ನಾನು ಪ್ರತಿದಿನ ಬಿಜೆಪಿ ವಿರುದ್ಧ ಹೋರಾಡುತ್ತೇನೆ : ರಾಹುಲ್ ಗಾಂಧಿ
ನವದೆಹಲಿ, ಜೂನ್ 01 : "ನಾವು ಈಗಲೇ 52 ಸಂಸದರಿದ್ದೇವೆ. ಮೊದಲು ನಾವು ಯಾರೆಂದು ಅರಿತುಕೊಳ್ಳಬೇಕು. ನಾವು ಪ್ರತಿ ಭಾರತೀಯರಿಗಾಗಿ ಹೋರಾಟ ನಡೆಸಿದ್ದೇವೆ. ದ್ವೇಷ, ಹೇಡಿತನ ಮತ್ತು ಕೋಪ ನಮ್ಮ ವಿರುದ್ಧ ಹೋರಾಟ ನಡೆಸಿವೆ. ನಾವು ಅವರಿಗಿಂತಲೂ ಹೆಚ್ಚು ಉಗ್ರರಾಗಿರಬೇಕು" ಎಂದು ರಾಹುಲ್ ಗಾಂಧಿ ಅವರು ಪಕ್ಷದ ನಾಯಕರನ್ನು ಬಡಿದೆಬ್ಬಿಸಲು ಯತ್ನಿಸಿದ್ದಾರೆ.
ಶನಿವಾರ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಪ್ರತಿದಿನ ಭಾರತೀಯ ಜನತಾ ಪಕ್ಷದ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಅಬ್ಬರಿಸಿದ್ದಾರೆ. ಇಂದು ಕೂಡ ಅವರು, ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ಆಗ್ರಹಿಸಲಾಯಿತು, ಆದರೆ ಅವರು ಈಗಲೂ ರಾಜೀನಾಮೆಯ ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ.
ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಆಯ್ಕೆ
ಸಂಸತ್ತಿನಲ್ಲಿ ನಾವು 52 ಸಂಸದರು ಮಾತ್ರವಿರಬಹುದು. ಆದರೆ, ಸಂವಿಧಾನವನ್ನು ಮತ್ತು ಸಂಸ್ಥಗಳನ್ನು ಸಂರಕ್ಷಿಸಲು ನಾವೆಲ್ಲ ಒಟ್ಟಿಗೆ ಕೆಲಸ ಮಾಡಲಿದ್ದೇವೆ ಮತ್ತು ವಿರೋಧ ಪಕ್ಷವಾಗಿ ನಮ್ಮ ಕರ್ತವ್ಯ ನಿರ್ವಹಿಸಲಿದ್ದೇವೆ. ಸಂಸತ್ತಿನಲ್ಲಿ ಬಿಜೆಪಿಯ ಕೆಲಸ ಅಷ್ಟು ಸುಲಭದ್ದಾಗಿರುವುದಿಲ್ಲ ಎಂದು ರಾಹುಲ್ ಗಾಂಧಿ ಅವರು ಎಚ್ಚರಿಕೆ ನೀಡಿದ್ದಾರೆ.
The Congress Party may have just 52 Lok Sabha members, but we will work together like a pride of brave hearted lions to protect our Constitution & Institutions & to fearlessly do our duty as the leading Opposition party. The BJP will have no walkover in Parliament. pic.twitter.com/Rx8aUZcqn3
— Rahul Gandhi (@RahulGandhi) June 1, 2019
ಈ ಸಭೆಯಲ್ಲಿ 72 ವರ್ಷದ ನಾಯಕಿ, ರಾಯ್ ಬರೇಲಿ ಸಂಸದೆ ಸೋನಿಯಾ ಗಾಂಧಿ ಅವರನ್ನು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿಯನ್ನಾಗಿ ಆಯ್ಕೆ ಮಾಡಲಾಯಿತು. ಈ ಜವಾಬ್ದಾರಿಯನ್ನು 48 ವರ್ಷದ ರಾಹುಲ್ ಗಾಂಧಿ ಅವರಿಗೆ ಹೊರುವಂತೆ ಕೋರಲಾಗಿತ್ತು. ಆದರೆ, ಅವರು ಇದನ್ನೂ ತಿರಸ್ಕರಿಸಿದ್ದರು. ಈ ಕಾರಣದಿಂದಾಗಿ ಸೋನಿಯಾ ಗಾಂಧಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಜವಾಬ್ದಾರಿಯನ್ನು ಹಿಂದಿನ ಲೋಕಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಹೊತ್ತಿದ್ದರು.
ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರು ಯಾರಾಗಬೇಕು ಎಂಬ ಬಗ್ಗೆ ಕಾಂಗ್ರೆಸ್ಸಿನಲ್ಲಿ ಚರ್ಚೆ ನಡೆದಿತ್ತು. ರಾಹುಲ್ ಗಾಂಧಿ ಅವರು ಇದಕ್ಕೂ ತಲೆ ಅಲ್ಲಾಡಿಸದಿದ್ದ ಕಾರಣ ಸೋನಿಯಾ ಗಾಂಧಿ ಅವರನ್ನೇ ಅನ್ಯಮಾರ್ಗವಿಲ್ಲದೆ ನಾಯಕಿಯನ್ನಾಗಿ ಮಾಡಬೇಕಾಯಿತು. ಆದರೆ, ಇದು ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯುವ ಸೂಚನೆಯೆ, ಅವರು ನಿರ್ಧಾರ ಬದಲಿಸಲಿದ್ದಾರಾ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಮೈತ್ರಿ ಸರ್ಕಾರ ಕುರಿತು ರಾಹುಲ್ಗೆ ವರದಿ ಒಪ್ಪಿಸಿದ ಎಚ್ಡಿಕೆ
ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿದ್ದಾರೆ ಪಕ್ಷವನ್ನು ಅತ್ಯಂತ ಸಮರ್ಥವಾಗಿ ಲೋಕಸಭೆಯಲ್ಲಿ ಮುನ್ನಡೆಸಿದ್ದರು. ಆದರೆ, ಸೋಲಿಲ್ಲದ ಸರದಾರ ಎಂದೇ ಖ್ಯಾತರಾಗಿದ್ದ ಅವರು ಈ ಬಾರಿ ಬಿಜೆಪಿಯ ವಲಸೆಹಕ್ಕಿ ಡಾ. ಉಮೇಶ್ ಜಾಧವ್ ವಿರುದ್ಧ ಅವಮಾನಕರ ಸೋಲು ಕಂಡಿದ್ದಾರೆ. ಹೀಗಾಗಿ, ಅವರ ಸ್ಥಾನ ತುಂಬಬಲ್ಲ ತಾಕತ್ತು ಇರುವವರೇ ಲೋಕಸಭೆಯಲ್ಲಿ ನಾಯಕರಾಗಬೇಕಿತ್ತು.
ಒಬಿಸಿ/SC/ST ನಾಯಕರನ್ನು ಪಕ್ಷಾಧ್ಯಕ್ಷರನ್ನಾಗಿ ಮಾಡಿ: ರಾಹುಲ್ ಸಲಹೆ
ಉತ್ತರ ಪ್ರದೇಶದಲ್ಲಿ ಸೋನಿಯಾ ಗಾಂಧಿ ಅವರನ್ನು ಹೊರತುಪಡಿಸಿದರೆ ಎಲ್ಲ ಕಾಂಗ್ರೆಸ್ಸಿಗರು ಸೋತಿದ್ದಾರೆ. ಅಮೇಥಿಯಲ್ಲಿ ಸ್ವತಃ ರಾಹುಲ್ ಗಾಂಧಿ ಅವರು ಕೂಡ ಸ್ಮೃತಿ ಇರಾನಿ ವಿರುದ್ಧ ಸೋಲುಂಡಿದ್ದಾರೆ. ಇನ್ನು, ಮಧ್ಯ ಪ್ರದೇಶದಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ, ದಿಗ್ವಿಜಯ್ ಸಿಂಗ್ ಮುಂದಾದವರು ಕೂಡ ಮಣ್ಣುಮುಕ್ಕಿದ್ದಾರೆ. ಹೀಗಾಗಿ, ಕಾಂಗ್ರೆಸ್ 52 ಕ್ಷೇತ್ರಗಳಲ್ಲಿ ಗೆದ್ದಿದ್ದರೂ, ಲೋಕಸಭೆಯಲ್ಲಿ ತುಸು ಬಡವಾಗಿದೆ.