ನಿಮ್ಮದು ತುಘ್ಲಿಕಿ ಲಾಕ್ಡೌನ್; ಕೇಂದ್ರ ಸರ್ಕಾರದ ಕಾರ್ಯತಂತ್ರ ಟೀಕಿಸಿದ ರಾಹುಲ್
ನವದೆಹಲಿ, ಏಪ್ರಿಲ್ 16: ದೇಶದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗಿದ್ದು, ಆಸ್ಪತ್ರೆಗಳಲ್ಲಿ ಹಾಸಿಗೆ ಹಾಗೂ ಲಸಿಕೆಗಳ ಕೊರತೆ ಕುರಿತು ಕೇಂದ್ರ ಸರ್ಕಾರವನ್ನು ಟೀಕಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೊರೊನಾ ಪರಿಸ್ಥಿತಿ ನಿರ್ವಹಣೆಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕಾರ್ಯಸೂಚಿ ಟೀಕಿಸಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ಕೊರೊನಾ ನಿಯಂತ್ರಣ ಕಾರ್ಯಸೂಚಿಗಳನ್ನು ಕೇಂದ್ರ ಸರ್ಕಾರ ವೈಜ್ಞಾನಿಕವಾಗಿ ಹಾಗೂ ಸಮಗ್ರವಾಗಿ ರೂಪಿಸುತ್ತಿಲ್ಲ. ಬೇಕಾಬಿಟ್ಟಿ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರವನ್ನುದ್ದೇಶಿಸಿ ಟ್ವೀಟ್ ಮಾಡಿರುವ ಅವರು, "ಮೊದಲ ಹಂತದಲ್ಲಿ ತುಘ್ಲಿಕಿ ಲಾಕ್ಡೌನ್ ಹೇರುವುದು, ಎರಡನೇ ಹಂತದಲ್ಲಿ ಗಂಟೆ ಬಾರಿಸುವುದು, ಮೂರನೇ ಹಂತದಲ್ಲಿ ದೇವರಿಗೆ ಪ್ರಾರ್ಥಿಸಿ ಹಾಡು ಹಾಡುವುದು ಸರ್ಕಾರದ ಕಾರ್ಯತಂತ್ರಗಳಾಗಿವೆ" ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ಕೊರೊನಾ ಲಸಿಕೆ ಇಲ್ಲ, ಹಾಸಿಗೆ ಇಲ್ಲ, ಉತ್ಸವ ನೆಪವಷ್ಟೇ; ರಾಹುಲ್ ಗಾಂಧಿ
ಕಳೆದ ವರ್ಷ ರಾಷ್ಟ್ರಾದ್ಯಂತ ಮೊದಲ ಬಾರಿ ಲಾಕ್ಡೌನ್ ಹೇರಲಾಗಿತ್ತು. ನಂತರ ಗಂಟೆ ಬಾರಿಸುವಂತೆ ಮೋದಿ ಜನರಿಗೆ ಕರೆ ನೀಡಿದ್ದರು. ಇವೆಲ್ಲದರ ಕುರಿತು ಮತ್ತೆ ರಾಹುಲ್ ಗಾಂಧಿ ಅಣಕವಾಡಿದ್ದಾರೆ.
ಈಚೆಗಷ್ಟೆ ಟಿಕಾ ಉತ್ಸವದ ಕುರಿತೂ ರಾಹುಲ್ ಗಾಂಧಿ ಟೀಕಿಸಿದ್ದರು. ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲ, ಆಮ್ಲಜನಕವಿಲ್ಲ. ಆದರೆ ಲಸಿಕೆಯನ್ನು ಉತ್ಸವವೆನ್ನುತ್ತಿದ್ದಾರೆ ಎಂದು ಖಂಡಿಸಿದ್ದರು. ಪ್ರಧಾನಿ ಮೋದಿಗೆ ಪತ್ರ ಬರೆದು, ಲಸಿಕಾ ಕಾರ್ಯಕ್ರಮದ ಹಿನ್ನಡೆ ಬಗ್ಗೆ ಉಲ್ಲೇಖಿಸಿದ್ದರು.