ಬಂಡೀಪುರ ರಾತ್ರಿ ಸಂಚಾರದ ಮೇಲೆ ಮತ್ತೆ ರಾಹುಲ್ ಗಾಂಧಿ ಕಣ್ಣು
ನವದೆಹಲಿ, ಜುಲೈ 27: ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕು ಎನ್ನುವ ಮೂಲಕ ಕಾಂಗ್ರೆಸ್ನ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಇರುವ ರಾತ್ರಿ ಸಂಚಾರದ ಮೇಲಿನ ನಿರ್ಬಂಧವನ್ನು ತೆಗೆದುಹಾಕಲು ಮಧ್ಯಪ್ರವೇಶಿಸುವಂತೆ ಮತ್ತು ಅದಕ್ಕೆ ಪರ್ಯಾಯ ಮಾರ್ಗ ಹುಡುಕುವಂತೆ ಯಾವುದಾದರೂ ಪ್ರಸ್ತಾವಗಳು ಇವೆಯೇ ಎಂದು ಲೋಕಸಭೆಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ರಾಹುಲ್ ಗಾಂಧಿ ಕೇಳಿದ್ದಾರೆ.
'ರಾಷ್ಟ್ರೀಯ ಉದ್ಯಾನದ ಮೂಲಕ ಎನ್ಎಚ್-212ನಲ್ಲಿ ರಾತ್ರಿ ಸಂಚಾರಕ್ಕೆ ನಿಷೇಧ ಇರುವುದರಿಂದ ಉತ್ತರ ಮಲಬಾರ್ನಲ್ಲಿ ವಾಸಿಸುತ್ತಿರುವ ಬಹುದೊಡ್ಡ ಸಂಖ್ಯೆಯ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ' ಎಂದು ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಪ್ರಶ್ನೆ ಮುಂದಿಟ್ಟಿದ್ದರು.
ವನ್ಯಜೀವಿಗಳಿಗೆ ತೊಂದರೆಯಾಗದಂತೆ ನಿಷೇಧವನ್ನು ತೆರವುಗೊಳಿಸಲು ಪರ್ಯಾಯ ಮಾರ್ಗ ಹುಡುಕಲು ಮತ್ತು ಕೇರಳ ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳ ಸಭೆ ಕರೆದು ಮಧ್ಯಸ್ಥಿಕೆ ವಹಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಉದ್ಯಾನದಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣದ ಪ್ರಸ್ತಾಪದ ಕುರಿತೂ ಮಾಹಿತಿ ಕೇಳಿದ್ದಾರೆ. ಕೇರಳದ ವಯನಾಡಿನ ಸಂಸದರಾಗಿರುವ ರಾಹುಲ್ ಗಾಂಧಿ ಅವರು, ಲೋಕಸಭೆ ಚುನಾವಣೆಯ ಪ್ರಚಾರದ ವೇಳೆಯೂ ಈ ವಿಚಾರವನ್ನು ಪ್ರಸ್ತಾಪಿಸಿದ್ದರು.
ಬಂಡೀಪುರ: ಮನುಷ್ಯರ ತೆವಲಿಗೆ ವನ್ಯಪ್ರಾಣಿಗಳು ಬಲಿಯಾಗಬೇಕೇ?
ರಾಹುಲ್ ಗಾಂಧಿ ಅವರ ಪ್ರಸ್ತಾಪಕ್ಕೆ ಪರಿಸರಪ್ರೇಮಿಗಳು ವ್ಯಾಪಕ ಖಂಡನೆ ವ್ಯಕ್ತಪಡಿಸಿದ್ದಾರೆ. ಪ್ರಾಣಿಗಳನ್ನು ಬಲಿಕೊಡುವ ಈ ಪ್ರಸ್ತಾಪದ ಬಗ್ಗೆ ನಿಮಗೆ ಅರಿವಿದೆಯೇ? ರಾಜಕೀಯ ಕಾರಣಕ್ಕೆ ವನ್ಯಜೀವಿಗಳನ್ನು ಸಾಯಿಸಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿರ್ಬಂಧ ಸಡಿಲಿಕೆ ಸಾಧ್ಯವಿಲ್ಲ ಎಂದ ಗಡ್ಕರಿ
ಇದಕ್ಕೆ ಗುರುವಾರ ಪ್ರತಿಕ್ರಿಯೆ ನೀಡಿರುವ ನಿತಿನ್ ಗಡ್ಕರಿ, 'ಬಂಡೀಪುರ ರಾಷ್ಟ್ರೀಯ ಉದ್ಯಾನವು ದಟ್ಟ ವನ್ಯಜೀವಿ ಆವಾಸದ ಸ್ಥಳವಾಗಿರುವುದರಿಂದ ರಾತ್ರಿ ಸಂಚಾರದ ನಿರ್ಬಂಧದ ವಿಚಾರದಲ್ಲಿ ಯಥಾಸ್ಥಿತಿ ಮುಂದುವರಿಸುವಂತೆ ಶಿಫಾರಸು ಮಾಡಲಾಗಿದೆ. ರಾತ್ರಿ ಸಂಚಾರಕ್ಕೆ ಪರ್ಯಾಯ ಮಾರ್ಗವೂ ಇದೆ. ನಾಲ್ಕು ಬಸ್ಗಳು ಮತ್ತು ತುರ್ತು ವಾಹನಗಳು ಉದ್ಯಾನದ ಮೂಲಕ ಹೋಗಲು ರಾತ್ರಿ ಅವಕಾಶ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರಾತ್ರಿ ವೇಳೆ ವಾಹನ ಸಂಚಾರದಿಂದ ವನ್ಯಜೀವಿಗಳಿಗೆ ತೊಂದರೆಯಾಗುವುದನ್ನು ತಪ್ಪಿಸಲು ನಿಷೇಧವನ್ನು ಮುಂದುವರಿಸುವಂತೆ ಕೇಂದ್ರ ಸಂಪುಟ ಕಾರ್ಯದರ್ಶಿಗಳ ನೇತೃತ್ವದಲ್ಲಿ ಎರಡೂ ರಾಜ್ಯಗಳ ಹಿರಿಯ ಅಧಿಕಾರಿಗಳು ಹಾಜರಾಗಿದ್ದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಬಂಡೀಪುರ ಅರಣ್ಯದಲ್ಲಿ ಎಲಿವೇಟೆಡ್ ರಸ್ತೆ ವಿರೋಧಿಸಿ ಪರಿಸರವಾದಿಗಳ ಹೋರಾಟ
ಒತ್ತಡಕ್ಕೆ ಮಣಿಯದ ಕರ್ನಾಟಕ
ಕೇರಳ ಮತ್ತು ಕರ್ನಾಟಕದ ನಡುವೆ ಸಂಪರ್ಕ ಕಲ್ಪಿಸುವ ಬಂಡೀಪುರದ ಮೂಲಕ ರಾತ್ರಿ ವೇಳೆ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸುವ ವಿಚಾರ ಈಗಾಗಲೇ ಹಲವು ಬಾರಿ ವಿವಾದ ಸೃಷ್ಟಿಸಿದೆ. ರಾತ್ರಿ ಸಂಚಾರಕ್ಕೆ ಮುಕ್ತ ಅವಕಾಶ ಕೊಡಬೇಕು ಎಂದು ಕೇರಳ ಒತ್ತಾಯಿಸುತ್ತಿದ್ದರೆ, ವನ್ಯಜೀವಿಗಳ ಸುರಕ್ಷತೆಯ ಕಾರಣದಿಂದ ಅದು ಸಾಧ್ಯವೇ ಇಲ್ಲ ಎಂದು ಕರ್ನಾಟಕ ಖಡಾಖಂಡಿತವಾಗಿ ನಿರಾಕರಿಸುತ್ತಿದೆ.
ಕರ್ನಾಟಕ ಸರ್ಕಾರ ಕೇರಳದ ಮನವಿಯನ್ನು ತಿರಸ್ಕರಿಸುತ್ತಿದೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಈ ವಿಚಾರ ತೀವ್ರ ಚರ್ಚೆಗೆ ಬಂದಿತ್ತು. ಆಗಲೂ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಇಲ್ಲಿ ಎಲಿವೇಟೆಡ್ ರಸ್ತೆ ನಿರ್ಮಾಣ ಮತ್ತು ರಾತ್ರಿ ಸಂಚಾರಕ್ಕೆ ಅವಕಾಶ ನೀಡುವ ಪ್ರಸ್ತಾಪಗಳನ್ನು ತಳ್ಳಿಹಾಕಿದ್ದರು.
ರಾತ್ರಿ ಸಂಚಾರಕ್ಕೆ ಕೇರಳದ ಲಾಬಿ
ರಾತ್ರಿ ಸಂಚಾರಕ್ಕೆ ಅವಕಾಶ ನೀಡುವುದರಿಂದ ಕೇರಳಕ್ಕೆ ಸಾಕಷ್ಟು ಅನುಕೂಲವಾಗಲಿದೆ. ಹೀಗಾಗಿ ರಾಷ್ಟ್ರಮಟ್ಟದಲ್ಲಿ ದೊಡ್ಡ ಲಾಬಿ ನಡೆಸುತ್ತಿದೆ. ಆದರೆ, ರಾತ್ರಿ ವೇಳೆ ಪ್ರಾಣಿಗಳ ಓಡಾಟ ಹೆಚ್ಚಾಗಿರುವುದರಿಂದ ವಾಹನ ಸಂಚಾರಕ್ಕೆ ಅವಕಾಶ ಕೊಟ್ಟರೆ ಅಪಾಯ ಎದುರಾಗಲಿದೆ. ಪ್ರಾಣಿಗಳು ವಾಹನಗಳಿಗೆ ಸಿಕ್ಕಿ ಸಾಯುವ ಘಟನೆಗಳು ಹೆಚ್ಚಲಿವೆ. ಪ್ರಾಣಿಗಳು ವಾಹನಗಳ ಮೇಲೆ ದಾಳಿಯನ್ನೂ ನಡೆಸಬಹುದು.ಅಲ್ಲದೆ, ಇದು ಅರಣ್ಯಕಳ್ಳರಿಗೆ ಬಾಗಿಲು ತೆರೆದು ದೋಚಿ ಎಂದು ಮುಕ್ತ ಅವಕಾಶ ನೀಡಿದಂತೆ ಆಗುತ್ತದೆ. ಈ ಎಲ್ಲ ಕಾರಣಗಳಿಂದ ಕರ್ನಾಟಕವು ಈ ಪ್ರಸ್ತಾಪಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದೆ.
'ಬಂಡೀಪುರ ಅರಣ್ಯದಲ್ಲಿ ಫ್ಲೈ ಓವರ್ ನಿರ್ಮಿಸಲ್ಲ, ರಾತ್ರಿ ಸಂಚಾರವೂ ಇಲ್ಲ'
2009ರಿಂದ ಸಂಚಾರ ನಿರ್ಬಂಧ
2009ರಲ್ಲಿ ಚಾಮರಾಜನಗರ ಜಿಲ್ಲಾಡಳಿತವು ಈ ಮಾರ್ಗದಲ್ಲಿನ ರಾತ್ರಿ ಸಂಚಾರಕ್ಕೆ ನಿಷೇಧ ಹೇರಿತ್ತು. ಇದನ್ನು 2010ರಲ್ಲಿ ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿತ್ತು. ಕೇರಳ ಸಾರಿಗೆ ಇಲಾಖೆ ಸುಪ್ರೀಂಕೋರ್ಟ್ಗೆ ವಿಶೇಷ ಅರ್ಜಿ ಸಲ್ಲಿಸಿತ್ತು. ಇದರ ಆಧಾರದಲ್ಲಿ ಈ ವಿವಾದ ಬಗೆಹರಿಸಲು ಪರಿಣತರ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿ ಫೆಬ್ರವರಿಯಲ್ಲಿ ಸಭೆ ನಡೆಸಿತ್ತು.