ಬಿಜೆಪಿ ಜೊತೆ ನೇರ ಫೈಟ್ ಇರೋ ಜಾಗದಲ್ಲಿ ಅಣ್ಣತಂಗಿ ಇಬ್ಬರೂ ಇಲ್ಲ: ಕೇಜ್ರಿವಾಲ್ ಲೇವಡಿ
ನವದೆಹಲಿ, ಮೇ 8: ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಕನಸು ಭಗ್ನವಾದ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯ ವಿರುದ್ದ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಪ್ರಿಯಾಂಕಾ ಸುಮ್ಮನೇ ತಮ್ಮ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಪ್ರಿಯಾಂಕಾ ಯಾಕೆ ಪ್ರಚಾರಕ್ಕೆ ಹೋಗಲಿಲ್ಲ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಪೊಲೀಸ್ ವರದಿ: ಕೇಜ್ರಿವಾಲ್ ಕಪಾಳಮೋಕ್ಷದ ಹಿಂದೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತನದ್ದೇ ಕಿತಾಪತಿ
ಪಕ್ಷದ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಕೇಜ್ರಿವಾಲ್, ಉತ್ತರಪ್ರದೇಶದಲ್ಲಿ, ಪ್ರಿಯಾಂಕಾ ಎಸ್ಪಿ - ಬಿಎಸ್ಪಿ ವಿರುದ್ದ ಪ್ರಚಾರವನ್ನು ನಡೆಸುತ್ತಿದ್ದಾರೆ. ಇನ್ನು ದೆಹಲಿಯಲ್ಲಿ ನಮ್ಮ ಪಕ್ಷದ ವಿರುದ್ದ ಪ್ರಚಾರ ನಡೆಸುತ್ತಿದ್ದಾರೆಂದು ಕೇಜ್ರಿವಾಲ್ ಹೇಳಿದ್ದಾರೆ.
ಅಣ್ಣತಂಗಿ ಇಬ್ಬರೂ ಎಲ್ಲಿ ಬಿಜೆಪಿ ವಿರುದ್ದ ಕಾಂಗ್ರೆಸ್ಸಿಗೆ ನೇರ ಸ್ಪರ್ಧೆಯಿದೆಯೋ ಅಲ್ಲಿ ಪ್ರಚಾರಕ್ಕೆ ಹೋಗುತ್ತಿಲ್ಲ ಎಂದಿರುವ ಕೇಜ್ರಿವಾಲ್, ಪ್ರಿಯಾಂಕಾ ಸುಮ್ಮನೆ ಟೈಮ್ ವೇಸ್ಟ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
Delhi CM A Kejriwal: She (Priyanka Gandhi) is wasting her time,why doesn't she campaign in Rajasthan&MP?She's doing rallies in UP against SP-BSP,she's doing rallies in Delhi against AAP. Both the brother&the sister aren't going to those places where there's direct fight with BJP. pic.twitter.com/jTEsOmIJjT
— ANI (@ANI) May 8, 2019
ಬಿಜೆಪಿ ಸೋಲಿಸಲು ಆಪ್ನೊಂದಿಗೆ ಮೈತ್ರಿ ಬಹುತೇಕ ಫೈನಲ್ ಆಗಿತ್ತು, ಆದರೆ ಅರವಿಂದ್ ಕೇಜ್ರಿವಾಲ್ ಯುಟರ್ನ್ ಹೊಡೆದಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಕೇಜ್ರಿವಾಲ್, ಮಹಾಮೈತ್ರಿ ಎನ್ನುವುದು ರಾಹುಲ್ ಗಾಂಧಿಗೆ ಕೇವಲ ಪ್ರದರ್ಶನಕ್ಕೆ, ಆದರೆ ನೈಜವಾಗಿ ದೇಶದೆಲ್ಲೆಡೆ ಬಿಜೆಪಿಗೆ ಕಾಂಗ್ರೆಸ್ ಸಹಾಯ ಮಾಡುತ್ತಿದೆ ಎಂದು ತಿರುಗೇಟು ನೀಡಿದ್ದರು.