ಹರಕೆ ತೀರಿಸಲು ಮಾನಸ ಸರೋವರ ಯಾತ್ರೆ ಹೊರಟ 'ಶಿವಭಕ್ತ' ರಾಹುಲ್ ಗಾಂಧಿ
ನವದೆಹಲಿ, ಅಗಸ್ಟ್ 29: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇದೇ ತಿಂಗಳ 31ನೇ ತಾರೀಕು ಕೈಲಾಸ ಮಾನಸರೋವರ ಯಾತ್ರೆ ಮಾಡಲಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದ ತಕ್ಷಣವೇ ಯಾತ್ರೆಗೆ ಹೋಗಿಬರುವುದಾಗಿ ಅವರು ಘೋಷಿಸಿದ್ದರು.
ಕೇರಳದಲ್ಲಿ ಆಗುತ್ತಿರುವ ಪ್ರವಾಹ ಪುನರ್ವಸತಿ ಕಾರ್ಯಗಳನ್ನು ವೀಕ್ಷಿಸಲು ಎರಡು ದಿನಗಳ ಕಾಲ ತೆರಳಿದ್ದ ರಾಹುಲ್ ಗಾಂಧಿ ಅವರು ದೆಹಲಿಗೆ ಬುಧವಾರ ಸಂಜೆ ವಾಪಸ್ ಆಗಲಿದ್ದಾರೆ. ಆ ನಂತರ ಚೀನಾ ಮಾರ್ಗದಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳಲಿದ್ದಾರೆ.
ನವಭಾರತಕ್ಕೆ ಸ್ವಾಗತ... ರಾಹುಲ್ ಗಾಂಧಿ ವ್ಯಂಗ್ಯಭರಿತ ಟ್ವೀಟ್!
ಕಳೆದ ಏಪ್ರಿಲ್ ನಲ್ಲಿ ಕರ್ನಾಟಕಕ್ಕೆ ಚುನಾವಣೆ ಪ್ರಚಾರಕ್ಕೆ ತೆರಳಿದ್ದ ವೇಳೆ ರಾಹುಲ್ ಗಾಂಧಿ ಮಾನಸ ಸರೋವರ ಯಾತ್ರೆಯ ನಿರ್ಧಾರ ಮಾಡಿದ್ದರು. ಈ ನಿರ್ಧಾರವನ್ನು ಹರಕೆ ಅಂತಲೇ ಪರಿಗಣಿಸಬಹುದು. ಏಕೆಂದರೆ, ದೆಹಲಿಯಿಂದ ಕರ್ನಾಟಕಕ್ಕೆ ಅವರು ಪ್ರಯಾಣ ಮಾಡಿದ್ದ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು, ಸ್ವಲ್ಪದರಲ್ಲೇ ಭಾರೀ ಅನಾಹುತದಿಂದ ರಾಹುಲ್ ಪಾರಾಗಿದ್ದರು.
ಆ ನಂತರ ಕೈಲಾಸ ಮಾನಸ ಸರೋವರ ಯಾತ್ರೆಯ ನಿರ್ಧಾರ ಮಾಡಿದ್ದರು. ತಮ್ಮ ಬಿಡುವಿಲ್ಲದ ಕೆಲಸದಿಂದಾಗಿ ಯಾತ್ರೆ ಮಾಡಲು ಈ ವರೆಗೆ ಸಾಧ್ಯವಾಗಿರಲಿಲ್ಲ. ಕಳೆದ ವಾರವಷ್ಟೇ ಅವರು ಜರ್ಮನಿ ಹಾಗೂ ಲಂಡನ್ ಗೆ ಹೋಗಿಬಂದರು.
ತಮ್ಮನ್ನು 'ಶಿವ ಭಕ್ತ' ಎಂದು ರಾಹುಲ್ ಗಾಂಧಿ ಕರೆದುಕೊಳ್ಳುತ್ತಾರೆ. ಮುಂಬರುವ ಸಾಲುಸಾಲು ವಿಧಾನಸಭೆ ಚುನಾವಣೆಗಳು ಹಾಗೂ ಲೋಕಸಭಾ ಚುನಾವಣೆಗೆ ಮುನ್ನ ರಾಹುಲ್ ಗಾಂಧಿ ಕೈಲಾಸ ಮಾನಸ ಸರೋವರ ಯಾತ್ರೆಗೆ ಹೋಗಿಬರಲು ಬಯಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
RSS ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ, ಸೀತಾರಾಮ್ ಯಚೂರಿಗೆ ಆಹ್ವಾನ?
ಪ್ರತಿ ವರ್ಷ ಸಾವಿರಾರು ಮಂದಿ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳುತ್ತಾರೆ. ಯಾತ್ರೆಗೆ ತೆರಳುವ ಅವಕಾಶ ಸೆಪ್ಟೆಂಬರ್ 8ಕ್ಕೆ ಕೊನೆಗೊಳ್ಳುತ್ತದೆ.