ಪ್ರಿಯಾಂಕಾ ಗಾಂಧಿಯನ್ನು ವಶಕ್ಕೆ ಪಡೆದಿದ್ದು ಅಕ್ರಮ: ರಾಹುಲ್ ಕಿಡಿ
ನವದೆಹಲಿ, ಜುಲೈ 19: ಭೂವಿವಾದದ ಕಲಹದಲ್ಲಿ ಮೃತರಾದವ ಕುಟುಂಸ್ಥರಿಗೆ ಸಾಂತ್ವನ ಹೇಳಲು ತೆರಳಿದ್ದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ತಡೆದ ಉತ್ತರ ಪ್ರದೇಶ ಸರ್ಕಾರವನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ.
"ಸೋನ್ ಭದ್ರ ದಲ್ಲಿ ಪ್ರಿಯಾಂಕಾ ಅವರನ್ನು ಅಕ್ರಮವಾಗಿ ಬಂಧಿಸಿರುವುದು ಖೇದಕರ. ಭೂವಿವಾದದಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟ ಆದಿವಾಸಿಗಳ ಕುಟುಂಬಸ್ಥರನ್ನು ಭೇಟಿ ಮಾಡಲು ತೆರಳಿದ ಅವರನ್ನು ತಡೆದ ಈ ನಡೆ ಬಿಜೆಪಿ ಸರ್ಕಾರಕ್ಕೆ ಉತ್ತರ ಪ್ರದೇಶದಲ್ಲಿ ಅಭದ್ರತೆ ಕಾಡುತ್ತಿರುವುದಕ್ಕೆ ಸಾಕ್ಷಿ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಸಹೋದರ ರಾಹುಲ್ ಗಾಂಧಿ ಟ್ವೀಟ್ ಮಾಡಿ, ತಂಗಿಯ ಬೆಂಬಲಕ್ಕೆ ನಿಂತಿದ್ದಾರೆ.
ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿಯನ್ನು ಮಾರ್ಗ ಮಧ್ಯೆ ತಡೆದ ಅಧಿಕಾರಿಗಳು
ಭೂವಿವಾದಕ್ಕೆ ಸಂಬಂಧಿಸಿದಂತೆ ಹಳ್ಳಿಯ ಮುಖಂಡ ಮತ್ತು ಹಳ್ಳಿಯ ಇತರ ಜನರ ನಡುವೆ ನಡೆದ ಕಲಹದಲ್ಲಿ, ಮುಖಂಡನ ಬೆಂಬಲಿಗರು ಗುಂಡು ಹಾರಿಸಿದ ಪರಿಣಾಮ ಹತ್ತು ಜನ ಹಳ್ಳಿಗರು ಮೃತರಾಗಿದ್ದರು.
ಸಂತ್ರಸ್ತರ ಕುಟುಂಸ್ಥರನ್ನು ಭೇಟಿಯಾಗಿ, ಸಾಂತ್ವನ ಹೇಳಲು ಪ್ರಿಯಾಂಕಾ ಗಾಂಧಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿಬಿಜೆಪಿ ಸರ್ಕಾರವನ್ನು ತೆಗಳಿ, ಘಟನೆ ನಡೆದ ಸ್ಥಳದಿಂದ ಕದಲಲು ನಿರಾಕರಿಸಿದ ಪ್ರಿಯಾಂಕಾ ಗಾಂಧಿ ಅವರನ್ನು ಸರ್ಕಾರಿ ವಾಹನದಲ್ಲಿ ಕೂರಿಸಿಕೊಂಡು ಗೆಸ್ಟ್ ಹೌಸ್ ವೊಂದಕ್ಕೆ ಕರೆದೊಯ್ದು ಇರಿಸಲಾಯಿತು.
ಆದರೆ ಅವರನ್ನು ಬಂಧಿಸಲಾಗಿಲ್ಲ ಎಂದು ಉತ್ತರ ಪ್ರದೇಶದ ಪೊಲೀಸ್ ವರಿಷ್ಠರು ತಿಳಿಸಿದ್ದಾರೆ.