2 ದಿನದಿಂದ ಭಾರೀ ಮಳೆ: ಉತ್ತರ ಪ್ರದೇಶದಲ್ಲಿ 33 ಮಂದಿ ಬಲಿ
ಲಕ್ನೋ, ಜುಲೈ 28: ಉತ್ತರ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ 33 ಜನ ಬಲಿಯಾಗಿದ್ದಾರೆ. ಜುಲೈ 26 ಮತ್ತು 27 ರಂದು ನಿರಂತರವಾಗಿ ಮಳೆ ಸುರಿದಿದ್ದು 23 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
104 ಮನೆಗಳು ನಾಶವಾಗಿದ್ದರೆ, ಆಗ್ರಾದಲ್ಲಿ ಆರು, ಮೀರತ್ ಮತ್ತು ಮೈನಿಪುರಿಯಲ್ಲಿ ತಲಾ ನಾಲ್ಕು ಮತ್ತು ಮುಜಾಫರ್ ನಗರ ಮತ್ತು ಕಸ್ಗಂಜ್ ನಲ್ಲಿ ತಲಾ ಮೂರು, ಬರೇಲಿಯಲ್ಲಿ ಇಬ್ಬರು ಮೃತರಾಗಿದ್ದಾರೆ.
ವರುಣನ ರುದ್ರನರ್ತನಕ್ಕೆ ನಲುಗಿದ ಶ್ರೀಕೃಷ್ಣನ ಮಥುರಾ ನಗರಿ
ಉತ್ತರ ಭಾರತದಾದ್ಯಂತ ಸುರಿಯುತ್ತಿರುವ ಮಳೆಗೆ ರಾಜಧಾನಿ ದೆಹಲಿಯಲ್ಲೂ ಜನಜೀವನ ಅಸ್ತವ್ಯಸ್ಥವಾಗಿದೆ. ಯಮುನಾ ನದಿಯ ನೀರಿನ ಮಟ್ಟ ದಿನೇ ದಿನೇ ಹೆಚ್ಚುತ್ತಿದ್ದು ಆತಂಕ ಸೃಷ್ಟಿಯಾಗಿದೆ. ಪ್ರವಾಹ ಭೀತಿ ಆರಂಭವಾಗಿದೆ. ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಗೆ ಉಂಟಾದ ಭೂಕುಸಿತಕ್ಕೆ ಹೆದ್ದಾರಿ ಬಂದ್ ಆಗಿದೆ.
ಒಟ್ಟಿನಲ್ಲಿ ಈ ಬಾರಿಯ ಮಳೆ ಉತ್ತರ ಭಾರತದಾದ್ಯಂತ ಪ್ರವಾಹದ ಸ್ಥಿತಿಗೆ ಕಾರಣವಾಗಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸುವ ಕಾರ್ಯ ನಡೆಯುತ್ತಿದೆ.