ಜಗತ್ತೇ ವಿಶ್ವಾಸವಿಟ್ಟ ಮೋದಿ ಮೇಲೆ ವಿಪಕ್ಷಗಳಿಗೆ ಅವಿಶ್ವಾಸ: ರಾಜನಾಥ ಸಿಂಗ್
ನವದೆಹಲಿ, ಜುಲೈ 20 : ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಹಿರಿಯ ಸಂಸದ, ಕೇಂದ್ರ ಗೃಹ ಮಂತ್ರಿ ರಾಜನಾಥ ಸಿಂಗ್ ಅವರು ಅಂಕಿ-ಸಂಖ್ಯೆಗಳ ಸಮೇತ ಅವಿಶ್ವಾಸ ಗೊತ್ತುವಳಿಯನ್ನು ವಿರೋಧಿಸಿದರು.
ಸ್ವತಂತ್ರ ಸರ್ಕಾರ ರಚಿಸುವ ಬಹುಮತ ಬಂದಿರುವ ಬಿಜೆಪಿಯ ವಿರುದ್ಧ, ಇಡೀಯ ರಾಷ್ಟ್ರವೇ ವಿಶ್ವಾಸವಿಟ್ಟಿರುವ ನಾಯಕ ಮೋದಿಯ ವಿರುದ್ಧ ವಿರೋಧ ಪಕ್ಷಗಳಿಗೆ ವಿಶ್ವಾಸವಿಲ್ಲ ಎಂದು ರಾಜನಾಥ ಸಿಂಗ್ ಅವರು ವ್ಯಂಗ್ಯ ಮಾಡಿದರು.
ಅವಿಶ್ವಾಸ ನಿರ್ಣಯ LIVE: ರಾಹುಲ್ ನಂತರ ಮೋದಿ ಭಾಷಣದ ಮೋಡಿ
ಮೋದಿ ಅವರ ಒಂದು ಮಾತಿನಿಂದ ಲಕ್ಷಾಂತರ ಜನ ತಮ್ಮ ಗ್ಯಾಸ್ ಸಬ್ಸಿಡಿ ಕೈಬಿಟ್ಟಿದ್ದಾರೆ, ಲಕ್ಷಾಂತರ ಜನ ತಮ್ಮ ಉಚಿತ ರೈಲ್ವೆ ಪಾಸ್ಗಳನ್ನು ಹಿಂತಿರುಗಿಸಿದ್ದಾರೆ, ಕೋಟ್ಯಂತರ ಜನ ಅಪನಗದೀಕರಣದ ವೇಳೆಯಲ್ಲಿ ಮೋದಿ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ ಅಂತಹ ನಾಯಕನ ವಿರುದ್ಧ ನೀವು ಅವಿಶ್ವಾಸ ನಿರ್ಣಯ ಮಂಡಿಸುತ್ತಿದ್ದೀರಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಗೋ ರಕ್ಷಕರಿಂದ ದೇಶದಲ್ಲಿ ಆಗುತ್ತಿರುವ ಹತ್ಯೆಗಳ ಬಗ್ಗೆ ರಾಹುಲ್ ಗಾಂಧಿಯವರು ಟೀಕಿಸಿದ್ದನ್ನು ಪ್ರಸ್ತಾಪಿಸಿದ ರಾಜನಾಥ್ ಸಿಂಗ್ ಅವರು, ದೇಶದ ಇತಿಹಾಸದಲ್ಲಿ 1984ರ ಸಿಖ್ ವಿರೋಧಿ ದಂಗೆಯಲ್ಲಿ ನಡೆದ ಹತ್ಯೆಗಳಿಗಿಂತ ದೊಡ್ಡ ಹತ್ಯಾಕಾಂಡ ಯಾವುದಿದೆ ಎಂದು ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್ ಅವನತಿಯತ್ತ
ಬಿಜೆಪಿ ಸರ್ಕಾರದ ಸಾಧನೆಗಳನ್ನು ಅಂಕಿ-ಅಂಶದ ಸಮೇತ ಸಂಸತ್ ಮುಂದೆ ಇಟ್ಟ ರಾಜನಾಥ್ ಸಿಂಗ್, ಅವನತಿಯತ್ತ ಸಾಗಿರುವ ಕಾಂಗ್ರೆಸ್ ಪಕ್ಷ ಹತಾಶಗೊಂಡು ವಿವಿಧ ಪಕ್ಷಗಳ ಜತೆ ಸೇರಿಕೊಂಡು ಅಧಿಕಾರ ಲಾಲಸೆಯಿಂದ ತಂತ್ರ ಹೆಣೆಯುತ್ತಿದೆ ಎಂದು ಅವರು ಹೇಳಿದರು.
ಮಹಾಘಟಬಂಧನ್ ಒಡೆದು ಹೋಗುತ್ತದೆ
ರಾಜಕಾರಣದಲ್ಲಿ ಚರ್ಚೆ ಆಗುತ್ತಿರುವ ಮಹಾಘಟಬಂಧನ್ ಚುನಾವಣೆಗೆ ಮುಂಚೆಯೇ ಒಡೆದುಹೋಗುತ್ತದೆ ಎಂದ ಅವರು, ನಾಯಕತ್ವದ ಪ್ರಶ್ನೆ ಹಾಗೂ ನೀತಿ-ನಿಯಮಗಳ ಪ್ರಶ್ನೆಗಳು ಬಂದ ಕೂಡಲೇ ಒಬ್ಬರಲ್ಲೊಬ್ಬರು ಕಚ್ಚಾಡಿ ದೂರಾಗುತ್ತಾರೆ ಎಂದು ಅವರು ಭವಿಷ್ಯ ನುಡಿದರು.
ಸಂಸತ್ತಿನಲ್ಲಿ ರಾಹುಲ್ ಗಾಂಧಿ ಪ್ರಸ್ತಾಪಿಸಿದ ಪ್ರಮುಖ ಅಂಶಗಳು
ಹಿಂದೂ ಪಾಕಿಸ್ತಾನ ಹೇಳಿಕೆಗೆ ಆಕ್ರೋಶ
ಹಿಂದೂ ಪಾಕಿಸ್ತಾನ ಮತ್ತು ಹಿಂದೂ ತಾಲಿಬಾನ್ ಚರ್ಚೆಯನ್ನು ಸಂಸತ್ಗೆ ಎಳೆದು ತಂದ ರಾಜನಾಥ ಸಿಂಗ್ ಅವರು, ಕಾಂಗ್ರೆಸ್ ಪಕ್ಷವು ಭಾರತವನ್ನು ಏನು ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸದನದಲ್ಲಿ ಹಾಜರಿದ್ದ ಶಶಿತರೂರ್ ಅವರು ಮಧ್ಯದಲ್ಲಿ ಮಾತನಾಡಲು ಪ್ರಯತ್ನಿಸಿದರು ಆದರೆ ಅವರನ್ನು ಸ್ಪೀಕರ್ ತಡೆದರು.
ರಾಹುಲ್ ಗಾಂಧಿ ಕಾಲೆಳೆದ ಸಿಂಗ್
ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಅವರು, ಮೋದಿ ಅವರು ಬಡ ತಾಯಿಯ ಮಗ ಹಾಗಾಗಿ ಅವರು ಬಡವರ ಚಿಂತೆ ಮಾಡುತ್ತಾರೆ ಎಂದು ಪರೋಕ್ಷವಾಗಿ ಕಾಲೆಳೆದರು. ಒಮ್ಮೆ ಮಾತ್ರವಲ್ಲ ಪದೇ ಪದೇ ರಾಹುಲ್ ಗಾಂಧಿ ಅವರ ಕಾಲೆಳೆದ ರಾಜನಾಥ್ ಅವರು, ಕೆಲವರು ಚಿನ್ನದ ಸ್ಪೂನ್ ಬಾಯಿಯಲ್ಲಿಟ್ಟುಕೊಂಡು ಹುಟ್ಟಿರುತ್ತಾರೆ ಅವರಿಗೆ ರೈತರ ಸಮಸ್ಯೆ ಕೇವಲ ಕೇಳಸಿಕೊಳ್ಳಲಷ್ಟೆ ಅನುಭವಿಸಲು ಅಲ್ಲ ಎಂದರು.