ರಫೇಲ್ ಒಪ್ಪಂದ ತೀರ್ಪು ಮರುಪರಿಶೀಲನೆ: ಆದೇಶ ಕಾಯ್ದಿರಿಸಿದ ಸುಪ್ರೀಂಕೋರ್ಟ್
ನವದೆಹಲಿ, ಮೇ 10: ರಫೇಲ್ ಒಪ್ಪಂದದ ಕುರಿತು ಡಿಸೆಂಬರ್ನಲ್ಲಿ ನೀಡಿದ್ದ ತೀರ್ಪಿನ ಮರುಪರಿಶೀಲನೆಗೆ ಒಳಪಡಿಸಿರುವ ಸುಪ್ರೀಂಕೋರ್ಟ್, ಅದರ ಆದೇಶವನ್ನು ಕಾಯ್ದಿರಿಸಿದೆ.
ರಫೇಲ್ ಒಪ್ಪಂದದಲ್ಲಿ ಯಾವುದೇ ಹಗರಣವಾಗಿಲ್ಲ ಎಂಬುದಾಗಿ ಕೇಂದ್ರ ಸರ್ಕಾರದ ಪರ ಡಿಸೆಂಬರ್ನಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಮಾಜಿ ಮುಖಂಡರಾದ ಅರುಣ್ ಶೌರಿ ಮತ್ತು ಯಶ್ವಂತ್ ಸಿನ್ಹಾ, ವಕೀಲರಾದ ಪ್ರಶಾಂತ್ ಭೂಷಣ್ ಮತ್ತು ಸಂಜಯ್ ಸಿಂಗ್ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
ರಫೇಲ್ ಡೀಲ್ ಬಗ್ಗೆ ಸುಳ್ಳು ಸಂಗತಿ ಬಿಂಬಿಸಲು ಯತ್ನ: ಸರ್ಕಾರ ಆರೋಪ
ಈ ಅರ್ಜಿಗೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ಅದನ್ನು ವಜಾಗೊಳಿಸಿದ್ದ ನ್ಯಾಯಾಲಯ ತೀರ್ಪನ್ನು ಮರುಪರಿಶೀಲನೆಗೆ ಒಳಪಡಿಸಲು ಒಪ್ಪಿಕೊಂಡಿತ್ತು. ತಮ್ಮ ಅರ್ಜಿಯಲ್ಲಿ ರಫೇಲ್ ಒಪ್ಪಂದದ ಕೆಲವು ಮಹತ್ವದ ದಾಖಲೆಗಳನ್ನು ಹೊಸದಾಗಿ ಅಡಕ ಮಾಡಿರುವುದಾಗಿ ಅರ್ಜಿದಾರರು ಹೇಳಿದ್ದರು.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿಗಳಾದ ಎಸ್ಕೆ ಕೌಲ್ ಮತ್ತು ಕೆ.ಎಂ. ಜೋಸೆಫ್ ಅವರನ್ನು ಒಳಗೊಂಡ ನ್ಯಾಯಪೀಠ ರಫೇಲ್ ತೀರ್ಪಿನ ಪುನರ್ ಪರಿಶೀಲನೆ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಿತು. ಶುಕ್ರವಾರ ನಡೆದ ವಿಚಾರಣೆ ವೇಳೆ ಅರ್ಜಿದಾರರು ಮತ್ತು ಕೇಂದ್ರ ಸರ್ಕಾರದ ಪರ ವಕೀಲ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ವಾದ ಮಂಡಿಸಿದರು.
ರಫೇಲ್ ಡೀಲ್ ಬಳಿಕ ಅಂಬಾನಿ ಸಾಲ ಮನ್ನಾ ಮಾಡಿತೇ ಫ್ರಾನ್ಸ್ ಸರ್ಕಾರ?
ರಕ್ಷಣಾ ಖರೀದಿ ಸಮಿತಿ ಸಭೆಯಲ್ಲಿ ಮೂವರು ಸದಸ್ಯರು ವಿಮಾನದ ದರ ಹೆಚ್ಚಳದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಅದನ್ನು ಪರಿಗಣಿಸದೆ ಕೇಂದ್ರ ಸರ್ಕಾರ ಒಪ್ಪಂದದಲ್ಲಿ ಮುಂದುವರಿದಿತ್ತು. ಅಲ್ಲದೆ, ಈ ಒಪ್ಪಂದ ನಡೆಯುವಾಗ ಆರಂಭದಿಂದಲೂ ಉದ್ಯಮಿ ಅನಿಲ್ ಅಂಬಾನಿ ಸರ್ಕಾರದೊಂದಿಗೆ ಇದ್ದರು. ಅವರಿಗೆ ಲಾಭ ತಂದುಕೊಡುವ ಸಲುವಾಗಿ ಫ್ರಾನ್ಸ್ನಲ್ಲಿ ತೆರಿಗೆ ವಿನಾಯಿತಿ ನೀಡಲಾಗಿತ್ತು ಎಂದು ಅರ್ಜಿದಾರರು ಆರೋಪಿಸಿದರು.
ರಫೇಲ್ ತೀರ್ಪು: ಕೇಂದ್ರಕ್ಕೆ ಹಿನ್ನಡೆ, ಸತ್ಯಮೇವ ಜಯತೆ ಎಂದ ಕಾಂಗ್ರೆಸ್!
ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಪೀಠ, ರಫೇಲ್ ಒಪ್ಪಂದದ ಕುರಿತು ತನಿಖೆ ನಡೆಸುವ ಅಗತ್ಯವಿಲ್ಲ ಎಂಬ ಕಳೆದ ವರ್ಷದ ಡಿಸೆಂಬರ್ 14ರಂದು ನೀಡಿದ ತೀರ್ಪಿನ ಕುರಿತಾದ ಆದೇಶವನ್ನು ಕಾಯ್ದಿರಿಸಿತು.