ನಿರ್ಣಯವನ್ನು ಬೆಂಬಲಿಸದ ಎಎಪಿ ಶಾಸಕಿ ಅಲ್ಕಾ ಲಂಬಾ ರಾಜೀನಾಮೆಗೆ ಮುಂದಾಗಿದ್ದಾರೆ.
1984 ರಲ್ಲಿ ನಡೆದ ಸಿಖ್ ಹತ್ಯಾಕಾಂಡವನ್ನು ನಿಯಂತ್ರಿಸಲಾಗದ ರಾಜೀವ್ ಗಾಂಧಿ ಅವರಿಗೆ ಭಾರತ ರತ್ನ ನೀಡಿದ್ದು ಸರಿಯಲ್ಲ. ಅದನ್ನು ವಾಪಸ್ ಪಡೆಯಬೇಕು ಎಂಡು ದೆಹಲಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.
70 ಸದಸ್ಯರ ದೆಹಲಿ ವಿಧಾನಸಭೆಯಲ್ಲಿ 66 ಶಾಸಕರು ಎಎಪಿಯವರಾಗಿದ್ದರು, ಉಳಿದ ಕೇವಲ ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ತಿಲಕ್ ನಗರದ ಶಾಸಕ ಜರ್ನೈಲ್ ಸಿಂಗ್ ನಿರ್ಣಯ ಮಂಡಿಸಿದ್ದರು.
ಆದರೆ ಎಎಪಿ ಶಾಸಕಿ ಅಲ್ಕಾ ಲಂಬಾ ಅವರು ತಾವು ರಾಜೀವ್ ಗಾಂಧಿ ಅವರಿಗೆ ನೀಡಿರುವ ಭಾರತ ರತ್ನ ವಾಪಸ್ ಪಡೆಯುವ ನಿರ್ಣಯಕ್ಕೆ ಒಪ್ಪುವುದಿಲ್ಲ ಎಂದರು. ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಲ್ಕಾ ಅವರ ರಾಜೀನಾಮೆಗೆ ಆಗ್ರಹಿಸಿದರು.
'ಭಾರತ ರತ್ನ ವಾಪಸ್ ಪಡೆಯುವ ನಿರ್ಣಯಕ್ಕೆ ಒಪ್ಪಲು ನನ್ನ ಮೇಲೆ ಒತ್ತಡವಿತ್ತು. ಆದರೆ ನನ್ನ ಮನಸ್ಸು ಅದಕ್ಕೆ ಒಪ್ಪಲಿಲ್ಲ. ನಾನು ರಾಜೀನಾಮೆಗೆ ಸಿದ್ಧವಿದ್ದೇನೆ' ಎಂದು ಅಲ್ಕಾ ಹೇಳಿದ್ದಾರೆ.
1984ರ ಅಕ್ಟೋಬರ್ 31ರಂದು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯ ನಂತರ ನಡೆದಿದ್ದ ಸಿಖ್ ನರಮೇಧ ಭಾರತದ ಇತಿಹಾಸದಲ್ಲೇ ಕಪ್ಪು ಚುಕ್ಕೆ ಎನ್ನಿಸಿತ್ತು.