ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಹುಲ್ ಗಾಂಧಿ, ತಿರಸ್ಕರಿಸಿದ CWC
ನವದೆಹಲಿ, ಮೇ 25: ಲೋಕಸಭೆ ಚುನಾವಣೆಯಲ್ಲಿನ ಹೀನಾಯ ಪ್ರದರ್ಶನದ ನಂತರ ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆ ನಡೆದಿದ್ದು, ಈ ಸಂದರ್ಭದಲ್ಲಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜೀನಾಮೆಗೆ ಮುಂದಾಗಿದ್ದರು. ಆದರೆ ಕಾರ್ಯಕಾರಿಣಿ ಸದಸ್ಯರು ರಾಹುಲ್ ಗಾಂಧಿ ರಾಜೀನಾಮೆಯನ್ನು ತಿರಸ್ಕರಿಸಿದರು.
CWC ಸಭೆಯ ನಂತರ ಕಾಂಗ್ರೆಸ್ ನಾಯಕರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಮಾತನಾಡಿ, ರಾಹಲ್ ಗಾಂಧಿ ರಾಜೀನಾಮೆ ಸಲ್ಲಿಸಿದ್ದು ಸತ್ಯ, ಆದರೆ ಅದನ್ನು ಸಿಡಬ್ಲ್ಯುಸಿ ಮುಖಂಡರು ತಿರಸ್ಕರಿಸಿದ್ದಾರೆ ಎಂದರು.
ರಾಹುಲ್ ಗಾಂಧಿ ಇನ್ನೂ ರಾಜೀನಾಮೆ ಸಲ್ಲಿಸಿಲ್ಲ : ಕಾಂಗ್ರೆಸ್ ಸ್ಪಷ್ಟನೆ
ಮೊದಲಿಗೆ ರಾಹುಲ್ ಗಾಂಧಿ ಅವರು ರಾಜೀನಾಮೆ ನೀಡುವ ಪ್ರಸ್ತಾಪವೇ ಬರಲಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿದ್ದಾಗಿ ಸುದ್ದಿಯಾಗಿತ್ತು. ಆದರೆ ಆಗಿನ್ನೂ ಕಾರ್ಯಕಾರಿಣಿ ಸಭೆ ಮುಗಿದಿರಲಿಲ್ಲ. ಸಭೆಯ ನಂತರ ಹೊರಬಂದ ಮಾಹಿತಿಯ ಪ್ರಕಾರ ಪಕ್ಷದ ಕಳಪೆ ಪ್ರದರ್ಶನದಿಂದಾಗಿ ರಾಹುಲ್ ಗಾಂಧಿ ಅವರು ರಾಜೀನಾಮೆಗೆ ಮುಂದಾದರು. ಆದರೆ ಕಾರ್ಯಕಾರಿಣಿ ಸದಸ್ಯರು ಯಾವುದೇ ಕಾರಣಕ್ಕೂ ಅವರ ರಾಜೀನಾಮೆಯನ್ನು ಅಂಗೀಕರಿಸುವುದಿಲ್ಲ ಎಂದರು ಎಂಬುದು ತಿಳಿದುಬಂದಿದೆ.
ಗಾಂಧಿ ಹೀನಾಯ ಸೋಲಿಗೆ 10 ಪ್ರಮುಖ ಕಾರಣಗಳು
ಅಷ್ಟೇ ಅಲ್ಲದೆ, ಸಭೆಯಲ್ಲಿ ರಾಹುಲ್ ಗಾಂಧಿ ಅವರ ಪರಿಶ್ರಮವನ್ನು ಹೊಗಳಲಾಗಿದ್ದು, 'ಕಾಂಗ್ರೆಸ್ ಅಧ್ಯಕ್ಷರು ಪಕ್ಷವನ್ನು ಗೆಲ್ಲಿಸಲು ಸಾಕಷ್ಟು ಪರಿಶ್ರಮ ಹಾಕಿದ್ದರು. ಆದರೆ ಅದೃಷ್ಟ ಕೈಕೊಟ್ಟಿತು. ಇದು ಅವರ ತಪ್ಪಲ್ಲ' ಎಂದು ಕಾರ್ಯಕಾರಿಣಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಸಭೆಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್, ಪ್ರಿಯಾಂಕಾ ವಾದ್ರಾ, ಜ್ಯೋತಿರಾಧಿತ್ಯ ಸಿಂಧಿಯಾ, ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ, ಶೀಲಾ ದೀಕ್ಷಿತ್ ಮುಂತಾದವರು ಭಾಗಿಯಾಗಿದ್ದರು.
ಏಪ್ರಿಲ್ 11 ರಿಂದ ಮೇ 19 ರವರೆಗೆ ಏಳು ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣೆಯ ಫಲಿತಾಂಶ ಮೇ 23 ರಂಮದು ಹೊರಬಿದ್ದಿತ್ತು. ಒಟ್ಟು 542 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ 353 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಕೇವಲ 91 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.