ಮೋದಿ ವಿರುದ್ಧ ರಾಹುಲ್ ಗಾಂಧಿ ಹೇಳಿಕೆಗೆ ಕೆರಳಿದ ಬಿಜೆಪಿ ನಾಯಕರು
ನವದೆಹಲಿ, ಅಕ್ಟೋಬರ್ 09: ಪ್ರಧಾನಿ ಮೋದಿಯವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರು ಕೆರಳಿದ್ದಾರೆ.
ಪವನ ಯಂತ್ರಗಳಿಂದ ವಿದ್ಯುತ್ ಜತೆಗೆ ಶುದ್ಧ ಕುಡಿಯುವ ನೀರು ಹಾಗೂ ಆಮ್ಲಜನಕವನ್ನೂ ತಯಾರಿಸುವಂತಹ ವಿಧಾನಗಳ ಬಗ್ಗೆ ಗಮನಹರಿಸಬಹುದು ಎಂಬ ಪ್ರಧಾನಿ ಹೇಳಿಕೆಗೆ ರಾಹುಲ್ ಗಾಂಧಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು.
ಅಧಿಕಾರದಲ್ಲಿದ್ದಿದ್ದರೆ 15 ನಿಮಿಷದಲ್ಲಿ ಚೀನಾವನ್ನು ಹೊರ ಹಾಕುತ್ತಿದ್ದೆವು: ರಾಹುಲ್ ಗಾಂಧಿ
ರಾಹುಲ್ ಗಾಂಧಿ ಟ್ವೀಟ್ ಮಾಡಿ' ನಮ್ಮ ಪ್ರಧಾನಿಯವರಿಗೆ ಏನೂ ಅರ್ಥವಾಗುತ್ತಿಲ್ಲ ಎಂಬುದೇ ಭಾರತಕ್ಕಿರುವ ನಿಜವಾದ ಅಪಾಯ. ವಿಷಯ ಏನೆಂದರೆ ಅವರಿಗೆ ಸಲಹೆ ನೀಡುವ ಧೈರ್ಯವಿರುವಂಥವರು ಅವರ ಸುತ್ತ ಯಾರೂ ಇಲ್ಲ ಎಂದು ಹೇಳಿದ್ದರು. ಈ ಟ್ವೀಟ್ ಜತೆಗೆ ಪ್ರಧಾನಿ ಮೋದಿ ಪವನ ವಿದ್ಯುತ್ ಉತ್ಪಾದಕ ಕಂಪನಿಯ ಸಿಇಒ ಅವರೊಂದಿಗಿನ ಸಂವಾದದ ವಿಡಿಯೋ ತುಣಕನ್ನು ಕೂಡ ಹಾಕಿದ್ದರು.
ಪವನ ವಿದ್ಯುತ್ ಉತ್ಪಾದನಾ ಕಂಪನಿ ಸಿಇಒ ಅವರೊಂದಿಗೆ ಸಂವಾದದಲ್ಲಿ ಪ್ರಧಾನಿಯವರು, ಪವನ ಯಂತ್ರಗಳಿಂದ ವಿದ್ಯುತ್ ತಯಾರಿಸುವ ಜತೆಗೆ ಶುದ್ಧ ಕುಡಿಯುವ ನೀರು ಮತ್ತು ಆಮ್ಲಜನಕವನ್ನು ತಯಾರಿಸುವಂತಹ ವಿಧಾನಗಳ ಬಗ್ಗೆ ಗಮನಹರಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದು, ರಾಹುಲ್ ಅವರೇ ನಾಳೆ ಬೆಳಗ್ಗೆ ಎದ್ದು ನಾನು ಇಲ್ಲಿ ಲಗತ್ತಿಸಿರುವ ಎರಡು ವೈಜ್ಞಾನಿಕ ಪತ್ರಿಕೆಗಳನ್ನು ದಯವಿಟ್ಟು ಓದಿ..ಬಳಿಕ ನಿಮಗೆ ಖಚಿತವಾದರೂ ಈ ವಿಷಯದ ಸಂಕೀರ್ಣತೆ ಬಗ್ಗೆ ಅರ್ಥವಾಗುವುದಿಲ್ಲ ಎಂದು ಹೇಳಿದ್ದಾರೆ.
ಗಾಳಿ ಯಂತ್ರಗಳು ತೆಳುವಾದ ಗಾಳಿಯಿಂದ ನೀರನ್ನು ಉತ್ಪಾದಿಸುತ್ತವೆ, ಮ್ತತು ಮರುಭೂಮಿಯಲ್ಲಿ ದಿನಕ್ಕೆ 1 ಸಾವಿರ ಲೀಟರ್ ಶುದ್ಧ ನೀರನ್ನು ಉತ್ಪಾದನೆ ಮಾಡಬಹುದೆಂಬ ವರದಿಯ ತುಣುಕುಗಳನ್ನು ಹಾಕಿದ್ದಾರೆ.
ಪಿಯುಷ್ ಗೋಯೆಲ್ ಕೂಡ ಟ್ವೀಟ್ ಮಾಡಿದ್ದು, ರಾಹುಲ್ ಗಾಂಧಿ ಅವರಿಗೆ ಏನೂ ಅರ್ಥವಾಗುವುದಿಲ್ಲ ಎಂದು ಹೇಳುವ ಧೈರ್ಯ ಅವರ ಸುತ್ತಮುತ್ತ ಇರುವವರಲ್ಲಿ ಯಾರಿಗೂ ಇಲ್ಲ ಎಂದು ಟೀಕಿಸಿದ್ದಾರೆ.