ನವದೆಹಲಿಯಲ್ಲಿ ಅವಾಂತರ ಸೃಷ್ಟಿಸಿದ ಮಳೆರಾಯ
ನವದೆಹಲಿ, ಆಗಸ್ಟ್.14: ವರುಣನ ಅಬ್ಬರಕ್ಕೆ ರಾಷ್ಟ್ರ ರಾಜಧಾನಿ ನವದೆಹಲಿ ಜನರು ತತ್ತರಿಸಿ ಹೋಗಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ದ್ವಾರಕಾ, ಗುರುಗ್ರಾಮ್, ನಜಾಫಘರ್, ಸೋಹ್ನಾ, ಮನೇಸರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮುಂದಿನ ಎರಡು ಗಂಟೆಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮುಂಗಾರು ಆರಂಭದ ಬಳಿಕ ದೆಹಲಿಯಲ್ಲಿ ದಾಖಲೆಯ ಮಳೆ: ಟ್ರಾಫಿಕ್ ಜಾಮ್
ಹಳೆಯ ದೆಹಲಿ ಪ್ರದೇಶ, ಕೆಂಪುಕೋಟೆಯ ಸುತ್ತಮುತ್ತಲಿನಲ್ಲಿ ಮಳೆರಾಯ ಕೊಂಚ ಬಿಡುವು ಕೊಡಲಿದ್ದಾನೆ. ಮುಂದಿನ ಒಂದೆರೆಡು ಗಂಟೆಗಳ ಕಾಲ ಮಳೆ ಬೀಳುವ ಸಾಧ್ಯತೆಗಳು ಕಡಿಮೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಳೆರಾಯ ಸೃಷ್ಟಿಸಿದ ಅವಾಂತರ:
ಕಳೆದ ಮೂರ್ನಾಲ್ಕು ದಿನಗಳಿಂದ ನವದೆಹಲಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜನರು ನಿತ್ಯ ಪರಿತಪಿಸುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಮುಂದಿನ ಮೂರು ದಿನ ಮೋಡಕವಿದ ವಾತಾವರಣ ಮುಂದುವರೆಯಲಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಪ್ರದೇಶದಲ್ಲಿ ಚಂಡಮಾರುತದ ಭೀತಿ ಇದೆ. ಅರಬ್ಬಿ ಸಮುದ್ರದಿಂದ ನೈಋತ್ಯ ಮಾರುತಗಳು ಬಂಗಾಳಕೊಲ್ಲಿಯತ್ತ ಸಾಗಿದೆ. ಇವೆಲ್ಲವೂ ಹೆಚ್ಚು ತೇವಾಂಶ ಹೊಂದಿದೆ.
ಉತ್ತರ ಪ್ರದೇಶದಲ್ಲೂ ಭಾರಿ ಮಳೆ:
ಮುಂದಿನ ಮೂರು ಗಂಟೆಗಳ ಕಾಲ ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಲಕ್ನೋ, ಬರಬಂಕಿ, ಉನ್ನಾವೋ, ಸೀತಾಪುರ್, ಹಾರ್ದೊಯ್, ಲಖಿಂಪುರ್, ಖೇರಿ, ಶಾಜಹಾನ್ ಪುರ್, ಪಿಲಿಭಿತ್, ರಾಮಪುರ್, ರಾಯ್ ಬರೇಲಿ, ಕನ್ನೌಜ್, ಅಯೋಧ್ಯೆ ಜಿಲ್ಲೆಗಳಲ್ಲಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.