ಮೋದಿಗಾಗಿ ರಘು ದೀಕ್ಷಿತ್ ಹರಿಸಲಿದ್ದಾರೆ ಸಂಗೀತ ಸುಧೆ
ನವದೆಹಲಿ, ಸೆಪ್ಟೆಂಬರ್ 23 : ಗುರುವಾರ, ಸೆಪ್ಟೆಂಬರ್ 24ರಂದು ಒಂದಕ್ಕೊಂದು ಕೊಂಡಿ ಹಾಕಿಕೊಂಡಿರುವ ಎರಡು ಕಾರ್ಯಕ್ರಮಗಳು ವಿಶ್ವದ ಗಮನ ಸೆಳೆಯಲಿವೆ. ಒಂದು, ಮೈಸೂರಿನ ಕನ್ನಡಿಗ ರಘು ದೀಕ್ಷಿತ್ ನವದೆಹಲಿಯಲ್ಲಿ ಹಾಡಿನ ಸುಧೆ ಹರಿಸಲಿರುವುದು, ಎರಡು, ಪ್ರಧಾನಿ ನರೇಂದ್ರ ಮೋದಿ ಅಮೆರಿಕದಲ್ಲಿ ವಿಶ್ವಸಂಸ್ಥೆಯನ್ನು ಉದ್ದೇಶಿಸಿ ಮಾತಿನ ಲಹರಿ ಹರಿಸಲಿರುವುದು.
ಈ ಎರಡು ಘಟನೆಗಳು ಒಂದಕ್ಕೊಂದು ಹೇಗೆ ಜೋಡಿಯಾಗಿವೆ ಎಂಬ ಅನುಮಾನ ನಿಮಗಿದ್ದರೆ, ಇಲ್ಲಿದೆ ನೋಡಿ ಅದಕ್ಕೆ ವಿವರಣೆ.
ಬಡತನ, ಅಸಮಾನತೆ ಮತ್ತು ತಾಪಮಾನ ಬದಲಾವಣೆಯನ್ನು ಮುಂದಿನ 15 ವರ್ಷಗಳಲ್ಲಿ ಹತ್ತಿಕ್ಕುವ ಉದ್ದೇಶದಿಂದ ವಿವಿಧ ರಾಷ್ಟ್ರಗಳ ನಾಯಕರು ಒಂದೆಡೆ ಸೇರುತ್ತಿರುವ ಸಂದರ್ಭದಲ್ಲಿ, 'ಸೇವ್ ದಿ ಚಿಲ್ಡ್ರನ್' ಸಂಸ್ಥೆ ಆಯೋಜಿಸಿರುವ ದೆಹಲಿ ಕಾರ್ಯಕ್ರಮ ನರೇಂದ್ರ ಮೋದಿಗೆ ಮತ್ತು ವಿಶ್ವದ ನಾಯಕರಿಗೆ ಈ ವಿಷಯದ ಪ್ರಾಮುಖ್ಯತೆ ಕುರಿತು ಸಂದೇಶ ರವಾನಿಸಲಿದೆ. [ಸೈಕೊ ಚಿತ್ರವನ್ನು ಕರುಣದಿ ಕಾಯೋ ಮಹದೇಶ್ವರ]
ದೆಹಲಿಯ ಪುರಾನಾ ಕಿಲ್ಲಾದಲ್ಲಿ ಸೆಪ್ಟೆಂಬರ್ 24ರ ಸಂಜೆ 7 ಗಂಟೆಗೆ, ದಿ ರಘು ದೀಕ್ಷಿತ್ ಪ್ರಾಜೆಕ್ಟ್ ತಂಡ 'ಲೈಟ್ ದಿ ವೇ' ಲೈವ್ ಸಂಗೀತ ಕಾರ್ಯಕ್ರಮದ ಮೂಲಕ, ಮುಂದಿನ ಪೀಳಿಗೆಯ ಭವಿತವ್ಯಕ್ಕಾಗಿ ಸಂಗೀತದ ಜ್ಯೋತಿ ಬೆಳಗಲಿದ್ದಾರೆ. ಸಾರ್ವಜನಿಕರು ಕೈಯಲ್ಲಿ ಕ್ಯಾಂಡಲ್ ಹಿಡಿದು ಪ್ರಧಾನಿಗೆ ಬೆಂಬಲ ವ್ಯಕ್ತಪಡಿಸಲಿದ್ದಾರೆ. ನೃತರುತ್ಯ ಡಾನ್ಸ್ ಕಂಪನಿ ನೃತ್ಯ ಪ್ರದರ್ಶಿಸಲಿದೆ. ಈ ಕಾರ್ಯಕ್ರಮ ಎಲ್ಲರಿಗೂ ಮುಕ್ತವಾಗಿದೆ.
"ಪ್ರಧಾನಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸುತ್ತಿರುವುದು ಭಾರತದ ಎಲ್ಲರಿಗೂ ಹೆಮ್ಮೆಯ ಸಂಗತಿ. ಅಲ್ಲಿ ಅವರು ತೆಗೆದುಕೊಳ್ಳುವ ನಿರ್ಣಯ ಭಾರತದ ಪ್ರತಿಯೊಬ್ಬರನ್ನೂ ತಟ್ಟಲಿದೆ. ಇಡೀ ಭಾರತ ಪ್ರಧಾನಿ ಬೆನ್ನ ಹಿಂದಿದೆ ಎಂಬ ಸಂದೇಶವನ್ನು ವಿಶ್ವಕ್ಕೆ ಸಾರುವ ಈ (ದೆಹಲಿ) ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನನ್ನ ಸೌಭಾಗ್ಯ" ಎಂದು ರಘು ದೀಕ್ಷಿತ್ ಸಂತಸ ವ್ಯಕ್ತಪಡಿಸಿದ್ದಾರೆ.
ಸೇವ್ ದಿ ಚಿಲ್ಡ್ರನ್ ನಿರ್ದೇಶಕರಾಗಿರುವ ಡಾ. ಸುದೀಪ್ ಸಿಂಗ್ ಗಡೋಕ್ ಅವರು, "ಬಡತನ ನಿವಾರಣೆಗಾಗಿ ಇಂಥದೊಂದು ಜಾಗತಿಕ ಕಾರ್ಯಕ್ರಮ ಆಯೋಜಿತಗೊಂಡಿರುವುದು ನಿಜಕ್ಕೂ ಪ್ರಶಂಸನೀಯ. ಇಂಥ ಅವಕಾಶವನ್ನು ಜಾಗತಿಕ ನಾಯಕರು ಕಳೆದುಕೊಳ್ಳಬಾರದು ಎಂಬ ಸಂದೇಶವನ್ನು ನಾವು ರವಾನಿಸಬೇಕಾಗಿದೆ" ಎನ್ನುತ್ತಾರೆ. ದೆಹಲಿ ಮಾತ್ರವಲ್ಲ, ಉತ್ತರಪ್ರದೇಶ, ರಾಜಸ್ತಾನ ಮತ್ತು ಬಿಹಾರದಲ್ಲಿಯೂ ಸಾರ್ವಜನಿಕರು ದೀಪ ಬೆಳಗಿಸಿ ಪ್ರಧಾನಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಲಿದ್ದಾರೆ.