'ಹಿಂದೂ ಧರ್ಮದ ಬಗ್ಗೆ ರಾಹುಲ್ ಗಾಂಧಿಯಿಂದ ತಿಳಿಯುವ ಸ್ಥಿತಿ ಬಾರದಿರಲಿ'
ನವದೆಹಲಿ, ಡಿಸೆಂಬರ್ 1: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕೆಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಶನಿವಾರ ತಿರುಗೇಟು ನೀಡಿದ್ದಾರೆ. ಹಿಂದೂ ಆಗಿರುವುದರ ಅರ್ಥ ಪ್ರಧಾನಮಂತ್ರಿಗೆ ಗೊತ್ತಿಲ್ಲ ಎಂದು ರಾಹುಲ್ ಗಾಂಧಿ ಟೀಕೆ ಮಾಡಿದ್ದರು.
ಆ ಟೀಕೆಗೆ ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸಿದ ಅವರು, ಆ ಮಾತನ್ನು ಅವರು ಯಾಕೆ ಹೇಳಿದ್ದಾರೆ ಅಂದರೆ, ಆತ ಹಾಗೂ ಕಾಂಗ್ರೆಸ್ ನಲ್ಲೇ ರಾಹುಲ್ ಗಾಂಧಿಯ ಧರ್ಮ ಹಾಗೂ ಜಾತಿ ಬಗ್ಗೆ ಗೊಂದಲ ಇದೆ. ವರ್ಷಗಳಿಂದ ರಾಹುಲ್ ಗಾಂಧಿ ಅವರನ್ನು ಜಾತ್ಯತೀತ ನಾಯಕ ಎಂದು ಬಿಂಬಿಸುತ್ತಾ ಬರಲಾಗುತ್ತಿದೆ ಎಂದಿದ್ದಾರೆ.
ಮೋದಿಗೆ ಹಿಂದುತ್ವದ ಮೂಲಭೂತ ತತ್ವವೇ ಗೊತ್ತಿಲ್ಲ ಎಂದ ರಾಹುಲ್ ಗಾಂಧಿ
ಟೀಕೆ ಮುಂದುವರಿಸಿದ ಸುಷ್ಮಾ ಸ್ವರಾಜ್, ಆದರೆ ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ ಅವರಿಗೆ ಗೊತ್ತಾಗಿ ಬಿಡುತ್ತದೆ; ಹಿಂದೂಗಳು ಬಹುಸಂಖ್ಯಾತರಿದ್ದಾರೆ. ಆಗ ಈ ಇಮೇಜ್ ಅನ್ನು ಸೃಷ್ಟಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ 'ಜನಿವಾರ ಧಾರಿ ಬ್ರಾಹ್ಮಣ' ಎನ್ನುವ ವಿಚಾರ ನನಗೆ ಈಗ ತಿಳಿಯಿತು. ಆದರೆ ಆ ಜನಿವಾರ ಧಾರಿ ಬ್ರಾಹ್ಮಣರ ಬುದ್ಧಿ ಇಷ್ಟೊಂದು ವೃದ್ಧಿಯಾಗಿದೆ ಎಂದರೆ ಅವರಿಂದಲೇ ಹಿಂದೂ ಧರ್ಮ ಎಂದರೇನು ಎನ್ನುವುದನ್ನು ಕಲಿತುಕೊಳ್ಳುವ ಪರಿಸ್ಥಿತಿ ಬಂದಿದೆ. ಆದರೆ ದೇವರೇ, ರಾಹುಲ್ ಗಾಂಧಿಯವರಿಂದ ಹಿಂದೂ ಧರ್ಮ ಅಂದರೇನು ಎಂದು ತಿಳಿದುಕೊಳ್ಳುವಂತಹ ಸಂದರ್ಭ ಎಂದಿಗೂ ಬಾರದಿರಲಿ ಎಂದು ಸುಷ್ಮಾ ಸ್ವರಾಜ್ ಲೇವಡಿ ಮಾಡಿದ್ದಾರೆ.