ಡಾವೋಸ್ ನಲ್ಲಿ ಮೆಚ್ಚುಗೆ ಗಳಿಸಿದ ಮೋದಿ ಮೇಲೆ ರಾಹುಲ್ ಟೀಕಾಸ್ತ್ರ
ನವದೆಹಲಿ, ಜನವರಿ 23 : ಸ್ವಿಟ್ಜರ್ಲೆಂಡ್ ನ ಡಾವೋಸ್ ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕಾನಾಮಿಕ್ ಫೋರಂನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಐತಿಹಾಸಿಕ ಭಾಷಣಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಯ ಮಾತುಗಳು ಬರುತ್ತಿರುವ ಹೊತ್ತಿನಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾಡಿರುವ ಒಂದು ಕಾಮೆಂಟ್ ಟೀಕೆಗೆ ಗುರಿಯಾಗಿದೆ.
"ನಿಮಗೆ ಉತ್ತಮ ಆರೋಗ್ಯಕರ ವಾತಾವರಣ, ಶಾಂತಿ, ನೆಮ್ಮದಿ, ಸಂಪತ್ತು, ಸಮೃದ್ಧಿ ಬೇಕಿದ್ದರೆ ಭಾರತಕ್ಕೆ ಬನ್ನಿ. ನಾವು ನಿಮಗೆ ಕೆಂಪು ಹಾಸು ಹಾಸುತ್ತೇವೆ" ಎಂದು ನರೇಂದ್ರ ಮೋದಿಯವರು ವಿಶ್ವ ನಾಯಕರಿಗೆ ಕರೆ ನೀಡಿರುವ ಸಂದರ್ಭದಲ್ಲಿ, ಭಾರತದ ಸಂಪತ್ತನ್ನು ಒಂದಿಷ್ಟು ಶ್ರೀಮಂತರು ಲೂಟಿ ಹೊಡೆಯುತ್ತಿದ್ದಾರೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಭಾರತದಲ್ಲಿ ಶ್ರೀಮಂತಿಕೆ, ಲೆಕ್ಕ ತಪ್ಪಿಸಿ- ಬೆಚ್ಚಿಬೀಳಿಸುವ ಲೆಕ್ಕಾಚಾರ
ರಾಹುಲ್ ಹೇಳಿರುವುದೇನೆಂದರೆ, "ಆತ್ಮೀಯ ಪಿಎಂ, ಸ್ವಿಟ್ಜರ್ಲೆಂಡ್ ಗೆ ಸ್ವಾಗತ. ಇಡೀ ದೇಶದ ಶೇ.73ರಷ್ಟು ಸಂಪತ್ತು ಶೇ.1ರಷ್ಟು ಶ್ರೀಮಂತರ ಪಾಲು ಏಕೆ ಆಗುತ್ತಿದೆ ಎಂದು ಡಾವೋಸ್ ಗೆ ಹೇಳಿ" ಎಂದು ವ್ಯಂಗ್ಯವಾಡಿದ್ದಾರೆ. ಭಾರತದಲ್ಲಿ ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚಾಗುತ್ತಿದೆ ಎಂದು ಆಕ್ಸ್ ಫಾಮ್ ನಡೆಸಿರುವ ಸಮೀಕ್ಷೆಯ ವರದಿಯನ್ನು ಅವರು ಲಗತ್ತಿಸಿದ್ದಾರೆ.
ವರ್ಲ್ಡ್ ಎಕಾನಾಮಿಕ್ ಫೋರಂನಲ್ಲಿ ಮಾಡಿದ ಅದ್ಭುತ ಭಾಷಣಕ್ಕಾಗಿ ಮೆಚ್ಚುಗೆಗೆ ಪಾತ್ರರಾದ ನರೇಂದ್ರ ಮೋದಿಯವರು ಭಾರತದಲ್ಲಿನ ಆರ್ಥಿಕ ಅಸಮಾನತೆ ಬಗ್ಗೆಯೂ ಹೇಳಿ ಎಂದು ರಾಹುಲ್ ಗಾಂಧಿಯವರು ಸಲಹೆ ನೀಡಿದ್ದಾರೆ.
Dear PM,
— Office of RG (@OfficeOfRG) January 23, 2018
Welcome to Switzerland! Please tell DAVOS why 1% of India’s population gets 73% of its wealth? I’m attaching a report for your ready reference. https://t.co/lLSNOig5pE
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಅವರು, ಶ್... ರಾಹುಲ್ ಜಿ, ಏಕೆ ಮೋದಿಯವರನ್ನು ಡಿಸ್ಟರ್ಬ್ ಮಾಡುತ್ತೀರಿ, ಅವರು ಭಾರತಕ್ಕೆ ಬಂಡವಾಳ ತರಲು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ನಿಮ್ಮ ಪ್ರಶ್ನೆಗೆ ನಾನು ಉತ್ತರ ನೀಡುತ್ತೇನೆ. ಸ್ವಾತಂತ್ರ್ಯ ಬಂದಂದಿನಿಂದ ನಿಮ್ಮ ಪೂರ್ವಜರು ಮಾಡಿರುವ ದುರಾಡಳಿತದಿಂದಾಗಿ ಶೇ.73ರಷ್ಟು ಸಂಪತ್ತು ಶೇ.1ರಷ್ಟು ಜನರ ಪಾಲಾಗುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.
ವಿಶ್ವವೇ ಒಂದು ಕುಟುಂಬ : ದಾವೋಸ್ನಲ್ಲಿ ಪ್ರಧಾನಿ ಮೋದಿ
ವರ್ಲ್ಡ್ ಎಕಾನಾಮಿಕ್ ಫೋರಂನಲ್ಲಿ ಭಾಷಣ ಮಾಡಿರುವ ಮೊದಲ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು, ಜಾಗತಿಕ ತಾಪಮಾನ, ಭಯೋತ್ಪಾದನೆ ಸೇರಿದಂತೆ ವಿಶ್ವ ಇಂದು ಹಲವಾರು ಬಗೆಯ ಸವಾಲುಗಳನ್ನು ಎದುರಿಸುತ್ತಿದೆ ಎಂದು ಹೇಳಿದ್ದಾರೆ.