ರಾಜೀವ್ ಹಂತಕರಿಗೆ ಕ್ಷಮೆ ಯಾಕೆ? ಅನುಮಾನ ಹುಟ್ಟಿಸುವ ಕಾಂಗ್ರೆಸ್ ನಡೆ: ಸ್ವಾಮಿ
ನವದೆಹಲಿ, ಮಾರ್ಚ್ 12: "ತಮ್ಮ ತಂದೆ ರಾಜೀವ್ ಗಾಂಧಿ ಹಂತಕರನ್ನು ನಾವು ಕ್ಷಮಿಸಿದ್ದೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಹೇಳಿಕೆ ನೀಡಿದ್ದನ್ನು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಖಂಡಿಸಿದ್ದಾರೆ.
ಮಲೇಷ್ಯಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, "ನಮ್ಮ ತಂದೆಯ ಹತ್ಯೆ ಮಾಡಿದವರ ಬಗ್ಗೆ ನಮಗೆ ಹಲವು ವರ್ಷಗಳ ಕಾಲ ದ್ವೇಷವಿತ್ತು. ಆದರೆ ಕ್ರಮೇಣ ನಾವು ಎಲ್ಲರನ್ನೂ ಪ್ರೀತಿಸುವುದನ್ನು ಕಲಿತೆವು. ನಾನು ಮತ್ತು ಸಹೋದರಿ ಪ್ರಿಯಾಂಕಾ ಇಬ್ಬರೂ ನಮ್ಮ ತಂದೆಯನ್ನು ಕೊಂದವರನ್ನು ಕ್ಷಮಿಸಿದ್ದೇವೆ" ಎಂದಿದ್ದರು.
ನಮ್ಮ ತಂದೆ ಕೊಂದವರನ್ನು ನಾನು, ಪ್ರಿಯಾಂಕಾ ಕ್ಷಮಿಸಿದ್ದೇವೆ
ಈ ಕುರಿತು ಪ್ರತಿಕ್ರಿಯೆ ನೀಡಿದ ಸುಬ್ರಮಣಿಯನ್ ಸ್ವಾಮಿ, 'ರಾಜೀವ್ ಗಾಂಧಿ ಒಬ್ಬ ನಿಜವಾದ ರಾಷ್ಟ್ರವಾದಿ. ಅವರನ್ನು ಕೊಂದವರಿಗೆ ಗಲ್ಲುಶಿಕ್ಷೆಯಾಗಬೇಕಿತ್ತು. ಆದರೆ ಅವರಿಗೆ ಘೋಷಿಸಿದ್ದ ಗಲ್ಲು ಶಿಕ್ಷೆಯನ್ನು, ಜೀವಾವದಿ ಶಿಕ್ಷೆಯನ್ನಾಗಿ ಬದಲಿಸಿ, ಇದೀಗ ಅವರನ್ನು ಕ್ಷಮಿಸಿದ್ದೇವೆ ಎನ್ನುವ ಮೂಲಕ ಕಾಂಗ್ರೆಸ್ಸಿಗರು ಅನುಮಾನ ಹುಟ್ಟುವಂತೆ ಮಾಡುತ್ತಿದ್ದಾರೆ' ಎಂದಿದ್ದಾರೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಎದ್ದು ಕಾಣುತ್ತಿದೆ ದೇಶಭಕ್ತಿಯ ಕೊರತೆ
"ರಾಹುಲ್ ಗಾಂಧಿಯವರ ಮಾತಿನಲ್ಲಿ ದೇಶಭಕ್ತಿಯ ಕೊರತೆ ಎದ್ದುಕಾಣುತ್ತಿದೆ. ಅವರು ತಮ್ಮ ತಂದೆಯನ್ನು ಸಾಯಿಸಿದ ಹಂತಕರಿಗೆ ಗಲ್ಲು ಶಿಕ್ಷೆ ನೀಡುವುದು ಬೇಡ, ಆದರೆ ದೇಶದ ಮಾಜಿ ಪ್ರಧಾನಿಯೊಬ್ಬರನ್ನು ಕೊಂದ ಕೊಲೆಗಾರರಿಗೆ ಶಿಕ್ಷೆಯಾಗುವಂತೆ ಒತ್ತಾಯಿಸಬೇಕಿತ್ತು. ರಾಜೀವ್ ಗಾಂಧಿ ಒಬ್ಬ ನಿಷ್ಠಾವಂತ ರಾಷ್ಟ್ರವಾದಿ. ಅಂಥವರನ್ನು ಸಾಯಿಸಿದ್ದು ಅಕ್ಷಮ್ಯ ಅಪರಾಧ. ರಾಹುಲ್ ಗಾಂಧಿಯವರ ಮಾತು ನನಗೆ ಅನುಮಾನ ಹುಟ್ಟಿಸುತ್ತಿದೆ" ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ನಳಿನಿ ಬಗ್ಗೆ ಈ ಪರಿ ಅಕ್ಕರೆ ಏಕೆ?
"ರಾಜೀವ್ ಗಾಂಧಿ ಹಂತಕರಲ್ಲಿ ಪ್ರಮುಖಳಾದ ನಳಿನಿ ಅವರನ್ನು ಪ್ರಿಯಾಂಕಾ ಗಾಂಧಿ ಜೈಲಿನಲ್ಲಿ ಭೇಟಿಯಾಗಿದ್ದೇಕೆ? ಕೇವಲ ಖೈದಿಯ ಸಂಬಂಧಿಕರಿಗೆ ಮಾತ್ರ ಅವರನ್ನು ಭೇಟಿ ಮಾಡುವ ಅವಕಾಶವಿದ್ದರೂ, ಪ್ರಿಯಾಂಕಾ ಅವರಿಗೆ ಭೇಟಿ ಮಾಡಲು ಅವಕಾಶ ನೀಡಿದ್ದು ಯಾರು? ನಂತರ ಸೋನಿಯಾ ಗಾಂಧಿಯವರು ನಳಿನಿಯ ಮಗಳಿಗೆ ಇಂಗ್ಲೆಂಡಿನಲ್ಲಿ ಓದಲು ವಿದ್ಯಾರ್ಥಿ ವೇತನ ಸಿಗುವಂತೆ ಮಾಡಿದರು. ಅವಳ ವಿದ್ಯಾಭ್ಯಾಸದ ಜವಾಬ್ದಾರಿ ಹೊತ್ತರು. ನನಗ್ಯಾಕೋ ಇದರಲ್ಲೇನೋ ಸಮಸ್ಯೆ ಇದೆ ಎಂದು ಅನುಮಾನ ಬರುತ್ತಿದೆ" ಎಂದು ಸ್ವಾಮಿ ಶಂಕೆ ವ್ಯಕ್ತಪಡಿಸಿದರು.
ಅಪ್ಪ ಹತ್ಯೆಯಾಗುತ್ತಾರೆಂದು ಮೊದಲೇ ಗೊತ್ತಿತ್ತು : ರಾಹುಲ್
Recommended Video
ಆ ಕರಾಳ ದಿನ
ಕಾಂಚಿಪುರಂನ ಶ್ರೀಪೆರಂಬುದೂರ್ ನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಪಾಲ್ಗೊಂಡಿದ್ದ ರಾಜೀವ್ ಗಾಂಧಿಯವರಿಗೆ ನಮಸ್ಕರಿಸಲೆಂಬಂತೆ ಬಂದ ತೆನ್ಮೊಳಿ ರಾಜರತ್ನಂ ಎಂಬ ಮಹಿಳೆ ತನ್ನ ಉಡುಪಿನೊಳಗಿದ್ದ ಆರ್ ಡಿಎಕ್ಸ್ ಅನ್ನು ಸ್ಫೋಟಿಸಿದ ಪರಿಣಾಮ ರಾಜೀವ್ ಗಾಂಧಿ ಸ್ಥಳದಲ್ಲೇ ಮೃತರಾಗಿದ್ದರು. ಈ ಆತ್ಮಹತ್ಯಾ ದಾಳಿಯಲ್ಲಿ ಆಕೆಯೂ ಮೃತಳಾಗಿದ್ದಳು. ಈ ಘಟನೆ ನಡೆದಿದ್ದು ಮೇ.21, 1991 ರಂದು ರಾತ್ರಿ 10:10 ಕ್ಕೆ. ಈ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲ್ಲಣ ಮೂಡಿಸಿತ್ತು. ಎಲ್ ಟಿಟಿಇ ನಾಯಕ ಪ್ರಭಾಕರನ್, ವೈಯಕ್ತಿಕ ದ್ವೇಷಕ್ಕಾಗಿ ರಾಜೀವ್ ಗಾಂಧಿಯವರ ಹತ್ಯೆ ಮಾಡಿಸಿದ ಎಂದು ನಂತರ ಸುಪ್ರೀಂ ಕೋರ್ಟ್ ಹೇಳಿತ್ತು. ಎಲ್ ಟಿಟಿಇ ಯನ್ನು ಬಗ್ಗು ಬಡಿಯಲು ರಾಜೀವ್ ಗಾಂಧಿ ಶ್ರೀಲಂಕಾಕ್ಕೆ ಭಾರತೀಯ ಸೇನೆಯನ್ನು ಕಳಿಸಿದ್ದರು ಎಂಬುದೇ ಅವರ ಮೇಲಿನ ದ್ವೇಷಕ್ಕೆ ಕಾರಣ.
ಮಲೇಷ್ಯಾದಲ್ಲಿ ತಂದೆಯನ್ನು ನೆನೆದ ರಾಹುಲ್
ವಿದೇಶಿ ಪ್ರವಾಸದಲ್ಲಿ ರಾಹುಲ್ ಗಾಂಧಿ ಸಿಂಗಪುರದಿಂದ ನಿನ್ನೆ(ಮಾ.11) ಮಲೇಷ್ಯಾಕ್ಕೆ ತೆರಳಿದ್ದು, ಇಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ತಂದೆಯ ಹತ್ಯೆಯ ಕುರಿತು ಮಾತನಾಡಿದರು. ರಾಜಕೀಯದಲ್ಲಿ ದುಷ್ಟ ಶಕ್ತಿಗಳ ವಿರುದ್ಧ ಹೋರಾಡುವವರು ತಮ್ಮ ಪ್ರಾಣವನ್ನು ಬಲಿಕೊಡಬೇಕಾಗುತ್ತದೆ. ಆದ್ದರಿಂದ ನಮ್ಮ ಅಜ್ಜಿ(ಇಂದಿರಾ ಗಾಂಧಿ), ತಂದೆ(ರಾಜೀವ್ ಗಾಂಧಿ)ಯವರ ಹತ್ಯೆಯಾಗುತ್ತದೆ ಎಂಬ ಕುರಿತು ನಮಗೆ ಮೊದಲಿನಿಂದಲೂ ಆತಂಕವಿತ್ತು. ಮೊದ ಮೊದಲು ಅವರನ್ನು ಕೊಮದವರನ್ನು ನಾವು ದ್ವೇಷಿಸುತ್ತಿದ್ದೆವು. ಆದರೆ ಈಗ ರಾಜೀವ್ ಗಾಂಧಿ ಹಂತಕರನ್ನು ನಾನು ಮತ್ತು ಸಹೋದರಿ ಪ್ರಿಯಾಂಕ ಸಂಪೂರ್ಣವಾಗಿ ಕ್ಷಮಿಸಿದ್ದೇವೆ" ಎಂದು ರಾಹುಲ್ ಗಾಂಧಿ ಹೇಳಿದ್ದರು.