ಬಡವರ ಬ್ಯಾಂಕ್ ಖಾತೆಗೆ ತಿಂಗಳಿಗೆ 6000 ರೂ.: ರಾಹುಲ್ ಭರವಸೆ
Recommended Video
ನವದೆಹಲಿ, ಮಾರ್ಚ್ 25: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್ಥಿಕವಾಗಿ ಹಿಂದುಳಿದ ಶೇ.20 ರಷ್ಟು ಬಡ ಕುಟುಂಬಕ್ಕೆ ತಿಂಗಳಿಗೆ 6000 ರೂ. ಸಹಾಯಧನ ನೀಡುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಕನಿಷ್ಠ ಆದಾಯ ಖಾತ್ರಿ ಯೋಜನೆಯಡಿಯಲ್ಲಿ ಭಾರತದ ಶೇ.20 ರಷ್ಟು ಅತೀ ಬಡಕುಟುಂಬದ ಫಲಾನುಭವಿಗಳಿಗೆ ವರ್ಷಕ್ಕೆ 72,000 ರೂ. ನೀಡುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದರು.
ಫಲಾನುಭವಿ ಬಡವರ ಖಾತೆಗೆ ನೇರವಾಗಿ ಹಣ ಸಂದಾಯವಾಗಲಿದ್ದು, ಇದು 25 ಕೋಟಿಗೂ ಅಧಿಕ ಜನರನ್ನು ಬಡತನದಿಂದ ಮೇಲಕ್ಕೆತ್ತಲಿದೆ ಎಂದು ಗಾಂಧಿ ಹೇಳಿದರು.
'ಉದ್ಯೋಗ ಖಾತ್ರಿ ಯೋಜನೆಯಲ್ಲೂ ನಾವು ಯಶಸ್ವಿಯಾದೆವು, ಹಾಗೆಯೇ ಕನಿಷ್ಠ ಆದಾಯ ಖಾತ್ರಿ ಯೋಜನೆಯಲ್ಲೂ ನಾವು ಯಶಸ್ವಿಯಾಗುತ್ತೇವೆ. ಪ್ರತಿ ಬಡವರಿಗೂ ನ್ಯಾಯ ಒದಗಿಸುವುದು ನಮ್ಮ ಉದ್ದೇಶ' ಎಂದು ರಾಹುಲ್ ಗಾಂಧಿ ಹೇಳಿದರು.
ಮೊದಲ ಹಂತದ ಮತದಾನಕ್ಕೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ನಾಳೆ(ಮಾರ್ಚ್ 26) ಕೊನೆಯ ದಿನವಾಗಿದ್ದು, ಅದಕ್ಕೂ ಒಂದು ದಿನ ಮೊದಲು ರಾಹುಲ್ ಗಾಂಧಿ ಅವರು ದೆಹಲಿಯಲ್ಲಿ ಈ ಮಹತ್ವದ ಘೋಷಣೆ ಮಾಡಿದ್ದಾರೆ.
ಈ ಘೋಷಣೆಯ ನಂತರ ಪತ್ರಕರ್ತರ ಬಳಿ, 'ನಿಮಗೆ ಶಾಕ್ ಆಗಿರಬೇಕಲ್ವಾ?' ಎಂದು ರಾಹುಲ್ ಗಾಂಧಿ ಕೇಳಿ, ನಕ್ಕಿದ್ದು ವಿಶೇಷವಾಗಿತ್ತು.
ಲೋಕಸಭಾ ಚುನಾವಣೆಗೆ ಏಪ್ರಿಲ್ 11 ರಿಂದ ಮೇ.19ರವರೆಗೆ 7 ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ.23 ರಂದು ಫಲಿತಾಂಶ ಹೊರಬೀಳಲಿದೆ.