ಕೊರೊನಾ ನಿರ್ವಹಣೆ ಕುರಿತು ಶ್ವೇತಪತ್ರ ಹೊರಡಿಸಿದ ರಾಹುಲ್ ಗಾಂಧಿ
ನವದೆಹಲಿ, ಜೂನ್ 22: ಕೇಂದ್ರ ಸರ್ಕಾರದ ಕೊರೊನಾ ನಿರ್ವಹಣೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶ್ವೇತಪತ್ರ ಹೊರಡಿಸಿದ್ದಾರೆ.
ದೆಹಲಿಯಲ್ಲಿ ನಡೆದ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಕೋವಿಡ್ ನಿರ್ವಹಣೆಯ ಕುರಿತು ಶ್ವೇತಪತ್ರ ವನ್ನು ಬಿಡುಗಡೆ ಮಾಡಿದರು. ಕೇಂದ್ರ ಸರ್ಕಾರದ ನಿರ್ವಹಣೆಯನ್ನು ಘೋರವಾದ ಮತ್ತು ಹಾನಿಕಾರ ಎಂದು ಶ್ವೇತ ಪತ್ರದಲ್ಲಿ ಅಭಿಪ್ರಾಯಪಡಲಾಗಿದ್ದು, ಕನಿಷ್ಟ ಪಕ್ಷ ಈಗ ಮೂರನೇ ಅಲೆಗೆ ಸಿದ್ಧತೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಕೋವಿಡ್ ನಿರ್ವಹಣೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶ್ವೇತಪತ್ರ ಹೊರಡಿಸಿದ್ದು, ಘೋರ ಮತ್ತು ಹಾನಿಕಾರಕ ಎಂದು ಹೇಳಿದ್ದಾರೆ.
ಕೋವಿಡ್ ನಿರ್ವಹಣೆಯಲ್ಲಿ ಏನು ತಪ್ಪಾಗಿದೆ ಎಂಬುದರ ಕುರಿತು ಸರ್ಕಾರಕ್ಕೆ ಮಾಹಿತಿ ಮತ್ತು ಒಳನೋಟಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದ ರಾಹುಲ್ ಗಾಂಧಿ, 'ಈ ಶ್ವೇತಪತ್ರದ ಗುರಿ ಸರ್ಕಾರದತ್ತ ಬೆರಳು ತೋರಿಸುವುದಲ್ಲ, ಆದರೆ ರಾಷ್ಟ್ರದ ಮೂರನೇ ಅಲೆಗೆ ಸಿದ್ಧವಾಗಲು ಸಹಾಯ ಮಾಡುವುದು ಎಂದರು.
ಇದೇ ವೇಳೆ ಕೋವಿಡ್ ವಿರುದ್ಧ ಹೋರಾಟದಲ್ಲಿ ನಮ್ಮ ಬಳಿ ಇರುವ ಏಕೈಕ ಪ್ರಮುಖ ಅಸ್ತ್ರ ಎಂದರೆ ಅದು ಕೋವಿಡ್ ಲಸಿಕೆ ಎಂದು ಪ್ರತಿಪಾದಿಸಿದ ರಾಹುಲ್ ಗಾಂಧಿ, ನಾವು ಸಾಧ್ಯವಾದಷ್ಟು ಬೇಗ ಶೇಕಡಾ 100 ರಷ್ಟು ವ್ಯಾಕ್ಸಿನೇಷನ್ ಪೂರೈಸಬೇಕು.
ಕೋವಿಡ್-19 ವ್ಯಾಕ್ಸಿನೇಷನ್ ಕಾರ್ಯಕ್ರಮಗಳಿಗೆ ಎಲ್ಲ ರಾಜ್ಯಗಳನ್ನು ಸಮಾನವಾಗಿ ಪರಿಗಣಿಸಬೇಕು, ಯಾವುದೇ ಪಕ್ಷಪಾತ ಇರಬಾರದು ಮತ್ತು ಅವುಗಳನ್ನು ಬಿಜೆಪಿ ಅಥವಾ ವಿರೋಧ ರಾಜ್ಯಗಳಾಗಿ ನೋಡಬಾರದು ಎಂದು ಸಲಹೆ ನೀಡಿದರು.
ದೇಶದಲ್ಲಿ ಮೊದಲ ಮತ್ತು ಎರಡನೆಯ ಅಲೆಯ ನಿರ್ವಹಣೆ 'ವಿನಾಶಕಾರಿ' ಅಥವಾ ಹಾನಿಕಾರಕ ಎಂಬುದು ಸ್ಪಷ್ಟವಾಗಿದೆ. ಇದು ಏಕೆ ವಿನಾಶಕಾರಿಯಾಗಿದೆ ಎಂಬುದಕ್ಕೆ ಕೆಲವು ಕಾರಣಗಳಿವೆ, ನಾವು ಆ ಕಾರಣಗಳನ್ನು ನಮ್ಮ ಶ್ವೇತಪತ್ರದಲ್ಲಿ ತೋರಿಸಲು ಪ್ರಯತ್ನಿಸಿದ್ದೇವೆ. ಮುಂದೆ ಬರಲಿರುವ ಮೂರನೇ ಅಲೆಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಬಗ್ಗೆ ನೀಲನಕ್ಷೆಯಾಗಿದೆ ಎಂದು ಹೇಳಿದರು.