ಕನಸು ಕಾಣಲು ಕೂಡ ಟ್ಯೂಷನ್ : ರಾಹುಲ್ ಬಗ್ಗೆ ಸ್ಮೃತಿ ಇರಾನಿ ವ್ಯಂಗ್ಯ
ನವದೆಹಲಿ, ಡಿಸೆಂಬರ್ 19 : "ಶೇ.50ರಷ್ಟು ರೈತರ ಸಾಲಮನ್ನಾ ಮಾಡುವವರೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿದ್ದೆ ಮಾಡಲು ಬಿಡುವುದಿಲ್ಲ" ಎಂದು ರಾಹುಲ್ ಗಾಂಧಿ ಅವರು ಮೋದಿಯವರಿಗೆ ಎಚ್ಚರಿಕೆ ನೀಡುವ ಮುನ್ನ ನಡೆದಿರುವ ಘಟನೆ ಚರ್ಚೆಗೆ ಗ್ರಾಸವಾಗಿದೆ.
ಮೋದಿಗೆ ಎಚ್ಚರಿಕೆ ನೀಡಲೆಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಅವರು ತಮ್ಮ ಪಕ್ಷ ಹಿರಿಯ ಮತ್ತು ಕಿರಿಯ ನಾಯಕರಿಂದ ಏನು ಹೇಳಬೇಕೆಂದು ಟಿಪ್ಸ್ ಪಡೆಯುತ್ತಿರುವುದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆಗಳು ನಡೆಯುತ್ತಿವೆ.
ರೈತರ ಸಾಲ ಮನ್ನಾ ಬಗ್ಗೆ ಸುಳ್ಳು ಹೇಳುತ್ತಿರುವ ರಾಹುಲ್, ವಾಸ್ತವ ಏನು?
"ನೀವು ಏನು ಹೇಳಬೇಕೆಂದರೆ, ಮೋದಿಯವರು ಏನನ್ನು ಮಾಡಲು ಸಾಧ್ಯವಾಗಲಿಲ್ಲವೋ, ಅದನ್ನು ನಾನು ಮಾಡಿದ್ದೇನೆ" ಎಂದು ಜ್ಯೋತಿರಾಧಿತ್ಯ ಸಿಂಧಿಯಾ ಅವರು ರಾಹುಲ್ ಗಾಂಧಿ ಬಳಿ ಬಗ್ಗಿ ಪಿಸುದನಿಯಲ್ಲಿ ಟಿಪ್ಸ್ ನೀಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಎಷ್ಟೇ ಪಿಸುದನಿಯಲ್ಲಿ ಹೇಳಿದರೂ ಕೇಳಲು ಸ್ಪಷ್ಟವಾಗಿದೆ.
ಮಧ್ಯ ಪ್ರದೇಶದ ಮುಖ್ಯಮಂತ್ರಿಯಾಗುವ ಅವಕಾಶವನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದರೂ, 48 ವರ್ಷದ ರಾಹುಲ್ ಅವರ ಬಲಗೈ ಬಂಟರಂತೆ ಇರುವ 47 ವರ್ಷದ ಯುವ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಅವರು, "... ಸಾಲಮನ್ನಾ ಮಾಡುವಾಗ ಕೇಂದ್ರದ ಸಹಾಯ ಕೇಳಬೇಡಿ" ಎಂದು ಮತ್ತೆ ಪಿಸುಗುಟ್ಟುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಕನಸು ಕಾಣಲು ಟ್ಯೂಷನ್ : ಸ್ಮೃತಿ ವ್ಯಂಗ್ಯ
ಕಾಂಗ್ರೆಸ್ ಟ್ವಿಟ್ಟರ್ ಪುಟದಲ್ಲಿ ಈ ಗುಸುಗುಸು ಪಿಸುಪಿಸು ಸನ್ನಿವೇಶ ನಡೆದ ನಂತರದ ವಿಡಿಯೋ ಇದ್ದರೆ, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಮತ್ತು ಹಲವಾರು ಟಿವಿ ಚಾನಲ್ಲುಗಳು ರೆಕಾರ್ಡ್ ಮಾಡಿಕೊಂಡಿರುವ ವಿಡಿಯೋವನ್ನು ಟ್ವೀಟ್ ಮಾಡಿರುವ ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರು, ಇತ್ತೀಚಿನ ದಿನಗಳಲ್ಲಿ ಕನಸು ಕಾಣಲು ಕೂಡ ಟ್ಯೂಷನ್ ತೆಗೆದುಕೊಳ್ಳಬೇಕಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಿಂದ ಸ್ಪರ್ಧಿಸಿ ರಾಹುಲ್ ಗಾಂಧಿ ವಿರುದ್ಧ ಇದೇ ಸ್ಮೃತಿ ಇರಾನಿ ಸೋತಿದ್ದರು. ನಂತರ, ಗುಜರಾತ್ ನಿಂದ ರಾಜ್ಯಸಭೆಗೆ ಆಯ್ಕೆಯಾಗಿ ಈಗ ಕೇಂದ್ರ ಸಚಿವೆಯಾಗಿದ್ದಾರೆ.
ದೇಶದ ಜನರೇ ಇವರ ಬಗ್ಗೆ ಎಚ್ಚರಿಕೆಯಿಂದಿರಬೇಕು
ರಾಹುಲ್ ಗಾಂಧಿಯವರು ಕನಸು ಕಾಣಲು ಕೂಡ ಟ್ಯೂಷನ್ ಪಡೆಯುತ್ತಿದ್ದಾರೆ. ಅವರಿಗೆ ತಮ್ಮ ಮೇಲೆಯೇ ನಂಬಿಕೆಯಿಲ್ಲ. ಏನು ಹೇಳಬೇಕೆಂದು ಇತರರು ಅವರಿಗೆ ಕಲಿಸುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಮೋದಿಯವರಿಗೆ ಇವರು ಮಲಗಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡುವುದಿರಲಿ, ರಾಹುಲ್ ಗಾಂಧಿಯವರು ಯಾವುದೇ ಹುದ್ದೆಗೆ ಅರ್ಹರಲ್ಲ ಎಂಬುದು ಅವರೇ ದೇಶದ ಜನರಿಗೆ ನೀಡುತ್ತಿರುವ ಎಚ್ಚರಿಕೆ ಎಂದು ಸ್ಮೃತಿ ಇರಾನಿ ಅವರು ಮಾತಿನ ಚಾಟಿ ಬೀಸಿದ್ದಾರೆ.
ರಾಜಸ್ತಾನ ಸರಕಾರಕ್ಕೆ ಕೃಷಿ ಸಾಲ ಮನ್ನಾದಿಂದ 70 ಸಾವಿರ ಕೋಟಿ ಹೆಚ್ಚುವರಿ ಹೊರೆ
ನೆಮ್ಮದಿಯಿಂದ ನಿದ್ರಿಸಲು ಬಿಡುವುದಿಲ್ಲ
ಮಧ್ಯ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುತ್ತಲೇ ಕಾಂಗ್ರೆಸ್ ಪಕ್ಷ ವಾಗ್ದಾನ ನೀಡಿದಂತೆ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದೆ. ಇದೇ ಸಂಗತಿಯನ್ನು ರಾಹುಲ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ನಾವೇನು ವಾಗ್ದಾನ ನೀಡಿದ್ದೆವು, ಅದನ್ನು ಮಾಡಿ ತೋರಿಸಿದ್ದೇವೆ. ಪ್ರಧಾನ ಮಂತ್ರಿಗಳು ಇದರಿಂದ ಕಲಿಯಬೇಕು. ಪ್ರಧಾನಿಗಳೇ, ಒಂದು ಸಂಗತಿ ತಿಳಿಯಿರಿ, ಅವರು ಇಡೀ ದೇಶದ ರೈತರ ಸಾಲವನ್ನು ಎಲ್ಲಿಯವರೆಗೆ ಮನ್ನಾ ಮಾಡುವುದಿಲ್ಲವೋ, ಅಲ್ಲಿಯವರೆಗೆ ಅವರಿಗೆ ನಾವು ನೆಮ್ಮದಿಯಿಂದ ನಿದ್ದೆ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಮಧ್ಯ ಪ್ರದೇಶದಲ್ಲಿ ರೈತರ 2 ಲಕ್ಷ ರುಪಾಯಿವರೆಗಿನ ಸಾಲಮನ್ನಾ ಮಾಡಲಾಗುತ್ತಿದ್ದರೆ, ರಾಜಸ್ಥಾನದಲ್ಲಿ 70 ಸಾವಿರ ಕೋಟಿ ಸಾಲಮನ್ನಾ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ.
ಪ್ರಧಾನಿ ಮೋದಿಗೆ ನಿದ್ದೆ ಮಾಡೋಕೆ ಬಿಡಲ್ಲ ಎಂದ ರಾಹುಲ್ ಗಾಂಧಿ
ರಾಹುಲ್ ಸುತ್ತಮುತ್ತ ಬುದ್ಧಿಜೀವಿಗಳ ತಂಡ
ರಾಹುಲ್ ಗಾಂಧಿಯವರು ಪತ್ರಿಕಾಗೋಷ್ಠಿ ಶುರುಮಾಡುವ ಮುನ್ನ ಒಬ್ಬಿಬ್ಬರಲ್ಲಿ ನಾಲ್ಕಾರು ಅನುಭವಿ ಮತ್ತು ಬುದ್ಧಿವಂತ ಕಾಂಗ್ರೆಸ್ ಧುರೀಣರು ರಾಹುಲ್ ಅವರನ್ನು ಸುತ್ತುವರಿದಿದ್ದರು. ಗುಲಾಮ್ ನಬಿ ಆಝಾದ್, ಅಹ್ಮದ್ ಪಟೇಲ್, ಜ್ಯೋತಿರಾಧಿತ್ಯ ಸಿಂಧಿಯಾ, ಸುಪ್ರೀಂ ಕೋರ್ಟ್ ವಕೀಲ ಅಭಿಷೇಕ್ ಸಿಂಘ್ವಿ, ರಾಜಸ್ಥಾನದ ಚುನಾವಣಾ ಉಸ್ತುವಾರಿ ವಹಿಸಿದ್ದ ಕೆವಿ ವೇಣುಗೋಪಾಲ ಮುಂದಾರವರು ರಾಹುಲ್ ಅವರನ್ನು ಸುತ್ತುವರಿದಿದ್ದರು, ಕೆಲವರು ನಿರಂತರವಾಗಿ ಏನು ಹೇಳಬೇಕೆಂದು ಪಿಸುಗುಟ್ಟುತ್ತಲೇ ಇದ್ದರು.
ಮತ್ತೊಬ್ಬ ಟ್ವಿಟ್ಟಿಗರಿಂದ ತಿರುಗೇಟು
ಯಾಕೆ ಬೇರೆ ಯಾವ ನಾಯಕರೂ ತಮ್ಮ ತಂಡದಿಂದ ಮಾಹಿತಿ ಪಡೆಯುವುದಿಲ್ಲವೆ? ಬಹುರಾಷ್ಟ್ರೀಯ ಕಂಪನಿಯ ಮುಖ್ಯಸ್ಥರು ಕೂಡ ಮೀಟಿಂಗ್ ನಲ್ಲಿ ಮಾಹಿತಿ ಪಡೆದುಕೊಳ್ಳುತ್ತಾರೆ ಎಂದು ಒಬ್ಬರು ರಾಹುಲ್ ಅವರನ್ನು ಬೆಂಬಲಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಮತ್ತೊಬ್ಬರು, ಅಲ್ಲಾ ಸ್ವಾಮೀ, ಮೀಟಿಂಗ್ ನಲ್ಲಿ ಸಹೋದ್ಯೋಗಿಗಳಿಂದ ಮಾಹಿತಿ ಪಡೆಯುವುದರಲ್ಲಿ ತಪ್ಪಿಲ್ಲ, ಆದರೆ ಪತ್ರಿಕಾಗೋಷ್ಠಿ ನಡೆಸುತ್ತಿರುವಾಗಲೇ ಅವರಿಂದ ಟಿಪ್ಸ್ ಪಡೆಯುವುದು ಎಷ್ಟು ಸರಿ ಎಂದಿದ್ದಾರೆ. ಯಾವುದು ಸರಿ?