ಹಿರಿಯ ಕಾಂಗ್ರೆಸ್ಸಿಗರನ್ನು ಬೆಚ್ಚುವಂತೆ ಮಾಡಿದ ರಾಹುಲ್ ನಿರ್ಧಾರ
Recommended Video
ನವದೆಹಲಿ, ಜೂನ್ 26: ಲೋಕಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿದ ಹಿನ್ನಲೆಯಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ತೊರೆಯುವ ನನ್ನ ನಿರ್ಧಾರ ಅಚಲವಾಗಿದೆ, ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಗುಡುಗುತ್ತಿದ್ದಂತೆ ಹಿರಿಯ ಕಾಂಗ್ರೆಸ್ಸಿಗರು ಅಕ್ಷರಶಃ ಬೆಚ್ಚಿದ್ದಾರೆ.
ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಬುಧವಾರದಂದು ನಡೆದ ಸಭೆಯಲ್ಲಿ ಮತ್ತೊಮ್ಮೆ ರಾಹುಲ್ ಗಾಂಧಿ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಲು ಸಾಧ್ಯವಿಲ್ಲ, ಈ ಬಗ್ಗೆ ಚರ್ಚೆ ಬೇಡ ಎಂದರು ಎಂಬ ಸುದ್ದಿ ಬಂದಿದೆ.
ಕಾಂಗ್ರೆಸ್ ಮುಖಂಡರಾದ ಮನೀಶ್ ತಿವಾರಿ ಹಾಗೂ ಶಶಿ ತರೂರ್ ಅವರು ರಾಹುಲ್ ಗಾಂಧಿ ಅವರ ಮನ ಒಲಿಸಲು ಯತ್ನಿಸಿ ವಿಫಲರಾಗಿದ್ದಾರೆ. ರಾಜೀನಾಮೆ ನೀಡದೆ, ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವಂತೆ ಆಗ್ರಹಿಸಿ, ರಾಹುಲ್ ನಿವಾಸದೆದುರು ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬಂತು ಅಚ್ಚರಿಯ ಹೆಸರು!
ಮೇ 23ರಂದು ಲೋಕಸಭೆ ಚುನಾವಣೆ ಫಲಿತಾಂಶ ಹೊರ ಬಂದ ಬಳಿಕ ಕಾಂಗ್ರೆಸ್ ಹೀನಾಯ ಸೋಲು ಕಂಡಿದ್ದರಿಂದ ರಾಹುಲ್ ಗಾಂಧಿ ನೊಂದಿದ್ದರು. ಮೇ 25ರಂದು ಕರೆಯಲಾಗಿದ್ದ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ತಮ್ಮ ನಿರ್ಧಾರವನ್ನು ಅವರು ಪ್ರಕಟಿಸಿದ್ದರೂ, ಸಭೆ ಒಪ್ಪಿರಲಿಲ್ಲ.
ಅಲ್ಲದೆ, ಇಡೀ ದೇಶದಾದ್ಯಂತ ಎಲ್ಲ ಹಂತಗಳಲ್ಲಿಯೂ ಬದಲಾವಣೆಗಳನ್ನು ಜಾರಿಗೆ ತರುವಂತೆ ಅವರನ್ನು ಕೋರಿದ್ದರು. ಸೋನಿಯಾ ಗಾಂಧಿ ಅವರು ಅನಾರೋಗ್ಯದ ಕಾರಣ ಅಧ್ಯಕ್ಷ ಸ್ಥಾನ ಪಡೆಯುವುದಿಲ್ಲ.ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಈ ರೇಸಿನಿಂದ ಹೊರಗಿಡುವಂತೆ ರಾಹುಲ್ ಗಾಂಧಿ ಸೂಚಿಸಿದ್ದರು.
ಇದರ ಜೊತೆಗೆ ಬಿಜೆಪಿಯಲ್ಲಿ ಕಾರ್ಯಾಧ್ಯಕ್ಷ ಸ್ಥಾನ ನೇಮಕವಾದಂತೆ ಕಾಂಗ್ರೆಸ್ ನಲ್ಲೂ ಈ ಹುದ್ದೆಯನ್ನು ಸೃಷ್ಟಿಸಲು ಒಂದು ತಿಂಗಳಿನಿಂದ ಚರ್ಚೆ ನಡೆದಿದೆ. ಈ ಮೂಲಕ ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅವರನ್ನು ಮುಂದುವರೆಸಿದರೂ, ಕಾರ್ಯಾಧ್ಯಕ್ಷರಿಗೆ ಹೊಣೆ ನೀಡುವುದು ಹೈಕಮಾಂಡ್ ನ ನಿರ್ಧಾರವಾಗಿತ್ತು. ಆದರೆ, ಈ ಹುದ್ದೆ, ನೇಮಕಾತಿ ಬಗ್ಗೆ ಯಾರೂ ಆಸಕ್ತ ತೋರಲಿಲ್ಲ. ಹೀಗಾಗಿ, ಪೂರ್ಣಾವಧಿ ಹೊಸ ಅಧ್ಯಕ್ಷರನ್ನು ನೇಮಿಸುವುದು ಅನಿವಾರ್ಯವಾಗಿದೆ.