ಗಾಂಧಿ ಕುಟುಂಬದ ಎಸ್ಪಿಜಿ ಭದ್ರತೆ ಹಿಂಪಡೆಯಲು ಕಾರಣವೇನು?
ನವದೆಹಲಿ, ನವೆಂಬರ್ 8: ಗಾಂಧಿ ಕುಟುಂಬಕ್ಕೆ ನೀಡಲಾಗಿದ್ದ ಎಸ್ಪಿಜಿ ಭದ್ರತೆಯ ಸವಲತ್ತನ್ನು ಕೇಂದ್ರ ಸರ್ಕಾರ ವಾಪಸ್ ತೆಗೆದುಕೊಂಡಿದೆ. ಪ್ರಧಾನಿ ಮತ್ತು ಅವರ ಕುಟುಂಬದವರಿಗೆ ಮಾತ್ರ ನೀಡುವ ಈ ಭದ್ರತೆಯ ಸೌಲಭ್ಯವನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪತ್ನಿ ಸೋನಿಯಾ ಗಾಂಧಿ ಮತ್ತು ಅವರ ಮಕ್ಕಳಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾಧ್ರಾ ಅವರಿಗೆ ನೀಡುವುದನ್ನು ಮುಂದುವರಿಸಲಾಗಿತ್ತು.
ಗಾಂಧಿ ಕುಟುಂಬಕ್ಕೆ ನೀಡಲಾಗಿರುವ ಎಸ್ಪಿಜಿಯನ್ನು ಹಿಂದಕ್ಕೆ ಪಡೆದುಕೊಂಡಿರುವ ಕೇಂದ್ರ ಗೃಹ ಇಲಾಖೆಯ ಕ್ರಮ ರಾಜಕೀಯ ಚರ್ಚೆಯ ವಿಷಯವಾಗಿದೆ. ಕಳೆದ ಆಗಸ್ಟ್ನಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಎಸ್ಪಿಜಿ ಭದ್ರತೆಯನ್ನು ವಾಪಸ್ ಪಡೆದುಕೊಂಡಿದ್ದ ಸರ್ಕಾರ, ಈಗ ಗಾಂಧಿ ಕುಟುಂಬದ ವಿಶೇಷ ಭದ್ರತೆಯನ್ನೂ ತೆಗೆದು ಅವರಿಗೆ ಸಿಆರ್ಪಿಎಫ್ ಝೆಡ್ ಪ್ಲಸ್ ಭದ್ರತೆಗೆ ರಕ್ಷಣಯ ಮಟ್ಟವನ್ನು ಇಳಿಸಿದೆ.
1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯಾದ ಸಂದರ್ಭದಿಂದಲೂ ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ನ ಭದ್ರತೆಯ ಸೌಲಭ್ಯವನ್ನು ಒದಗಿಸಲಾಗುತ್ತಿತ್ತು.
ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ: ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್ಪಿಜಿ ಭದ್ರತೆ ವಾಪಸ್
ಇತ್ತೀಚೆಗೆ ನಡೆಸಿದ ಭದ್ರತಾ ವಿವರಗಳ ಪರಾಮರ್ಶೆಯ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. 3,000 ಭದ್ರತಾ ಸಿಬ್ಬಂದಿಯನ್ನು ಹೊಂದಿರುವ ಎಸ್ಪಿಜಿ, ಇನ್ನು ಮುಂದೆ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಗಾಗಿ ಮಾತ್ರ ಮೀಸಲಾಗಿರಲಿವೆ.
ಎಸ್ಪಿಜಿ ಸಲಹೆ ಉಲ್ಲಂಘನೆ
ಗಾಂಧಿ ಕುಟುಂಬಕ್ಕೆ ನೀಡಿದ ಎಸ್ಪಿಜಿ ವಾಪಸ್ ಪಡೆದುಕೊಳ್ಳಲು ಈ ಮೂವರು ನಾಯಕರು ಹಲವು ಬಾರಿ ಎಸ್ಪಿಜಿ ಭದ್ರತಾ ಸಲಹೆಗಳನ್ನು ಉಲ್ಲಂಘನೆ ಮಾಡಿರುವುದು ಪ್ರಮುಖ ಕಾರಣಗಳಲ್ಲಿ ಒಂದು ಎನ್ನಲಾಗಿದೆ. ಎಸ್ಪಿಜಿಯು ಸರಾಗ ಕಾರ್ಯಾಚರಣೆ ನಡೆಸಲು ತೊಂದರೆಯುಂಟುಮಾಡುತ್ತಿದ್ದರು ಮತ್ತು ಎಸ್ಪಿಜಿಗೆ ಸಹಕಾರ ನೀಡುತ್ತಿರಲಿಲ್ಲ ಎಂದು ಆರೋಪಿಸಲಾಗಿದೆ.
ಪ್ರಧಾನಮಂತ್ರಿ ಮೋದಿ ರಕ್ಷಣಾ ಕೋಟೆ ಎಸ್ ಪಿಜಿ ಬಗ್ಗೆ ನಿಮಗೆಷ್ಟು ಗೊತ್ತು?
ಬಿಆರ್ ವಾಹನ ಬಳಸದ ರಾಹುಲ್ ಗಾಂಧಿ
2015 ರಿಂದ 2019ರ ಮೇ ಅವಧಿಯವರೆಗೆ ರಾಹುಲ್ ಗಾಂಧಿ ದೆಹಲಿಯೊಂದರಲ್ಲಿಯೇ 1,892 ಬಾರಿ ಗುಂಡು ನಿರೋಧಕ (ಬಿಆರ್) ವಾಹನವನ್ನು ಬಳಸಲು ನಿರಾಕರಿಸಿದ್ದಾರೆ. ಈ ರೀತಿಯ ಘಟನೆಗಳು ಒಂದಲ್ಲ ಒಂದು ಸ್ಥಳದಲ್ಲಿ ಬಹುತೇಕ ಪ್ರತಿ ದಿನ ನಡೆದಿದೆ. ಅಲ್ಲದೆ, ದೆಹಲಿಯ ಆಚೆಗೂ ಸುಮಾರು 250 ಬಾರಿ ರಾಹುಲ್ ಗಾಂಧಿ, ಬುಲೆಟ್ ಪ್ರೂಫ್ ವಾಹನದಲ್ಲಿ ತೆರಳುವುದನ್ನು ಬಿಟ್ಟು ಬೇರೆ ವಾಹನದಲ್ಲಿ ತೆರಳಿದ್ದಾರೆ. 2017ರಲ್ಲಿ ಗುಜರಾತ್ನಲ್ಲಿ ಕೂಡ ರಾಹುಲ್ ಗಾಂಧಿ ಈ ರೀತಿ ನಡೆದುಕೊಂಡಿರುವುದು ವರದಿಯಾಗಿದೆ.
ಕಾರ್ ಮೇಲೆ ಕಲ್ಲು ತೂರಾಟ
ಎಸ್ಪಿಜಿಯ ಭದ್ರತಾ ಸಲಹೆಯನ್ನು ಮೀರಿ ಅವರು ಗುಂಡು ನಿರೋಧಕ ವ್ಯವಸ್ಥೆ ಇಲ್ಲದ ಕಾರ್ನಲ್ಲಿ ತೆರಳುವ ವೇಳೆ ಅವರ ಖಾಸಗಿ ಭದ್ರತಾ ಕಾರ್ನ ಮೇಲೆ ಕಲ್ಲು ತೂರಾಟದ ಘಟನೆ ನಡೆದಿತ್ತು. ಇದರಲ್ಲಿ ಎಸ್ಪಿಜಿ ಪಿಎಸ್ಓ ಒಬ್ಬರಿಗೆ ಗಾಯಗಳಾಗಿತ್ತು ಎಂದು ಐಎಎನ್ಎಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ಗೆ ನೀಡಿದ Z+ ಭದ್ರತೆ ವಾಪಸ್?
ಎಸ್ಪಿಜಿ ವಾಹನ ಬಳಸ ಸೋನಿಯಾ-ಪ್ರಿಯಾಂಕಾ
ಇದೇ ರೀತಿಯ ಆರೋಪ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ವಿರುದ್ಧವೂ ಇದೆ. ಇವರಿಬ್ಬರೂ ಇದೇ ಅವಧಿಯಲ್ಲಿ ಗುಂಡು ನಿರೋಧಕ ಎಸ್ಪಿಜಿ ವಾಹನದ ಬದಲು ಬೇರೆ ವಾಹನವನ್ನು 389 ಬಾರಿ ಬಳಸಿದ್ದಾರೆ ಎಂದು ಹೇಳಲಾಗಿದೆ.
ಎಸ್ಪಿಜಿ ಕಾಯ್ದೆ ಜಾರಿ
1984ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಅಂಗರಕ್ಷಕರಿಂದಲೇ ಹತ್ಯೆಯಾದ ಬಳಿಕ ಪ್ರಧಾನಿಗಳ ರಕ್ಷಣೆಗಾಗಿ 1995ರಲ್ಲಿ ಎಸ್ಪಿಜಿ ಭದ್ರತಾ ಕಾಯ್ದೆ ಜಾರಿಗೆ ತರಲಾಗಿತ್ತು. ರಾಜೀವ್ ಗಾಂಧಿ ಅವರ ಹತ್ಯೆಯ ಬಳಿಕ 1991ರಲ್ಲಿ ಎಸ್ಪಿಜಿ ಭದ್ರತೆಯನ್ನು ಮಾಜಿ ಪ್ರಧಾನಿ ಮತ್ತು ಅವರ ಕುಟುಂಬದವರಿಗೆ ಹತ್ತು ವರ್ಷಗಳವರೆಗೆ ವಿಸ್ತರಿಸುವಂತೆ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲಾಗಿತ್ತು.
2003ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತಂದಿದ್ದ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ, ಈ ಸ್ವಯಂಚಾಲಿತ ಭದ್ರತೆ ವಿಸ್ತರಣೆಯ ಅವಧಿಯನ್ನು ಹತ್ತು ವರ್ಷದಿಂದ ಒಂದು ವರ್ಷಕ್ಕೆ ಇಳಿಸಲಾಗಿತ್ತು. ಮಾಜಿ ಪ್ರಧಾನಿ ಮತ್ತು ಅವರ ಕುಟುಂಬದವರಿಗೆ ಇರುವ ಬೆದರಿಕೆಯ ಮಟ್ಟವನ್ನು ಪರಿಶೀಲಿಸಿ ಎಸ್ಪಿಜಿ ವಿಸ್ತರಿಸುವಂತೆ ತಿದ್ದುಪಡಿ ಮಾಡಲಾಗಿತ್ತು.
ದೇವೇಗೌಡರ ಭದ್ರತೆ ವಾಪಸ್
ಪ್ರಧಾನಿ ಮತ್ತು ಇತರೆ ಕೆಲವು ಆಯ್ದ ವ್ಯಕ್ತಿಗಳನ್ನು ಹೊರತುಪಡಿಸಿ ಸುದೀರ್ಘ ಕಾಲದಿಂದಲೂ ಗಾಂಧಿ ಕುಟುಂಬದವರಿಗೆ ಎಸ್ಪಿಜಿ ಭದ್ರತೆ ಒದಗಿಸಲಾಗುತ್ತಿತ್ತು. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಇಬ್ಬರೂ ಹತ್ಯೆಯಾಗಿದ್ದರಿಂದ ಕುಟುಂಬದ ಮೂವರಿಗೂ ಎಸ್ಪಿಜಿ ಮುಂದುವರಿಸಲಾಗಿತ್ತು.
ಮಾಜಿ ಪ್ರಧಾನಿಗಳಾದ ಎಚ್ ಡಿ ದೇವೇಗೌಡ ಮತ್ತು ವಿ.ಪಿ ಸಿಂಗ್ ಅವರ ಎಸ್ಪಿಜಿ ಭದ್ರತೆಯನ್ನು ವಾಪಸ್ ಪಡೆಯಲಾಗಿತ್ತು. ಆಗಸ್ಟ್ ತಿಂಗಳಲ್ಲಿ ಮನಮೋಹನ್ ಸಿಂಗ್ ಅವರಿಗೂ ಭದ್ರತಾ ಮಟ್ಟದಲ್ಲಿ ಬದಲಾವಣೆ ಮಾಡಲಾಗಿತ್ತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 2018ರಲ್ಲಿ ನಿಧನರಾಗುವವರೆಗೂ ಅವರಿಗೆ ಎಸ್ಪಿಜಿ ಭದ್ರತೆ ಒದಗಿಸಲಾಗಿತ್ತು.