ಕೃಷಿ ಕಾಯ್ದೆಯ ನ್ಯೂನತೆ ತಿಳಿಸಲು ನಿಮ್ಮ ಸಹಕಾರ ಬೇಕು: ರಾಹುಲ್ ಗಾಂಧಿ
ನವದೆಹಲಿ,ಜನವರಿ 15: ಕೃಷಿ ಕಾಯ್ದೆಯ ನ್ಯೂನತೆ ತಿಳಿಸಲು ನಿಮ್ಮ ಸಹಕಾರ ಬೇಕು ಎಂದು ಸಾರ್ವಜನಿಕರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ. ಬಹುತೇಕ ರೈತ ಕಾರ್ಮಿಕರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು ಈ ಕಾನೂನಿನಿಂದ ಅವರಿಗೆ ತೊಂದರೆಯಾಗಲಿದೆ.
ಇದರಿಂದ ರೈತರಿಗೆ ಏನೇನು ತೊಂದರೆಯಾಗಲಿದೆ, ಸರ್ಕಾರದ ಖರೀದಿಗೆ ಏನು ಪ್ರಯೋಜನ, ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೇಲೆ ಯಾವ ರೀತಿ ಪರಿಣಾಮವನ್ನುಂಟುಮಾಡಲಿದೆ ಎಂದು ಕೈಪಿಡಿಯಲ್ಲಿ ವಿವರಿಸುತ್ತೇವೆ ಎಂದು ಕೈಪಿಡಿಯನ್ನು ಅಂತಿಮಗೊಳಿಸುತ್ತಿರುವ ನಾಯಕರೊಬ್ಬರು ತಿಳಿಸಿದ್ದಾರೆ.
"60 ರೈತರ ಸಾವಿನಿಂದಾಗದ ಮುಜುಗರ ಟ್ರ್ಯಾಕ್ಟರ್ ರ್ಯಾಲಿಯಿಂದಾಗುತ್ತಾ?"
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗೆ ಸಂಬಂಧಪಟ್ಟಂತೆ. ಅದರಲ್ಲಿರುವ ವಾಸ್ತವಾಂಶಗಳು, ರೈತರು ಏಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬಿತ್ಯಾದಿ ವಿಷಯಗಳನ್ನು ಹೊತ್ತ ಕೈಪಿಡಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಲು ಸಜ್ಜಾಗಿದೆ.
ನೂತನ ಕೃಷಿ ಕಾಯ್ದೆಯಲ್ಲಿರುವ ನ್ಯೂನತೆಗಳೇನೇನು ಎಂದು ಹೇಳಿ ಅದರಿಂದ ರೈತರಿಗೆ ಏನು ತೊಂದರೆಯಿದೆ ಎಂದು ತಿಳಿಸುವ ಕೈಪಿಡಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ದೆಹಲಿ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಅವರ ನಿವಾಸಕ್ಕೆ ತೆರಳಿ ಮೂರು ಕೃಷಿ ಕಾಯ್ದೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಲಿದ್ದಾರೆ.
ಬಿಡುಗಡೆಯ ದಿನಾಂಕವನ್ನು ಇನ್ನೂ ನಿರ್ಧರಿಸಿಲ್ಲ, ಆದರೆ ಕಿರುಪುಸ್ತಕವು ಕಾನೂನುಗಳ ಅಪಾಯಗಳ ನೀಲನಕ್ಷೆಯಾಗಿರುತ್ತದೆ ಮತ್ತು ಮಸೂದೆಗಳ ಬಗ್ಗೆ ಪಕ್ಷದ ದೃಷ್ಟಿಕೋನವೂ ಆಗಿರುತ್ತದೆ ಎಂದಿದ್ದಾರೆ.
ಮೂರು ನೂತನ ಕೃಷಿ ಕಾಯ್ದೆಯನ್ನು ಹಿಂತೆಗೆದುಕೊಳ್ಳುವಂತೆ ಕಾಂಗ್ರೆಸ್ ಆರಂಭದಿಂದಲೂ ಒತ್ತಾಯಿಸುತ್ತಲೇ ಬಂದಿದೆ, ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿ ರಾಜ್ ಭವನ ಘೆರಾವೊವನ್ನು ಎಲ್ಲಾ ರಾಜ್ಯಗಳಲ್ಲಿ ಹಮ್ಮಿಕೊಂಡಿದೆ.
ಮೋದಿ ಸರ್ಕಾರ ವಿರುದ್ಧ ರೈತರು ಹಮ್ಮಿಕೊಂಡಿರುವ ಸತ್ಯಾಗ್ರಹದಲ್ಲಿ ಜತೆಯಾಗುವಂತೆ ಕರೆ ನೀಡಿರುವ ಅವರು, ರೈತರ ಪ್ರತಿಭಟನೆಗೆ ಪೂರಕವಾಗಿ ಮತ್ತು ಇಂಧನ ಬೆಲೆ ಏರಿಕೆ ವಿರುದ್ಧ ಮಾತನಾಡಿದ್ದಾರೆ.