'ನನ್ನ ಫೋನ್ ಕೂಡ ಟ್ಯಾಪ್ ಆಗಿದೆ, ಇದು ಜನರ ದನಿಯ ಮೇಲಿನ ದಾಳಿ': ರಾಹುಲ್
ನವದೆಹಲಿ, ಜು.23: ಪೆಗಾಸಸ್ ಬೇಹುಗಾರಿಕೆ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶುಕ್ರವಾರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ''ನನ್ನ ಫೋನ್ ಕೂಡಾ ಟ್ಯಾಪ್ ಮಾಡಲಾಗಿದೆ. ಆದರೆ ಇದು ರಾಹುಲ್ ಗಾಂಧಿಯ ಗೌಪ್ಯತೆಯ ವಿಷಯವಲ್ಲ. ಇದು ಜನರ ದನಿಗಳ ಮೇಲಿನ ದಾಳಿ,'' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ರಾಹುಲ್, ''ನನ್ನ ಮೊಬೈಲ್ ಕೂಡಾ ಪೆಗಾಸಸ್ನ ಬೇಹುಗಾರಿಕೆಗೆ ಒಳಗಾಗಿದೆ. ನನ್ನ ಮೊಬೈಲ್ ಟ್ಯಾಪ್ ಮಾಡಲಾಗಿದೆ. ಈ ಪೆಗಾಸಸ್ ಹಗರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು,'' ಎಂದು ಒತ್ತಾಯಿಸಿದ್ದಾರೆ.
ಪೆಗಾಸಸ್ ಬಳಸಿ ಪ್ರಶಾಂತ್ ಕಿಶೋರ್ ಮೇಲೆ ಕಣ್ಗಾವಲು: ಮಮತಾ
''ನನ್ನ ಫೋನ್ ಟ್ಯಾಪ್ ಮಾಡಲಾಗಿದೆ. ಇದು ರಾಹುಲ್ ಗಾಂಧಿಯ ಗೌಪ್ಯತೆಯ ವಿಷಯವಲ್ಲ. ನಾನು ವಿರೋಧ ಪಕ್ಷದ ನಾಯಕ. ನಾನು ಜನರ ಪರವಾಗಿ ದನಿ ಎತ್ತುತ್ತೇನೆ. ಹಾಗಾಗಿ ಇದು ಜನರ ದನಿಗಳ ಮೇಲಿನ ದಾಳಿ,'' ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಹಾಗೆಯೇ ''ಗೃಹ ಸಚಿವ ಅಮಿತ್ ಶಾ ಈ ಪೆಗಾಸಸ್ ಹಗರಣದ ಹಿನ್ನೆಲೆ ರಾಜೀನಾಮೆ ನೀಡಬೇಕು. ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಬೇಕು,'' ಎಂದು ಕೂಡಾ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
''ನಾನು ಈ ಪೆಗಾಸಸ್ ಬೇಹುಗಾರಿಕೆ ಮೋದಿ ಸರ್ಕಾರದ ನಿರ್ದೇಶನದ ಮೇರೆಗೆ ನಡೆಸಲಾಗಿದೆಯೇ ಎಂದು ಸರ್ಕಾರದಿಂದ ತಿಳಿದುಕೊಳ್ಳಲು ಪ್ರಯತ್ನಿಸಿದೆ. ಒಂದು ವೇಳೆ ಸರ್ಕಾರ ಈ ಬೇಹುಗಾರಿಕೆಗೆ ಆದೇಶ ನೀಡದಿದ್ದರೆ, ತನಿಖೆಗೆ ಏಕೆ ಆದೇಶ ನೀಡುತ್ತಿಲ್ಲ,'' ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಪೆಗಾಸಸ್ ಬೇಹುಗಾರಿಕೆ ಬಗ್ಗೆ ಎಸ್ಐಟಿ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ
"ಪೆಗಾಸಸ್ ಅನ್ನು ಇಸ್ರೇಲಿ ರಾಜ್ಯವು ಆಯುಧವೆಂದು ಹೇಳಿದೆ. ಆ ಶಸ್ತ್ರಾಸ್ತ್ರವನ್ನು ಭಯೋತ್ಪಾದಕರ ವಿರುದ್ಧ ಬಳಸಬೇಕಾಗಿದೆ. ಆದರೆ ನಮ್ಮ ಪ್ರಧಾನಿ ಮತ್ತು ಗೃಹ ಸಚಿವರು ಈ ಶಸ್ತ್ರಾಸ್ತ್ರವನ್ನು ಭಾರತದ ರಾಜ್ಯ ಮತ್ತು ನಮ್ಮ ಸಂಸ್ಥೆಗಳ ವಿರುದ್ಧ ಬಳಸಿದ್ದಾರೆ. ರಾಜಕೀಯವಾಗಿ ಈ ಪೆಗಾಸಸ್ ಅನ್ನು ದುರುಪಯೋಗ ಮಾಡಿಕೊಂಡಿದ್ದಾರೆ," ಎಂದು ಕೂಡಾ ಹೇಳಿದ್ದಾರೆ.
"ಇದು ನಮ್ಮ ದೇಶದ ಪ್ರಜಾಪ್ರಭುತ್ವದ ಅಡಿಪಾಯಗಳ ಮೇಲಿನ ಆಕ್ರಮಣವಾಗಿದೆ. ಇಇದನ್ನು ಕೂಲಂಕಷವಾಗಿ ತನಿಖೆ ಮಾಡಬೇಕು ಮತ್ತು ಜವಾಬ್ದಾರರನ್ನು ಗುರುತಿಸಿ ಶಿಕ್ಷಿಸಬೇಕು. ಸುಪ್ರೀಂ ಕೋರ್ಟ್ನ ಮೇಲ್ವಿಚಾರಣೆಯಲ್ಲಿ ನ್ಯಾಯಾಂಗ ವಿಚಾರಣೆ ನಡೆಸಬೇಕು," ಎಂದು ಆರೋಪಿಸಿದರು.
ಇಸ್ರೇಲಿ ಕಂಪೆನಿ ಎನ್ಎಸ್ಒ ಗ್ರೂಪ್ಸ್ ಪೆಗಾಸಸ್ ಸ್ಪೈವೇರ್ ಅನ್ನು ಭಾರತದಲ್ಲಿ 300 ಕ್ಕೂ ಹೆಚ್ಚು ಮೊಬೈಲ್ ಫೋನ್ ಸಂಖ್ಯೆಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಜಾಗತಿಕ ಸಹಕಾರಿ ತನಿಖಾ ಯೋಜನೆಯು ಬಹಿರಂಗಪಡಿಸಿದೆ. ಈ ವರದಿಯು ಮಾನ್ಸೂನ್ ಅಧಿವೇಶನದಲ್ಲಿ ಭಾರೀ ಕೋಲಾಹಲ ಸೃಷ್ಟಿ ಮಾಡಿದೆ.
(ಒನ್ಇಂಡಿಯಾ ಸುದ್ದಿ)